10 ಕಿ.ಮೀ ನಡೆದು ಹೋಗಿ ತರಕಾರಿ ತರುತ್ತಾರೆ ಐಎಎಸ್ ಅಧಿಕಾರಿ
ಶಿಲ್ಲೋಂಗ್, ಸೆಪ್ಟೆಂಬರ್ 28: ಮೇಘಾಲಯದ ಯುವ ಐಎಎಸ್ ಅಧಿಕಾರಿ ಒಬ್ಬರು ಮನೆಗೆ ತರಕಾರಿ ಕೊಳ್ಳಲು ಹತ್ತು ಕಿ.ಮೀ ನಡೆಯುತ್ತಾರೆ.
ಮೇಘಾಲಯದ ಪಶ್ಚಿಮ ಗಾರೊ ಪ್ರದೇಶದ ಜಿಲ್ಲಾಧಿಕಾರಿ ಆಗಿರುವ ರಾಮ್ಸಿಂಗ್ ವಾರಕ್ಕೆ ಒಮ್ಮೆ ಬಿದಿರು ಬುಟ್ಟಿಯೊಂದನ್ನು ಬೆನ್ನಿಗೆ ಕಟ್ಟಿಕೊಂಡು ಬರೋಬ್ಬರಿ ಹತ್ತು ಕಿ.ಮೀ ನಡೆದು ಹೋಗಿ ತರಕಾರಿಗಳನ್ನು ಕೊಂಡು ತರುತ್ತಾರೆ.
ದುರ್ಗಮ ಹಾದಿಯಲ್ಲಿ 15 ಕಿ.ಮೀ ನಡೆದು ಕುಗ್ರಾಮ ತಲುಪಿದ ಅಧಿಕಾರಿ
ಪ್ಲಾಸ್ಟಿಕ್ ನಿರ್ಮೂಲನೆ, ಸಾವಯವ ಆಹಾರ ಸೇವನೆ ಹಾಗೂ ನಡಿಗೆಯ ಮಹತ್ವ ಸಾರುವ ಉದ್ದೇಶದಿಂದ ಜಿಲ್ಲಾಧಿಕಾರಿ ರಾಮ್ ಸಿಂಗ್ ಅವರು ಹೀಗೆ ಪ್ರತಿವಾರವೂ ನಡೆಯುತ್ತಾರೆ.
ಬೆನ್ನಿಗೆ ಬುಟ್ಟಿಯೊಂದನ್ನು ಕಟ್ಟಿಕೊಂಡು, ತಮ್ಮ ಮಡದಿಯನ್ನೂ ಜೊತೆಗೆ ಕರೆದುಕೊಂಡು ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳುತ್ತಿರುವ ರಾಮ್ ಸಿಂಗ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ರಾಜೀನಾಮೆ ನಂತರ ಮೊದಲ ಸಂದರ್ಶನ: ಆತಂಕ ಹಂಚಿಕೊಂಡ ಸೆಂಥಿಲ್
ಭಾನುವಾರದಂದು ರಾಮ್ ಸಿಂಗ್ ಅವರು ಹತ್ತು ಕಿ.ಮೀ ನಡೆದು ತುರು ನಗರಕ್ಕೆ ತೆರಳಿ ಅಲ್ಲಿನ ಮಾರುಕಟ್ಟೆಯಿಂದ ಸಾವಯನ ತರಕಾರಿ ಖರೀದಿಸುತ್ತಾರೆ. ಹೀಗೆ ಆರು ತಿಂಗಳಿನಿಂದಲೂ ಅವರು ಮಾಡುತ್ತಿದ್ದಾರೆ.
ತುರು ಪಟ್ಟಣದಲ್ಲಿ ಟ್ರಾಫಿಕ್ ಹೆಚ್ಚಿರುತ್ತದೆ, ಇದರ ಬಗ್ಗೆ ಹಲವರು ದೂರು ಹೇಳುತ್ತಲೇ ಇರುತ್ತಾರೆ. ಇವರಿಗೆ ವಾಹನ ಬಿಟ್ಟು ನಡೆದು ಹೋಗಲು ಸಲಹೆ ನೀಡಿದ್ದೆ, ಆದರೆ ಬ್ಯಾಗುಗಳನ್ನು ಹಿಡಿದು ನಡೆಯಲಾಗದು ಎಂದು ಜನರು ಹೇಳಿದ್ದರು. ಹಾಗಾಗಿ ನಾನೇ ಮೊದಲಿಗೆ ಇಲ್ಲಿನ ಸಾಂಪ್ರದಾಯಿಕ ಬೆನ್ನಿಗೆ ಕಟ್ಟಿಕೊಳ್ಳುವ ಬಿದಿರಿನ ಬುಟ್ಟಿ ತೆಗೆದುಕೊಂಡು ಮಾರುಕಟ್ಟೆಗೆ ಬರುವುದನ್ನು ಅಭ್ಯಾಸ ಮಾಡಿಕೊಂಡೆ ಎಂದಿದ್ದಾರೆ ರಾಮ್ ಸಿಂಗ್.
ಕಳೆದ ಭಾನುವಾರ ರಾಮ್ ಸಿಂಗ್ ಅವರು 21 ಕೆ.ಜಿ ತರಕಾರಿಯನ್ನು ಹೊತ್ತುಕೊಂಡು ಹತ್ತು ಕಿ.ಮೀ ನಡೆದು ಮನೆ ತಲುಪಿದ್ದಾರೆ. ಅವರ ಹೆಂಡತಿಯೂ ಜೊತೆಗಿದ್ದು ಮಕ್ಕಳನ್ನು ಇರಿಸುವ ಚೀಲದಲ್ಲಿ ತಮ್ಮ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಅವರೂ ಪತಿಯೊಂದಿಗೆ ಹೆಜ್ಜೆ ಹಾಕಿದ್ದಾರೆ.
ಆಧುನಿಕ ದಿನದ ಸಮಸ್ಯೆಗಳಿಗೆ ಸಂಪ್ರದಾಯಿಕ ಮಾದರಿಯ ಪರಿಹಾರಗಳನ್ನು ನಾವು ಕಂಡುಕೊಳ್ಳಬೇಕಿದೆ. ಈಗಿನ ಯುವಕರು ಫಿಟ್ನೆಸ್ ಕಡೆಗೆ ಗಮನ ನೀಡುತ್ತಿಲ್ಲ, ಅವರಿಗೆ ನಡಿಗೆ ಸಹಾಯ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ರಾಮ್ ಸಿಂಗ್ ಅವರ ಫೇಸ್ಬುಕ್ ಪೋಸ್ಟ್ 5000 ಶೇರ್ಗಳನ್ನು ಕಂಡಿದ್ದು, ಸಾವಿರಾರು ಮಂದಿ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.