ಜಮ್ಮು ಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಿದ ಪ್ರತ್ಯೇಕತಾವಾದಿಗಳು
ಜಮ್ಮು ಕಾಶ್ಮೀರ, ಜುಲೈ, 18 : ಇಡೀ ದೇಶ ರಂಜಾನ್ ಸಂಭ್ರಮದಲ್ಲಿದ್ದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಬಾಲ ಬಿಚ್ಚಿದ್ದಾರೆ. ಪೊಲೀಸರು ಮತ್ತು ಪ್ರತ್ಯೇಕತಾವಾದಿಗಳ ನಡುವೆ ಶನಿವಾರ ಬೆಳಗ್ಗೆ ಘರ್ಷಣೆ ಸಂಭವಿಸಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿಯನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಸಾವಿರಾರು ಬೆಂಬಲಿಗರು ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಉಗ್ರ ಸ್ವರೂಪ ತಳೆದಿದೆ.[ಶ್ರೀನಗರ: 3 ಉಗ್ರರ ಬಲಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ]
ಗೃಹಬಂಧನದಲ್ಲಿರುವ ಗಿಲಾನಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಪ್ರಾರಂಭಿಸಿದ ಪ್ರತ್ಯೇಕತಾವಾದಿಗಳು, ಈ ವೇಳೆ ಪಾಕ್ ಐಎಸ್ಐಎಸ್ ಧ್ವಜ ಪ್ರದರ್ಶಿಸಿ ಭಾರತದ ವಿರುದ್ಧ ಘೋಷಣೆ ಕೂಗಿ ಪುಂಡಾಟಿಕೆ ಮುಂದುವರೆಸಿದ್ದಾರೆ. ಶ್ರೀನಗರ, ಅನಂತನಾಗ್ ಜಿಲ್ಲೆಗಳಲ್ಲಿ ರಂಜಾನ್ ಹಬ್ಬದ ವಾತಾವರಣ ಬದಲು ಉದ್ರಿಕ್ತ ವಾತಾವರಣ ತಲೆದೋರುವಂತೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರ ನಡುವೆ ಮೈತ್ರಿ ಮಾತುಕತೆ ನಡೆದಿದ್ದು, ಇದೀಗ ತಾಳಿರುವ ಉದ್ರಿಕ್ತ ಘಟನೆ ಸಂಧಾನದ ಕುರಿತಾಗಿ ಹಲವಾರು ಅನುಮಾನಗಳು ಮೂಡುವಂತೆ ಮಾಡಿದೆ.
ಘರ್ಷಣೆ ಹತೋಟಿ ತರಲು ಪ್ರತ್ಯೇಕತಾವಾದಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರಿಗೆ ಕಲ್ಲು ತೂರಿದ ಪ್ರತಿಭಟನಾಕಾರರನ್ನು, ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರವಾಯು ಸಿಂಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.