ಮೋದಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಬಿಜೆಪಿ ಅಭ್ಯರ್ಥಿ ಬೆದರಿಕೆ
ನವದೆಹಲಿ, ಏಪ್ರಿಲ್ 12: ಪೌರತ್ವ (ತಿದ್ದುಪಡಿ) ಮಸೂದೆ ಜಾರಿಯಾಗಲು ಬಿಡುವುದಿಲ್ಲ. ಜಾರಿಯಾಗುವ ಸನ್ನಿವೇಶ ಎದುರಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರೇ ಆತ್ಮಹತ್ಯೆ ಮಾಡಿಕೊಂಡು ಅದನ್ನು ತಡೆಯುವುದಾಗಿ ಬಿಜೆಪಿ ಅಭ್ಯರ್ಥಿಯೊಬ್ಬರು ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೇಘಾಲಯದ ಶಿಲ್ಲಾಂಗ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸನ್ಬೋರ್ ಶುಲ್ಲಾಯ್, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ (ತಿದ್ದುಪಡಿ) ಮಸೂದೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ವಿವಾದಾತ್ಮಕ ಪೌರತ್ವ ಮಸೂದೆ ಲೋಕಸಭೆಯಲ್ಲಿ ಪಾಸ್, ಏನಿದೆ ಮಸೂದೆಯಲ್ಲಿ?
ಪ್ರಧಾನಿ ನರೇಂದ್ರ ಮೋದಿ ಅವರ ಎದುರಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಆದರೆ ಮೇಘಾಲಯ ಮತ್ತು ಇತರೆ ಈಶಾನ್ಯ ರಾಜ್ಯಗಳಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಈ ಪೌರತ್ವ ಮಸೂದೆಯು ತಿದ್ದುಪಡಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಮೇಘಾಲಯದ ವಿಧಾನಸಭೆಯ ಮಾಜಿ ಸ್ಪೀಕರ್ ಕೂಡ ಆಗಿರುವ ಶುಲ್ಲಾಯ್, ಗುರುವಾರ ನಡೆದ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಮತಚಲಾಯಿಸಿದ ಬಳಿಕ ಅವರು ಮಾತನಾಡಿದರು. ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ದೇಶದ ಬೇರಾವ ಭಾಗದಲ್ಲಿಯಾದರೂ ಪೌರತ್ವ ಮಸೂದೆ ಜಾರಿಯಾದರೆ ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಪೌರತ್ವ ಮಸೂದೆ ಬಗ್ಗೆ ಸುಳ್ಳುಸುದ್ದಿ ಹರಡಿಸಲಾಗುತ್ತಿದೆ: ಮೋದಿ ಆರೋಪ
ಮಸೂದೆಯನ್ನು ಕಾನೂನಾಗಿ ಪರಿವರ್ತಿಸಿದರೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವುದಾಗಿ ಮೇಘಾಲಯದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಮತ್ತು ಮಿಜೋರಾಂನ ಮಿಜೋ ನ್ಯಾಷನಲ್ ಫ್ರಂಟ್ ಮುಂತಾದ ಮಿತ್ರಪಕ್ಷಗಳು ಸುಳಿವು ನೀಡಿದ್ದವು. ಇದರ ಬೆನ್ನಲ್ಲೇ ಸ್ವಪಕ್ಷದವರಿಂದಲೇ ಬಿಜೆಪಿಯ ನಿಲುವಿಗೆ ವಿರೋಧ ವ್ಯಕ್ತವಾಗಿದೆ.
