ಈ ಶಂಕಿತ ಭಯೋತ್ಪಾದಕನಿಗೆ ಎಷ್ಟೊಂದು ಅಭಿಮಾನಿಗಳು!
2005 ರಲ್ಲಿ ಬೆಂಗಳೂರಿನ ಐಐಎಸ್ಸಿ ಮೇಲೆ ನಡೆದ ದಾಳಿ ಕುರಿತಂತೆ ತಾನು ಭಯೋತ್ಪಾದಕರಿಗೆ ಸಹಾಯ ಮಾಡಿದ್ದು ನಿಜ ಎಂದು ಆರೋಪಿಯೇ ಒಪ್ಪಿಕೊಂಡ ಮೇಲೂ, ಆತನನ್ನು ಅಭಿಮಾನದಿಂದ ಕಾಣುವವರಿದ್ದಾರೆ!
ತ್ರಿಪುರ, ಮಾರ್ಚ್ 30: ಶಂಕಿತ ಭಯೋತ್ಪಾದಕರಿಗೂ ಅಭಿಮಾನಿಗಳಿರ್ತಾರಾ? ತ್ರಿಪುರದಲ್ಲಿ ಪ್ಲಂಬರ್ ಎಂದುಕೊಂಡು ನೂರಾರು ಜನರ ವಿಶ್ವಾಸ ಗಳಿಸಿದ್ದ ಹಬಿಬ್ ಮಿಯಾ ಎಂಬ ಶಂಕಿತ ಭಯೋತ್ಪಾದಕನಿಗೆ ಆ ಊರಿನ ತುಂಬಾ ಅಭಿಮಾನಿಗಳಿದ್ದಾರೆ!
ಆತ ತಾನು ಭಯೋತ್ಪಾದಕರಿಗೆ ಸಹಾಯ ಮಾಡಿದ್ದು ನಿಜ ಎಂದು ಒಪ್ಪಿಕೊಂಡ ಮೇಲೂ, ಆತನನ್ನು ಅಭಿಮಾನದಿಂದ ಕಾಣುವವರಿದ್ದಾರೆ! ಹೌದು, 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯ ಮೇಲಾದ ದಾಳಿ ಪ್ರಕರಣದ ಆರೋಪಿ ಹಬಿಬ್ ಮಿಯಾನನ್ನು ಮಾರ್ಚ್ 18 ರಂದು ಕೋರ್ಟಿಗೆ ಕರೆದೊಯ್ಯುತ್ತಿದ್ದಾಗ ಆತನನ್ನು ಸುತ್ತುವರಿದ ಆತನ ಅಭಿಮಾನಿಗಳು ಪೊಲೀಸರಲ್ಲಿ ದಿಗುಲುಂಟುಮಾಡಿದ ಘಟನೆ ನಡೆದಿದೆ.
ಅಭಿಮಾನಿಗಳ ದಂಡು!
ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ಈ ಭಯೋತ್ಪಾದಕನ ಅಭಿಮಾನಿಗಳ ದಂಡೇ ಇದೆಯಂತೆ. ಎಲ್ಲರ ವಿಶ್ವಾಸ ಗಳಿಸುತ್ತಲೇ ದೇಶದ್ರೋಹದ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದ ಹಬಿಬ್ ಇದೀಗ ಪೊಲೀಸರಿಗೆ ಅತಿಥಿಯಾಗಿದ್ದು ನಿಜವಾದರೂ, ಆತ ಈಗಾಗಲೇ ಭಾರತಕ್ಕೆ ನುಸುಳಲು ಸಹಾಯ ಮಾಡಿದ ಭಯೋತ್ಪಾದಕರ ಸಂಖ್ಯೆ ಎಷ್ಟೆಂಬುದು ಬಹುಶಃ ಅವನಿಗೂ ಲೆಕ್ಕಕ್ಕೆ ಸಿಕ್ಕಿರಲಿಕ್ಕಿಲ್ಲ!
ಒಂದು ನುಸುಳುವಿಕೆಗೆ 1000 ರೂ.!
