ಅನೈತಿಕ ಸಂಬಂಧ: ಅನ್ಯೋನ್ಯವಾಗಿ ಬಾಳುತ್ತಿರುವ ಪತಿಪತ್ನಿಗೆ ಸುಪ್ರೀಂ ತೀರ್ಪು ಪ್ರೇರಣೆಯಾಗದಿರಲಿ
'ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ, ಪಂಚ ಕನ್ಯಾಃ ಸ್ಮರೇನ್ನಿತ್ಯಂ ಸರ್ವ ಪಾತಕನಾಶನಂ' ಈ ಐವರು ಮಹಿಳೆಯರನ್ನು ನೆನೆಸಿಕೊಂಡರೆ, ಮಾಡಿದ ಪಾಪವೆಲ್ಲಾ ನಶಿಸಿ ಹೋಗುತ್ತದೆ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖವಾಗಿರುವ ಶ್ಲೋಕವಿದು.
ಭೀಮನ ಅಮವಾಸ್ಯೆ, ವಟಸಾವಿತ್ರಿ ವ್ರತ, ಕರ್ವಾ ಚೌತ್ ಹೀಗೆ.. ವಿವಿಧ ಪೂಜೆಗಳನ್ನು ಕೈಗೊಂಡು, ಪತ್ನಿ ತನ್ನ ಪತಿಯ ಆಯಸ್ಸು, ಶ್ರೇಯಸ್ಸಿಗಾಗಿ ದೇವರಲ್ಲಿ ಬೇಡಿಕೊಳ್ಳುವ, ಪತ್ನಿಯೇ ಅರ್ಧಾಂಗಿನಿ, ಪತಿಯೇ ಪರಮೇಶ್ವರ ಎಂದು ಅನ್ಯೋನ್ಯವಾಗಿ ಬಾಳುವ ಕುಟುಂಬಗಳು ಅದೆಷ್ಟೋ ಇವೆ. ಅದೇ ರೀತಿ, ಅನೈತಿಕ ಸಂಬಂಧದಿಂದ ಬೀದಿಪಾಲಾದ ಉದಾಹರಣೆಗಳೂ ಇವೆ.
ವ್ಯಭಿಚಾರ ಅಪರಾಧವಲ್ಲ: ಸುಪ್ರೀಂ ಐತಿಹಾಸಿಕ ತೀರ್ಪು
ಗಂಡು, ಹೆಣ್ಣು ಇಬ್ಬರೂ ಸರಿಸಮಾನರು, ಹೆಣ್ಣು ಈ ದೇಶದ ಕಣ್ಣು ಎಂದು ಹಿಂದಿನ ಮತ್ತು ಈಗಿನ ಸರಕಾರ ಹಲವು ಹೆಜ್ಜೆಗಳನ್ನು ಇಟ್ಟು, ಮಹಿಳೆಯರನ್ನು ಇನ್ನಷ್ಟು ಮುಖ್ಯವಾಹಿನಿಗೆ ತರಲು ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡು ಬರುತ್ತಲೇ ಇದೆ. ಆದರೆ, ಸರ್ವೋಚ್ಚ ನ್ಯಾಯಾಲಯ ಐಪಿಸಿ 497 ಅನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿರುವುದು, ದಾಂಪತ್ಯ ಜೀವನದ ಪಾತಿವ್ರ್ಯತೆಯನ್ನು ಪ್ರಶ್ನಿಸುವಂತಾಗಿದೆ ಎನ್ನುವ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ.
ಅನಿವಾಸಿ ಭಾರತೀಯರೊಬ್ಬರು, ಅನೈತಿಕ ಸಂಬಂಧ ಹೊಂದಿರುವ ಪತಿಗೆ, ಶಿಕ್ಷೆ ಎನ್ನುವ ಕಾನೂನು ಏನು ನಮ್ಮಲ್ಲಿದೆಯೋ, ಅದೇ ರೀತಿ ಪರಪುರುಷನ ಜೊತೆ ಪತ್ನಿಗೆ ಸಂಬಂಧವಿದ್ದರೆ, ಅವರಿಗೂ ಶಿಕ್ಷೆಯಾಗಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ, ಸುಪ್ರೀಂ ನೀಡಿದ ತೀರ್ಪಿದು.
ಅನೈತಿಕ ಸಂಬಂಧ ಅಪರಾಧವಲ್ಲ, ವ್ಯಭಿಚಾರಕ್ಕೂ ಸಿಕ್ತು ಸಮಾನತೆ?