ಜಾರಿಗೆ ಬಿಡುವುದಕ್ಕಿಂತ ಸಾಯುವುದು ಮೇಲು
'ಈಶಾನ್ಯ ರಾಜ್ಯಗಳಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಜಾರಿಯಾಗುವುದಕ್ಕೆ ಅವಕಾಶ ನೀಡುವುದಕ್ಕಿಂತ ನನ್ನನ್ನು ನಾನು ಸಾಯಿಸಿಕೊಳ್ಳುತ್ತೇನೆ. ಪೌರತ್ವ (ತಿದ್ದುಪಡಿ) ಮಸೂದೆಯಿಂದ ಮೇಘಾಲಯ ಮತ್ತು ಇತರೆ ಈಶಾನ್ಯ ರಾಜ್ಯಗಳನ್ನು ಹೊರತಾಗಿಸಬೇಕು ಎಂದು ಈ ಹಿಂದೆಯೇ ಪ್ರಧಾನಿ ಮೋದಿ, ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಎನ್ಜಿಓಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಮಸೂದೆ ಜಾರಿಗೆ ಬದ್ಧ: ಮೋದಿ
ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮತ್ತೆ ಜಾರಿಗೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.
ಸಿಲ್ಚಾರ್ನಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮಸೂದೆಯನ್ನು ಜಾರಿಗೆ ತರಲು ಬದ್ಧರಾಗಿರುವುದಾಗಿ ಹೇಳಿದ್ದರು. ರಾಜ್ಯದ ಜನರ ಅಭಿಪ್ರಾಯ ಮತ್ತು ಸಮಾಜದ ಎಲ್ಲ ವರ್ಗಗಳನ್ನು ಸಂಪರ್ಕಿಸಿ ಅವರ ಸಲಹೆಗಳನ್ನು ಪಡೆದುಕೊಂಡೇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದರು.
ಮೋದಿಗೆ ಕಪ್ಪುಬಾವುಟದ ಸ್ವಾಗತ ನೀಡಿದ ಅಸ್ಸಾಂ ವಿದ್ಯಾರ್ಥಿಗಳು
ಪ್ರತಿಭಟನೆ ಲೆಕ್ಕಿಸದ ಕೇಂದ್ರ
ಕೇಂದ್ರ ಸರ್ಕಾರವು ಮಸೂದೆಯನ್ನು ಸಂಸತ್ನಲ್ಲಿ ಮಂಡಿಸಿದ ಬಳಿಕ ಈಶಾನ್ಯ ರಾಜ್ಯಗಳಲ್ಲಿ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು. ಅಸ್ಸಾಂ, ಮಣಿಪುರ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರದಲ್ಲಿದ್ದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್ಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿ ಅಧಿಕಾರ ಹಂಚಿಕೊಂಡಿದೆ. ಇಲ್ಲಿ ನಡೆದ ಪ್ರತಿಭಟನೆಗಳನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿ ರಾಜ್ಯಸಭೆಯ ಮುಂದಿರಿಸಿತ್ತು.
ಮಸೂದೆಯಲ್ಲಿ ಏನಿದೆ?
ಜಂಟಿ ಸದನ ಸಮಿತಿ ವರದಿಯು ಈ ಮಸೂದೆಯನ್ನು ಸಿದ್ಧಪಡಿಸಿತ್ತು. ಈಗ ತಿದ್ದುಪಡಿ ಆಗಿರುವ ಮಸೂದೆ ಪ್ರಕಾರ, ಹಿಂದೂಗಳು, ಸಿಖ್, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಪೌರತ್ವ ದೊರೆಯುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪ್ರಜೆಗಳು, ಅಲ್ಲಿ ಧಾರ್ಮಿಕ ಕಿರುಕುಳ ನಡೆದು ಡಿಸೆಂಬರ್ 31, 2014ಕ್ಕೂ ಮೊದಲು ಭಾರತವನ್ನು ಪ್ರವೇಶಿಸಿರಬೇಕು. ನಾಗರಿಕತ್ವ ಸಕ್ರಮ ಆಗುವುದಕ್ಕೆ ಅರ್ಜಿದಾರರು 2014ರ ಡಿಸೆಂಬರ್ ತನಕ 12 ತಿಂಗಳ ಕಾಲ ಭಾರತದಲ್ಲಿ ಇರಬೇಕು. ಮತ್ತು ಅದಕ್ಕೂ ಮುನ್ನ ಹದಿನಾಲ್ಕರಲ್ಲಿ 11 ವರ್ಷ ಇರಬೇಕು. ತಿದ್ದುಪಡಿ ಮಾಡಲಾದ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿದೆ.