ನರೇಂದ್ರ ಮೋದಿ ಹತ್ಯೆಗೆ 'ಮಚಲಿ 5' ಕೋಡ್ ವರ್ಡ್!
ನವದೆಹಲಿ, ಅ. 30 : ಪಟ್ನಾದಲ್ಲಿ ಅ.27ರಂದು ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನೇ ಮುಖ್ಯ ಗುರಿಯಾಗಿಸಿಕೊಂಡು ಹತ್ಯೆಗೈಯಲು ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಎನ್ಐಎ ನಡೆಸಿದ ತನಿಖೆಯಿಂದ ಬಯಲಾಗಿದೆ. ಮೋದಿ ಹತ್ಯೆಗೈಯಲು 'ಮಚಲಿ 5' ಎಂಬ ಸಾಂಕೇತಿಕ ಪದವನ್ನೂ ಬಳಸಲಾಗಿತ್ತು.
ಭಾನುವಾರ ನಡೆದ ಹೂಂಕಾರ್ ಸಭೆಯಲ್ಲಿ, ನರೇಂದ್ರ ಮೋದಿಯನ್ನು ಹತ್ಯೆಗೈಯಲು ಮಾನವ ಬಾಂಬ್ ಸಿದ್ಧಪಡಿಸಲಾಗಿತ್ತು ಎಂದು ಬಂಧಿತನಾಗಿರುವ ಶಂಕಿತ ಉಗ್ರಗಾಮಿ ಇಮ್ತಿಯಾಜ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಇಂಡಿಯನ್ ಮುಜಾಹಿದ್ದಿನ್ ಕೊಲೆಯ ಸಂಚು ರೂಪಿಸಿತ್ತು. ಆದರೆ, ಬಾಂಬ್ ಮೊದಲೇ ಸಿಡಿದಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಹೂಂಕಾರ್ ಸಭೆ ನಡೆದ ಗಾಂಧಿ ಮೈದಾನದಲ್ಲಿ ಒಟ್ಟು 18 ಬಾಂಬ್ ಗಳನ್ನು ಸ್ಫೋಟಕ್ಕೆ ಬಳಸಲಾಗಿತ್ತು. ಬಲ್ಲ ಮಾಹಿತಿ ಪ್ರಕಾರ, ಹಾಸ್ಟೆಲ್ ಗಳಲ್ಲಿ ವಾಸವಿದ್ದ ಕೆಲ ವಿದ್ಯಾರ್ಥಿಗಳನ್ನು ಇದಕ್ಕಾಗಿ ನಿಯೋಜಿಸಲಾಗಿತ್ತು ಮತ್ತು ಅವರಿಗೆ ತಲಾ 10 ಸಾವಿರ ರು. ನೀಡಲಾಗಿತ್ತು. ಬಾಂಬ್ ಸ್ಫೋಟಿಸಿ, ಗದ್ದಲವೆಬ್ಬಿಸಿ ಕಾಲ್ತುಳಿತ ಆಗುವಂತೆ ಮಾಡುವುದು ಒಂದು ಯೋಜನೆಯಾಗಿತ್ತು.
ಇಮ್ತಿಯಾಜ್ ಮತ್ತು ಆತನ ಸ್ನೇಹಿತನನ್ನು ಮಾನವ ಬಾಂಬರ್ಗಳಾಗಿ ಬಳಸಿ ವೇದಿಕೆಯ ಬಳಿ ಬಾಂಬ್ ಸ್ಫೋಟಿಸಲು ಯೋಜನೆ ಹೂಡಲಾಗಿತ್ತು. ಆದರೆ, ಅದೃಷ್ಟವಶಾತ್ ಅವರ ಯೋಜನೆ ಕೈಗೂಡಲಿಲ್ಲ. ಅಲ್ಲಿಂದ ಪರಾರಿಯಾಗುವಾಗ ಇಮ್ತಿಯಾಜ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹತ್ಯೆಗೆ ಬಳಸಲಾಗಿದ್ದ ಮತ್ತೊಬ್ಬ ತೀವ್ರವಾಗಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಅಸುನೀಗಿದ.
ಗಾಂಧಿ ಮೈದಾನ ಮತ್ತು ಸುತ್ತಮುತ್ತ ನಡೆದ 7 ಸ್ಫೋಟಗಳಲ್ಲಿ ಆರು ಜನರು ಸಾವಿಗೀಡಾಗಿ ಹಲವಾರು ಜನರು ಗಾಯಗೊಂಡರು. ಎಂಟು ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಯಿತು. ಉಳಿತ ಮೂರು ಬಾಂಬ್ ಗಳಿಗೆ ಇನ್ನೂ ಹುಡುಕಾಟ ನಡೆದಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಬಂಧಿತನಾಗಿರುವ ಇಂಡಿಯನ್ ಮುಜಾಹಿದ್ದಿನ್ ನಾಯಕ ಯಾಸಿನ್ ಭಟ್ಕಳ್ ಕೂಡ ವಿಚಾರಣೆಯಲ್ಲಿ ಮೋದಿ ಅವರು ಐಎಂ ಮುಖ್ಯ ಗುರಿಯಾಗಿದ್ದರು ಎಂಬ ವಿಷಯ ಬಹಿರಂಗಪಡಿಸಿದ್ದಾನೆ. ಮೋದಿ ಸೇರಿದಂತೆ 10 ಪ್ರಮುಖ್ಯ ವ್ಯಕ್ತಿಗಳು ಹಂತಕರ ಪಟ್ಟಿಯಲ್ಲಿದ್ದು, ಅವರನ್ನು ಹತ್ಯೆಗೈದರೆ ಅಂತಾರಾಷ್ಟ್ರೀಯ ಮೂಲಗಳಿಂದ ಭಾರೀ ಪ್ರಮಾಣದಲ್ಲಿ ಹಣದ ಹೊಳೆ ಹರಿದುಬರಲಿದೆ ಎಂಬ ಸಂಗತಿಯನ್ನು ಭಟ್ಕಳ್ ಹೇಳಿದ್ದಾನೆ.
ನವೆಂಬರ್ 2ರಂದು ನರೇಂದ್ರ ಮೋದಿ ಅವರು ಬಿಹಾರಕ್ಕೆ ಮತ್ತೆ ಭೇಟಿ ನೀಡಲಿದ್ದು, ಸ್ಫೋಟದಲ್ಲಿ ಸತ್ತವರ ಕುಟುಂಬದವರನ್ನು ಮತ್ತು ಗಾಯಾಳುಗಳನ್ನು ಭೇಟಿ ಮಾಡಲಿದ್ದಾರೆ. ನವೆಂಬರ್ 17ರಂದು ಬೆಂಗಳೂರಿನಲ್ಲಿ ಮೋದಿ ಅವರ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಇದಕ್ಕಾಗಿ ಭಾರೀ ಭದ್ರತೆ ನಿಯೋಜಿಸಲಾಗುತ್ತಿದೆ.