ಸುಪ್ರೀಂಕೋರ್ಟ್ ಗುರುವಾರ (ಸೆ 27) ನೀಡಿದ ತೀರ್ಪಿನ ಒಟ್ಟಾರೆ ಸಾರಾಂಶ ಏನಂದರೆ, 'ಗಂಡ ಇನ್ನೊಬ್ಬಳ ಜೊತೆ, ಹೆಂಡತಿ ಇನ್ನೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರೆ, ಎರಡೂ ಅಪರಾಧವಲ್ಲ, ಏಕೆಂದರೆ ಇಬ್ಬರೂ ಪ್ರಬುದ್ಧರು, ಆದರೆ, ಅದು ಮದುವೆಗೆ ಸಂಬಂಧಿಸಿದ ವ್ಯಾಜ್ಯ'. ಇದು ಒಂದು ರೀತಿ ಚಂದವಾಗಿ ಬದುಕುತ್ತಿರುವ ದಂಪತಿಗಳಿಗೆ ಪ್ರಚೋದನೆ ನೀಡಿದಂತಾಗುವುದಲ್ಲವೇ ಎನ್ನುದು ಇಲ್ಲಿ ಏಳುವ ಸಹಜ ಪ್ರಶ್ನೆ.
ಆಕರ್ಷಣೆ ಹೊಂದಲು ಸ್ಪೂರ್ತಿಯಾಗಬಾರದು
ಸಮಾನತೆ ಬೇಕು ಎನ್ನುವ ವಿಚಾರವನ್ನು ಒಪ್ಪಿಕೊಳ್ಳ ಬಹುದಾದರೂ, ಸುಪ್ರೀಂಕೋರ್ಟ್ ನೀಡಿರುವ ತೀರ್ಪು, ಗಂಡ ಅಥವಾ ಹೆಂಡತಿ, ಪರಪುರುಷ ಅಥವಾ ಪರಮಹಿಳೆಯ ಮೇಲೆ ಆಕರ್ಷಣೆ ಹೊಂದಲು ಸ್ಪೂರ್ತಿಯಾಗಬಾರದು ಎನ್ನುವುದಷ್ಟೇ ಇಲ್ಲಿ ಉದ್ದೇಶ. ಈ ತೀರ್ಪಿನ ನಂತರ ಪತಿಪತ್ನಿಯ ನಡುವೆ ಏನೇ ವ್ಯತ್ಯಾಸ ಕಂಡುಬಂದರೂ, ದಾಂಪತ್ಯ ಜೀವನ ಕವಲುದಾರಿಗೆ ಸಾಗವ ಸಾಧ್ಯತೆಯೂ ಇಲ್ಲದಿಲ್ಲ.
ಅಪರಾಧವನ್ನಾಗಿಸುವುದು ಹಿಂದುಳಿದಿರುವ ಸಂಕೇತ
ವ್ಯಭಿಚಾರವನ್ನು ಅಪರಾಧವನ್ನಾಗಿಸುವುದು ಹಿಂದುಳಿದಿರುವ ಸಂಕೇತ ಮತ್ತು ಇದರಿಂದ ಅತೃಪ್ತ ಜನರನ್ನು ಶಿಕ್ಷಿಸಿದಂತಾಗುತ್ತದೆ ಎಂದು ಏನು ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿದೆಯೋ, ಇದು ಒಂದು ರೀತಿ, ಇನ್ನು ಮುಂದೆ ಗಂಡ ಹೆಂಡತಿ ಹೇಗೆ ಬೇಕಾದರೂ ಮುಕ್ತವಾಗಿ ಬದುಕಬಹುದು ಎನ್ನುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದಂತಾಗಿದೆ ಎನ್ನುವ ಹಾಗಿದೆ.
ಸ್ವತಂತ್ರವಾಗಿ ಬದುಕಲು ಸುಪ್ರೀಂ ತೀರ್ಪು ಸಹಾಯವಾಗಲಿದೆ
ಗಂಡ ಹೆಂಡತಿ ಇನ್ನು ಮುಂದೆ ಸ್ವತಂತ್ರವಾಗಿ ಬದುಕಲು ಸುಪ್ರೀಂ ತೀರ್ಪು ಸಹಾಯವಾಗಲಿದೆ ಎನ್ನುವವರು ಒಂದೆಡೆಯಾದರೆ, ಇದರಿಂದ ಇನ್ನೆಷ್ಟು ಕುಟುಂಬಗಳು ಬೀದಿಗೆ ಬರಲಿವೆಯೋ ಎನ್ನುವ ಆತಂಕ ಪಡುವವರೂ ಇರದೇ ಇರುತ್ತಾರಾ? ಅಯೋಧ್ಯ ತೀರ್ಪು ಹೇಗೆ ಅತ್ಯಂತ ಸೂಕ್ಷ್ಮವೋ, ಅದೇ ರೀತಿ, ಅನೈತಿಕ ಸಂಬಂಧ ವಿಚಾರದಲ್ಲೂ ಸುಪ್ರೀಂ ನೀಡಿದ ತೀರ್ಪು ಕೌಟುಂಬಿಕ ನೆಲೆಗಟ್ಟಿನಲ್ಲಿ ಅಷ್ಟೇ ಸೂಕ್ಷ್ಮವಾದದ್ದು.
