'ಭಾರತೀಯ ಬ್ಯಾಂಕ್ ಗಳ ಅಪಾಯ ಗುರುತಿಸುವ ಸಾಮರ್ಥ್ಯ ಸೀಮಿತವಾದುದು'
ನವದೆಹಲಿ, ಆಗಸ್ಟ್ 23: ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮೂಲಭೂತವಾದ ಬದಲಾವಣೆಗಳು ಆಗಬೇಕಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಸಲಹೆ ಮಾಡಿದರು. "ಭಾರತ ವಿಷನ್ 2030 ಮತ್ತು ಬ್ಯಾಂಕಿಂಗ್" ಎಂಬ ವಿಚಾರದ ಬಗ್ಗೆ ಗುರುವಾರ ಭಾರತೀಯ ಬ್ಯಾಂಕಿಂಗ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಆರ್ಥಿಕತೆ ಅಭಿವೃದ್ಧಿಯ ಚಲನೆಯು 'ಸ್ಟಾರ್ಟ್ ಅಪ್' ಹಾಗೂ 'ಸ್ಟ್ಯಾಂಡ್ ಅಪ್' ಗಳಿಂದ ನಿರ್ಧಾರವಾಗುತ್ತದೆ. ಏಕೆಂದರೆ, ಈ ಮಾತನ್ನು ಬ್ಯಾಂಕಿಂಗ್ ವಲಯದ ಜತೆಗೆ ನನಗಿರುವ ಸುದೀರ್ಘ ನಂಟಿನ ಅನುಭವದಿಂದ ಹೇಳುತ್ತಿದ್ದೇನೆ ಎಂದರು.
'ಭಾರತದ ಬ್ಯಾಂಕಿಂಗ್ ಬಗ್ಗೆ ಜನರ ನಿರೀಕ್ಷೆಗಳೇನು ತಿಳಿಯಿರಿ, ತಲುಪಿರಿ'
ಮುಂಬರುವ ವರ್ಷಗಳಲ್ಲಿ ಕೃಷಿ ವಲಯಕ್ಕೆ ಬ್ಯಾಂಕಿಂಗ್ ವಲಯ ಹೇಗೆ ಸಹಕಾರಿಯಾಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ ಭಾರತದ ವಾಣಿಜ್ಯ ಬ್ಯಾಂಕ್ ಗಳಿಗೆ ಅಪಾಯದ ತುಲನೆ ಮಾಡುವ ಸಾಮರ್ಥ್ಯ ಸೀಮಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸದ್ಯಕ್ಕೆ ಬ್ಯಾಂಕ್ ಗಳು ಸಿವಿಸಿ, ಸಿಬಿಐ ಹಾಗೂ ಸಿಎಜಿಗೆ ಹೆದರುವಂತೆ ಕಾಣುತ್ತಿವೆ. ಅದರಿಂದಲೇ ಸರಿಯಾದ ಮಾರ್ಗದಲ್ಲಿ ವಾಣಿಜ್ಯ ಬ್ಯಾಂಕ್ ಗಳ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ತುಂಬ ಜಾಗ್ರತೆಯಿಂದ ಇರುವ ಬಗ್ಗೆ ಮಾತ್ರ ಆಲೋಚಿಸುತ್ತಿವೆ ಎಂದು ಹೇಳಿವೆ.
ಪಿ.ಜೆ.ನಾಯರ್ ಸಮಿತಿಯ ವರದಿಯಲ್ಲಿ ಮಾಡಿದ್ದ ಸಲಹೆಗಳು ಬ್ಯಾಂಕಿಂಗ್ ವಲಯಕ್ಕೆ ಸೂಕ್ತವಾದವು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ವಾಸ್ತವ ಚಿತ್ರಣದ ಬಗ್ಗೆ ಅರಿವಿಲ್ಲ ಎಂದು ರಾಜೀವ್ ಕುಮಾರ್ ಅಭಿಪ್ರಾಯಪಟ್ಟರು.