ಬಿಜೆಪಿ ವಿರುದ್ಧ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ
ಮುಂಬೈ, ಮೇ 31: ಉಪಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ವಿರುದ್ಧ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲೇ ಸೋಲುತ್ತಿದ್ದಾರೆ. ಅವರು ಇಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಜನರು ಯೋಗಿಯನ್ನು ಗೇಲಿ ಮಾಡುತ್ತಿದ್ದಾರೆ," ಎಂದು ಠಾಕ್ರೆ ಕಿಡಿಕಾರಿದರು.
ಚುನಾವಣಾ ಆಯೋಗದಲ್ಲೇ ಭ್ರಷ್ಟಾಚಾರವನ್ನು ನೋಡಿದ ನಂತರ, ಚುನಾವಣಾ ಆಯುಕ್ತರನ್ನು ನೇಮಕ ಮಾಡಬಾರದು, ಬದಲಿಗೆ ಅವರನ್ನೂ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂಬುದು ನನ್ನ ಸಲಹೆ ಎಂದು ಠಾಕ್ರೆ ಹೇಳಿದರು.
"ಮತ ಎಣಿಕೆಯಲ್ಲೂ ಕೆಲವು ಭಿನ್ನತೆಗಳು ಇವೆ. ಈ ಭಿನ್ನತೆಗಳು ಸರಿ ಹೋಗುವವರೆಗೆ ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಬಾರದು," ಎಂದು ಉದ್ಧವ್ ಠಾಕ್ರೆ ಪಲ್ಗಾರ್ ಉಪಚುನಾವಣೆಯ ಫಲಿತಾಂಶದ ಕುರಿತಂತೆ ಆಗ್ರಹಿಸಿದ್ದಾರೆ.
"ಒಂದೊಮ್ಮೆ ಅಗತ್ಯ ಬಿದ್ದರೆ ಈ ಸಂಬಂಧ ನಾವು ನ್ಯಾಯಾಲಯಕ್ಕೆ ತೆರಳಲೂ ಸಿದ್ದ. ಆದರೆ ಪ್ರಜಾಪ್ರಭುತ್ವ, ಚುನಾವಣಾ ಪ್ರಕ್ರಿಯೆ ಮತ್ತು ಅದಕ್ಕಿರುವ ಬೆದರಿಕೆಗಳೆಲ್ಲಾ ತುಂಬಾ ಗಂಭೀರ ಸಮಸ್ಯೆಗಳಾಗಿವೆ," ಎಂದು ಠಾಕ್ರೆ ವಿಶ್ಲೇಷಿಸಿದ್ದಾರೆ.
ಇದಾದ ಬೆನ್ನಿಗೆ ಪಲ್ಗಾರ್ ಉಪಚುನಾವಣೆಯ ಫಲಿತಾಂಶವನ್ನು ಘೋಷಣೆ ಮಾಡಬಾರದು ಎಂಬ ಶಿವಸೇನೆಯ ಮನವಿಯನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ಇಲ್ಲಿ ಬಿಜೆಪಿಯ ರಾಜೇಂದ್ರ ಗವಿತ್ ಜಯಶಾಲಿಯಾಗಿದ್ದಾರೆ ಎಂದು ಪಲ್ಗಾರ್ ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದು, ಈ ಕುರಿತು ಪ್ರಮಾಣ ಪತ್ರವನ್ನೂ ಜಯಶಾಲಿಯಾದ ಅಭ್ಯರ್ಥಿಗೆ ನೀಡಿದ್ದಾರೆ.