ರಾಜಾರೋಷವಾಗಿ ಮುಂದುವರಿಸಲು ಸುಪ್ರೀಂಕೋರ್ಟ್ ತೀರ್ಪು ಅನುವು
ದಂಪತಿಗಳು ಕಳ್ಳಸಂಬಂಧವನ್ನು ಏನಾದರೂ ಇಟ್ಟುಕೊಂಡಿದ್ದರೆ, ಅದು ಇನ್ನು ಮುಂದೆ ರಾಜಾರೋಷವಾಗಿ ಮುಂದುವರಿಸಲು ಸುಪ್ರೀಂಕೋರ್ಟ್ ತೀರ್ಪು ಅನುವು ಮಾಡಿಕೊಟ್ಟಂತಾಗಿದೆ, ಮುಂದೊಂದು ದಿನ ತಮ್ಮ ಮಕ್ಕಳಿಗಾಗಿಯಾದರೂ ಇಂತಹ ದಂಪತಿಗಳು, ನೈಜ ಸತಿಪತಿಯಾಗಿ ಬದುಕುವ ಸಾಧ್ಯತೆ ಇಲ್ಲ, ಎನ್ನುವುದು ಸುಪ್ರೀಂ ತೀರ್ಪಿನ ಬಗ್ಗೆ ಕೆಲವರು ನೀಡುತ್ತಿರುವ ಪ್ರತಿಕ್ರಿಯೆ.
ಮಹಿಳೆ ಪ್ರತಿ ವಿಷಯದಲ್ಲಿ ಪುರುಷನಿಗೆ ಸಮನಾಗಿರುತ್ತಾಳೆ
ಮಹಿಳೆ ಪ್ರತಿ ವಿಷಯದಲ್ಲಿ ಪುರುಷನಿಗೆ ಸಮನಾಗಿರುತ್ತಾಳೆ ಎಂದು ತಿಳಿದುಕೊಳ್ಳುವ ಸಮಯ ಬಂದಿದೆ ಎನ್ನುವ ಸುಪ್ರೀಂ ಉಲ್ಲೇಖ ಸ್ವಾಗತಾರ್ಹ. ಆದರೆ, ಕೂಲಂಕುಷವಾಗಿ ಚರ್ಚಿಸಿ, ಆಗುಹೋಗುಗಳನ್ನು ಪರಾಂಬರಿಸಿ, ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ತೀರ್ಪು ನೀಡಬೇಕಾಗಿತ್ತು ಎನ್ನುವ ಮಾತೂ ಕೇಳಿಬರುತ್ತಿದೆ. ಸುಪ್ರೀಂ ತೀರ್ಪಿಗೆ ತಡೆನೀಡುವ ಅಧಿಕಾರ ಇರುವುದು ರಾಷ್ಟ್ರಪತಿಗಳಿಗೆ ಮಾತ್ರ...
'ಮದುವೆಯ ಈ ಬಂಧ, ಅನುರಾಗದ ಅನುಬಂಧ
ಸೀತಾ ಚಿತ್ರದ, ಆರ್ ಎನ್ ಜಯಗೋಪಾಲ್ ಬರೆದಿರುವ ಒಂದು ಹಾಡು ನೆನಪಿಗೆ ಬರುತ್ತದೆ, 'ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನ್ಮದಲೂ ತೀರದ ಸಂಬಂಧ, ಮನಸನ್ನು ಅರಿತು, ಒಂದಾಗಿ ಬೆರೆತು, ನಡೆದಾಡಿದಾಗ ಬಾಳು ಕವಿತೆ, ನೂರೊಂದು ವರುಷ, ಚೆಲ್ಲಿರಲಿ ಹರುಷ, ಬೆಳಗಿರಲಿ ಒಲವ ಹಣತೆ'.