ಕೇರಳ ಪ್ರವಾಹ: ಎಂಟು ದಿನ ಜತೆಗಿದ್ದರೂ ಇವರ ಗುರುತು ಯಾರಿಗೂ ಸಿಗಲಿಲ್ಲ!
ಕೊಚ್ಚಿ, ಸೆಪ್ಟೆಂಬರ್ 6: ಕೇರಳದಲ್ಲಿ ಪ್ರವಾಹ ಸಂತ್ರಸ್ತರಿಗೆಂದು ನಿರ್ಮಿಸಲಾಗಿದ್ದ ಪರಿಹಾರ ಕೇಂದ್ರಗಳಲ್ಲಿ ಈ ವ್ಯಕ್ತಿ ಜನರಿಗೆ ಸಹಾಯ ಮಾಡುತ್ತಿದ್ದರು. ಕೊಚ್ಚಿಗೆ ಟ್ರಕ್ಗಳಲ್ಲಿ ಬಂದ ಪರಿಹಾರದ ಸಾಮಗ್ರಿಗಳ ಪೆಟ್ಟಿಗೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ತಂದಿಳಿಸುತ್ತಿದ್ದರು.
ಹೀಗೆ ಎಂಟು ದಿನ ಜನರೊಟ್ಟಿಗೆ ಬೆರೆತು ಕೆಲಸ ಮಾಡಿದರು. ಸಾಮಾನು ಸರಂಜಾಮುಗಳನ್ನು ಸಾಗಿಸಿದರು. ಜನಸಾಮಾನ್ಯರಿಗೆ ಬೇಕಾದ ಕೆಲಸಗಳನ್ನು ಮಾಡಿಕೊಟ್ಟರು. ಆದರೆ ಅವರು ಯಾರೆಂದು ಅಲ್ಲಿನವರಿಗೆ ಗೊತ್ತಾಗಲೇ ಇಲ್ಲ. ಅವರೂ ತಾವು ಯಾರೆಂದು ಹೇಳಿಕೊಳ್ಳಲಿಲ್ಲ.
ಪ್ರವಾಹದ ನಂತರ ಕೇರಳಕ್ಕೆ ಅಪ್ಪಳಿಸಿದ ಇಲಿಜ್ವರ: ಏನಿದು, ಲಕ್ಷಣವೇನು?
ಎಂಟನೆಯ ದಿನ ಅವರನ್ನು ಒಬ್ಬರು ಗುರುತಿಸಿದರು. ತಮ್ಮ ಗುರುತು ಜನರಿಗೆ ಸಿಕ್ಕ ಮರುದಿನವೇ ಅವರು ಹೊರಟು ನಿಂತರು.
ಹೀಗೆ ತಾನೊಬ್ಬ ಅಧಿಕಾರಿ ಎಂಬುದನ್ನು ಬಚ್ಚಿಟ್ಟು ಜನಸಾಮಾನ್ಯರ ಜತೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸಿದ ವ್ಯಕ್ತಿ ಕಣ್ಣನ್ ಗೋಪಿನಾಥನ್ ಎಂಬ ಐಎಎಸ್ ಅಧಿಕಾರಿ. ಅವರ ಈ ಸರಳತೆ ಮತ್ತು ಮಾನವೀಯತೆ ಈಗ ಎಲ್ಲೆಡೆ ಪ್ರಶಂಸೆಗೆ ವ್ಯಕ್ತವಾಗಿದೆ.
ದಾದ್ರಾ ಮತ್ತು ನಗರ್ ಹವೇಲಿಯ ಡಿಸಿ
2012ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ 32ರ ಹರೆಯದ ಕಣ್ಣನ್ ಗೋಪಿನಾಥನ್ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್ ಹವೇಲಿಯ ಜಿಲ್ಲಾಧಿಕಾರಿ. ಅವರಲ್ಲಿ ತಾವೊಬ್ಬ ಜಿಲ್ಲಾಧಿಕಾರಿ ಎಂಬ ಗತ್ತು ಇರಲಿಲ್ಲ. ಕೇರಳ ಪ್ರವಾಹ ಸಂತ್ರಸ್ತರಿಗಾಗಿ ನಿರ್ಮಿಸಿದ್ದ ಪರಿಹಾರ ಕೇಂದ್ರಕ್ಕೆ ಸಾಮಾನ್ಯ ಮನುಷ್ಯನಂತೆ ತೆರಳಿ ಜನರಿಗೆ ನೆರವಾದರು.
