ಪಾಕಿ ಉಗ್ರ ನವೀದ್ ಬಾಲಾಪರಾಧಿ ಎಂದು ಸಾಬೀತಾದರೆ?
ಬೆಂಗಳೂರು, ಆಗಸ್ಟ್ 06 : ಜಮ್ಮು ಮತ್ತು ಕಾಶ್ಮೀರದ ಉದ್ಧಮಪುರದಲ್ಲಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಲು ಬಂದು ಸಿಕ್ಕಿಬಿದ್ದಿರುವ ಪಾಕಿಸ್ತಾನಿ ಉಗ್ರ ಮೊಹಮ್ಮದ್ ನವೀದ್ ವಯಸ್ಸು ಈಗ ಬಹಳಷ್ಟು ಚರ್ಚೆಗೆ ಮತ್ತು ಜಿಜ್ಞಾಸೆಗೆ ಗ್ರಾಸವಾಗಿದೆ.
"ನಾನಿಲ್ಲಿ ಸಾಯಲು ಬಂದಿಲ್ಲ, ಭಾರತೀಯರನ್ನು ಸಾಯಿಸಲು ಬಂದಿದ್ದೇನೆ. ಸಖತ್ ಮಜಾ ಕೊಡುವಂಥ ಕೆಲಸವಿದು" ಎಂದು ನಗುನಗುತ್ತಲೇ ಬಾಯಿಬಿಟ್ಟಿರುವ ನವೀದ್ ಕೇವಲ 16 ವರ್ಷದ ಬಾಲಕನಾಗಿರುವುದು ಮತ್ತಷ್ಟು ಸಮಸ್ಯೆಗೂ ಎಡೆಮಾಡಿಕೊಟ್ಟಿದೆ. ಆತ ತನಗೆ 20 ವರ್ಷ ಎಂದು ಆರಂಭದಲ್ಲಿ ಹೇಳಿಕೆ ನೀಡಿದ್ದ. ['ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ']
ಆತನ ವಿಚಾರಣೆಗೆ ಬಾಲಾಪರಾಧ ನ್ಯಾಯ ಕಾಯ್ದೆಯ ಅನ್ವಯ ಮಾಡಬೇಕೆಂದು ಕೆಲವರು ಪಟ್ಟುಹಿಡಿದಿದ್ದಾರೆ. ಆತ ತಾನು 16 ವರ್ಷದ ಬಾಲಕ ಎಂದು ನವೀದ್ ಸಾಬೀತುಪಡಿಸಿದರೆ ಆತನಿಗೆ ಬಾಲಾಪರಾಧ ಕಾಯ್ದೆಯ ಅನ್ವಯ ಭರ್ತಿ ಲಾಭ ಸಿಗುವ ಸಾಧ್ಯತೆಗಳೂ ಇವೆ.
ಒಂದು ವೇಳೆ ಆತನಿಗೆ ಈ ಕಾಯ್ದೆಯ ಅನ್ವಯ ಲಾಭ ಸಿಕ್ಕಿದರೆ ಮತ್ತೊಂದು ಸಮಸ್ಯೆಗೆ ಅದು ದಾರಿ ಮಾಡಿಕೊಡಲಿದೆ. ಅದೇನೆಂದರೆ, ಪಾಕಿಸ್ತಾನ ಇನ್ನು ಮುಂದೆ ಕೇವಲ ಬಾಲಕರನ್ನು ಭಾರತದೊಳಗೆ ದಾಳಿ ಮಾಡಲು ಕಳಿಸಬಹುದು. ಪಾಕಿಸ್ತಾನದಲ್ಲಿರುವ ಉಗ್ರರ ತರಬೇತಿ ಶಿಬಿರದಲ್ಲಿ ಸಾಕಷ್ಟು ಬಾಲಕರೂ ಇದ್ದಾರೆ.
ಎಂಟು ವರ್ಷದಿಂದಲೇ ಉಗ್ರರಿಗೆ ತರಬೇತಿ
ಭಯೋತ್ಪಾದಕ ತರಬೇತಿ ಶಿಬಿರಗಳಲ್ಲಿ 8 ವರ್ಷದ ಬಾಲಕರನ್ನು ಪಳಗಿಸಲಾಗುತ್ತಿದೆ. ಅವರಿಗೆ ಕುರಾನ್ ಬಗ್ಗೆ ಶಿಕ್ಷಣ ಮತ್ತು ಮುಸ್ಲಿಂ ತತ್ತ್ವ ಸಿದ್ಧಾಂತಗಳನ್ನು ಅವರ ಮನಸ್ಸಿನಲ್ಲಿ ತುಂಬಿದ ಮೇಲೆ 12 ವರ್ಷಕ್ಕೆಲ್ಲ ಅವರ ಕೈಗೆ ಬಂದೂಕನ್ನು ನೀಡಲಾಗುತ್ತದೆ.
