ಬಿಜೆಪಿ ಗೆದ್ದರೆ ಭಾರತ ಹಿಂದು ಪಾಕಿಸ್ತಾನವಾಗುತ್ತೆ: ಶಶಿ ತರೂರ್
Recommended Video
ತಿರುವನಂತಪುರಂ, ಜುಲೈ 12: 'ಅಕಸ್ಮಾತ್ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಭಾರತವನ್ನು ಹಿಂದು ಪಾಕಿಸ್ತಾನವನ್ನಾಗಿ ಮಾಡಲಿದೆ" ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.
ಕೇರಳದ ತಿರುವನಂತಪುರಂ ನಲ್ಲಿ ಕಾರ್ಯಕ್ರವೊಂದರಲ್ಲಿ ಭಾಗವಹಿಸಿದ್ದ ಅವರು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಆಡಳಿತದಲ್ಲಿ ಭಾರತ ಸುರಕ್ಷಿತವಾಗಿಲ್ಲ: ಶಶಿ ತರೂರ್
'ಬಿಜೆಪಿ ಗೆದ್ದರೆ ಅದೇ ಹೊಸ ಸಂವಿಧಾನವನ್ನು ಬರೆಯುತ್ತದೆ, ಪಾಕಿಸ್ತಾನದಂತೆ ಅಲ್ಪಸಂಖ್ಯಾತರಿಗೆ ಯಾವುದೇ ಗೌರವ ನೀಡುವುದಿಲ್ಲ' ಎಂದು ಸಹ ಅವರು ಹೇಳಿದ್ದಾರೆ.
"ಹಿಂದು ರಾಷ್ಟ್ರ ಎಂಬ ಪರಿಕಲ್ಪನೆಯೇ ಅಲ್ಪಸಂಖ್ಯಾತರಿಂದ ಸಮಾನತೆಯನ್ನು ಕಿತ್ತುಕೊಂಡಿದೆ. ಇದರಿಂದ ಹಿಂದು ಪಾಕಿಸ್ತಾನ ನಿರ್ಮಾಣವಾಗುತ್ತದೆ. ಮಹಾತ್ಮಾ ಗಾಂಧಿ, ನೆಹರೂ, ಸರ್ದಾರೆ ಪಟೇಲ್, ಮೌಲಾನಾ ಆಜಾದ್ ರಂಥ ಮಹಾನ್ ನಾಯಕರು ಹೋರಾಡಿದ್ದು ಇದಕ್ಕಲ್ಲ" ಎಂದು ಶಶಿ ತರೂರ್ ಹೇಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, 'ಬಿಜೆಪಿ 2019 ರಲ್ಲಿ ಅಧಿಕಾರಕ್ಕೆ ಬಂದರೆ ಭಾರತ ಹಿಂದು ಪಾಕಿಸ್ತಾನವಾಗಲಿದೆ ಎಂದು ಶಶಿ ತರೂರ್ ಹೇಳುತ್ತಾರೆ. ಕಾಂಗ್ರೆಸ್ಸು ಭಾರತ ಅಥವಾ ಹಿಂದುಗಳ ಹೆಸರಿಗೆ ಮಸಿ ಬಳಿಯುವ ಯಾವ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ. 'ಹಿಂದು ಭಯೋತ್ಪಾದನೆ'ಯಿಂದ, 'ಹಿಂದು ಪಾಕಿಸ್ತಾನ' ಎಂಬಲ್ಲಿಯವರೆಗಿನ ಮಾತುಗಳು ಕಾಂಗ್ರೆಸ್ಸಿಗೆ ಮಾತ್ರ ಹೇಳಿಮಾಡಿಸಿದ್ದು' ಎಂದಿದ್ದಾರೆ.