ಒಬ್ಬೊಬ್ಬ ಬಾಂಗ್ಲಾದೇಶೀಯನನ್ನು ಭಾರತಕ್ಕೆ ನುಸುಳಲು ಸಹಾಯ ಮಾಡುತ್ತಿದ್ದ ಹಬೀಬ್ ಒಬ್ಬನ ನುಸುಳುವಿಕೆಗೆ ಪಡೆಯುತ್ತಿದ್ದ ಹಣ 1000 ರೂ.! ಆ ಒಂದು ಸಾವಿರ ರೂಪಾಯಿಗೆ ಇಡೀ ದೇಶದ ಭದ್ರತೆಯನ್ನು, ಸಮಗ್ರತೆಯನ್ನು, ಶಾಂತಿಯನ್ನು ಮಾರಾಟಮಾಡುತ್ತಿದ್ದ ಈತನ ವಿಚಾರಣೆ ನಡೆಯುತ್ತಿದ್ದು, ಹಲವು ಆಘಾತಕಾರಿ ವಿಷಯಗಳು ಹೊರಬರುವ ಸಂಭವವಿದೆ.
ತಪ್ಪೊಪ್ಪಿಕೊಂಡ ಹಬೀಬ್
2003 ರಲ್ಲಿ ಕನಿಷ್ಠವೆಂದರೂ 45 ಭಯೋತ್ಪಾದಕರು ಭಾರತದೊಳಕ್ಕೆ ಬರುವುದಕ್ಕೆ ಮತ್ತು ಹೊರಹೋಗುವುದಕ್ಕೆ ತಾನು ಸಹಾಯ ಮಾಡಿದ್ದೇನೆಂದು ಸ್ವತಃ ಹಬಿಬ್ ಪೊಲೀಸರೆದುರು ಒಪ್ಪಿಕೊಂಡಿದ್ದಾನೆ!
ಸಮಜಾಯಿಷಿ ಕೇಳಿದ ಅಭಿಮಾನಿಗಳು
ಇಂಥ ರಾಷ್ಟ್ರ ದ್ರೋಹಿಯನ್ನು ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದರೆ, ನಮ್ಮ ನೆಚ್ಚಿನ ಪ್ಲಂಬರ್ ನನ್ನು ಯಾಕೆ ಬಂಧಿಸಿದ್ದೀರಿ ಎಂದು ವಿವರ ನೀಡುವಂತೆ ಇಲ್ಲಿನ ಜನ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ! ಅಷ್ಟೇ ಅಲ್ಲ, ತ್ರಿಪುರದ ಕೋರ್ಟಿನತ್ತ ಈತನನ್ನು ಕರೆದೊಯ್ಯುವಾಗ ನೆರೆದಿದ್ದ 60 ಕ್ಕೂ ಹೆಚ್ಚು ಜನ ಆತನ ಬಂಧನಕ್ಕೆ ಸಮಜಾಯಿಷಿ ನೀಡುವಂತೆ ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ!
ಬೆಚ್ಚಿತ್ತು ಬೆಂಗಳೂರು !
ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಐಐಎಸ್ಸಿ ಮೇಲೆ 2005 ರ ಡಿಸೆಂಬರ್ 28 ರಂದು ನಡೆದ ದಾಳಿಯಲ್ಲಿ ಪ್ರೊ.ಮುನೀಶ್ ಚಂದ್ರ ಪುರಿ ಎಂಬ ಉಪನ್ಯಾಸಕರು ಹತರಾಗಿದ್ದರು. ನಾಲ್ಕು ಜನರಿಗೆ ಗಂಭೀರಗಾಯವಾಗಿತ್ತು. ಈ ಪ್ರಕರಣ ಉದ್ಯಾನನಗರಿಯ ಜನರ ನೆಮ್ಮದಿಯ ನಿದ್ದೆಯನ್ನೇ ಕಸಿದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಹಬೀಬ್ ಬಂಧನ ಪ್ರಕ್ರಿಯೆಯಲ್ಲಿ ಕರ್ನಾಟಕ ಪೊಲೀಸ್ ಸಹ ಸಾಥ್ ನೀಡಿದ್ದರು.