ಹದಿನಾರಕ್ಕೆ ಯುದ್ಧಕ್ಕೆ ಸನ್ನದ್ಧ
ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಬಾಲಕರು ಸಂಪೂರ್ಣವಾಗಿ ಯುದ್ಧಕ್ಕೆ ಸನ್ನದ್ಧರಾಗಿರುತ್ತಾರೆ. ಭಾರತದೊಳಗೆ ನುಸುಳಿ, ಮಿಲಿಟರಿ ಶಿಬಿರಗಳ ಮೇಲೆ ಅಥವಾ ನಾಗರಿಕರ ಮೇಲೆ ದಾಳಿ ಮಾಡುವಷ್ಟು ನೈಪುಣ್ಯತೆಯನ್ನು ತುಂಬಲಾಗುತ್ತದೆ. ನವೀದ್ನೊಂದಿಗೆ ನುಸುಳಿ ಬಂದು ದಾಳಿ ಮಾಡಿ ಹತ್ಯೆಗೊಳಗಾದ ಇನ್ನೊಬ್ಬನೂ ಬಾಲಕನೆ.
ಬಾಲಾಪರಾಧಿ ಕಾನೂನಿನ ಲಾಭ ಸಿಗಬೇಕೆ?
ಈ ಪ್ರಕರಣವನ್ನು ಪಾಕಿಸ್ತಾನ ಕೂಡ ಕುತೂಹಲದಿಂದ ನೋಡುತ್ತಿದೆ. ಬಾಲಕ ನವೀದ್ಗೆ ಬಾಲಾಪರಾಧಿ ಕಾನೂನಿನ ಅನ್ವಯ ಲಾಭ ಸಿಗಬೇಕೆಂದು ಕ್ಯಾತೆ ತೆಗೆದರೂ ಅಚ್ಚರಿಯಿಲ್ಲ. ಈ ವಿಷಯದಲ್ಲಿ ಭಾರತದಲ್ಲೇ ಇರುವ ಕೆಲ ಸಂಘಟನೆಗಳು ನವೀದ್ ಬೆಂಬಲಕ್ಕೆ ನಿಂತರೂ ನಿಲ್ಲಬಹುದು.
ಬಾಲಾಪರಾಧಿಗಳನ್ನು ಜೈಲಿಗೆ ಕಳಿಸುವಂತಿಲ್ಲ
ಆತನ ವಯಸ್ಸು ಸಾಬೀತಾದಲ್ಲಿ ನವೀದ್ನನ್ನು ಕಠಿಣವಾದ ವಿಚಾರಣೆಗೆ ಗುರಿಪಡಿಸುವಂತಿಲ್ಲ, ಪರಿವರ್ತನೆಯ ಪ್ರಕ್ರಿಯೆಗೂ ಗುರಿಪಡಿಸುವಂತಿಲ್ಲ, ಆರೋಪ ಸಾಬೀತಾದಲ್ಲಿ ಜೈಲಿಗೆ ಕಳಿಸುವಂತಿಲ್ಲ. ಆತನನ್ನು ಕಳಿಸಬೇಕಾಗಿರುವುದು ರಿಮಾಂಡ್ ಹೋಮ್ಗೆ ಮತ್ತು ಮೂರು ವರ್ಷಗಳ ನಂತರ ಬಿಡುಗಡೆಯೂ ಮಾಡಬೇಕು. ಇಷ್ಟೆಲ್ಲ ಇದ್ದಮೇಲೆ ಪಾಕಿಸ್ತಾನ ಕೇವಲ ಬಾಲಕರನ್ನೇ ದಾಳಿ ಮಾಡಲು ಭಾರತಕ್ಕೆ ಕಳುಹಿಸದೆ ಇದ್ದೀತೆ?
ಬಾಲಕರನ್ನೇ ಯಾಕೆ ಛೂ ಬಿಡ್ತಾರೆ?
ಕರ್ನಾಟಕದ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಒಂದು ಆಸಕ್ತಿದಾಯಕ ಅಂಶವನ್ನು ಇಲ್ಲಿ ಹೇಳುತ್ತಾರೆ. ತಾವು ನಿಭಾಯಿಸಿರುವ ಹಲವಾರು ಕೇಸುಗಳಲ್ಲಿ, ಭೂಗತ ಪಾತಕಿಗಳು, ಗ್ಯಾಂಗುಗಳು ಬಾಲಕರನ್ನೇ ಹತ್ಯೆ ಮಾಡಲು ಬಳಸುತ್ತಿವೆ. ದುರ್ಬಲವಾಗಿರುವ ಬಾಲಾಪರಾಧ ಕಾನೂನಿನ ದುರ್ಲಾಭ ಪಡೆಯಲು ಹೀಗೆಲ್ಲ ಮಾಡಲಾಗುತ್ತಿದೆಯಂತೆ.
ದೆಹಲಿ ಗ್ಯಾಂಗ್ ರೇಪ್ ಕೇಸಲ್ಲಿ ಏನಾಯ್ತು?
2012 ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಕೇಸಿನತ್ತ ಬೇಕಿದ್ದರೆ ಕಣ್ಣು ಹಾಕಿ. 23 ವರ್ಷದ ಪ್ಯಾರಾಮೆಡಿಕ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದ 17 ವರ್ಷದ ಬಾಲಕನನ್ನು ಬಾಲಾಪರಾಧಿ ಎಂದು ಪರಿಗಣಿಸಲಾಗಿದ್ದು, ಆತ ರಿಮಾಂಡ್ ಹೋಂನಲ್ಲಿ ಚಿತ್ರ ಬರೆಯುತ್ತ, ಪೇಟಿಂಗ್ ಮಾಡುತ್ತ ಕಾಲ ಕಳೆಯುತ್ತಿದ್ದಾನೆ.