ದಾದ್ರಾ ಮತ್ತು ನಗರ್ ಹವೇಲಿಯ ಕಡೆಯಿಂದ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂ. ಮೊತ್ತದ ಚೆಕ್ ನೀಡಲು ಕೇರಳಕ್ಕೆ ಆಗಸ್ಟ್ 26ರಂದು ಅಧಿಕೃತವಾಗಿ ಭೇಟಿ ನೀಡಿದ್ದರು.
NASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರ
Array |
ಊರಿನ ಬದಲು ಪ್ರವಾಹ ಪೀಡಿತ ಸ್ಥಳಕ್ಕೆ
ತಮ್ಮ ಅಧಿಕೃತ ಕೆಲಸ ಮುಗಿದ ಕೂಡಲೇ ಗೋಪಿನಾಥನ್, ರಾಜಧಾನಿ ತಿರುವನಂತಪುರಂನಿಂದ ಬಸ್ ಹತ್ತಿದರು. ಅವರ ಊರು ಇರುವುದು ಪತುಪಳ್ಳಿಯಲ್ಲಿ. ಆದರೆ ಅವರು ಪ್ರಯಾಣ ಬೆಳೆಸಿದ್ದು, ಪ್ರವಾಹದಿಂದ ಅತಿ ಹೆಚ್ಚು ಹಾನಿಗೀಡಾದ ಪ್ರದೇಶವಾದ ಚೆಂಗಣ್ಣೂರುನತ್ತ. ಅಲ್ಲಿ ಮನೆ ಕಳೆದುಕೊಂಡು ಆಶ್ರಯಕ್ಕಾಗಿ ಒದ್ದಾಡುತ್ತಿದ್ದ ಜನರಿಗೆ ನೆರವು ನೀಡಲು ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಅಡ್ಡಾಡಿದರು.
ಕೇರಳ ಪ್ರವಾಹ: ಹವಾಮಾನ ವೈಪರೀತ್ಯದ ಗಂಡಾಂತರದ ಮುನ್ಸೂಚನೆಯೇ?
ಗುರುತಿಸಿದ ಹಿರಿಯ ಅಧಿಕಾರಿ
ಹೀಗೆ ಎಂಟು ದಿನ ಸತತವಾಗಿ ಅವರು ತಮ್ಮ ಗುರುತು ಬಿಟ್ಟುಕೊಡದೆ ಜನರಲ್ಲಿ ಒಂದಾಗಿ ಕೆಲಸ ಮಾಡಿದರು. ಕೇರಳ ಬುಕ್ಸ್ ಆಂಡ್ ಪಬ್ಲಿಕೇಷನ್ ಸೊಸೈಟ್ ಕಚೇರಿಯಲ್ಲಿ ನಿರ್ಮಿಸಲಾಗಿದ್ದ ಪರಿಹಾರ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದ ಅವರನ್ನು ಹಿರಿಯ ಅಧಿಕಾರಿಯೊಬ್ಬರು ಗುರುತಿಸಿದರು.
ಉಳಿದವರನ್ನು ಮಾತನಾಡಿಸಿ, ನನ್ನನ್ನಲ್ಲ
ತಮ್ಮ ಮಹತ್ಕಾರ್ಯದ ಬಗ್ಗೆ ಹೇಳಿಕೊಳ್ಳಲು ಅವರಿಗೆ ಮುಜುಗರ. 'ನಾನು ಮಹತ್ತರವಾದದ್ದೇನನ್ನೂ ಮಾಡಿಲ್ಲ. ನಾನು ಅಲ್ಲಿಗೆ ಭೇಟಿ ನೀಡಿದ್ದಷ್ಟೇ. ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಿಂದಲೂ ಸಾಹಸಪಟ್ಟು ಜನರನ್ನು ರಕ್ಷಿಸಿದ ಅಧಿಕಾರಿಗಳ ಜತೆಗೆ ನೀವು ಮಾತನಾಡಬೇಕು' ಎಂದು ಗೋಪಿನಾಥನ್ ಮಾಧ್ಯಮದವರಿಗೆ ಸಲಹೆ ನೀಡಿದರು.
ತಮ್ಮ ಗುರುತು ಪತ್ತೆಯಾದ ಬಳಿಕ ಜನರು ಎಲ್ಲಿದ್ದರೂ ಓಡಿಬಂದು ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದದ್ದು ಮುಜುಗರ ಉಂಟುಮಾಡಿದ್ದಾಗಿ ಅವರು ಹೇಳುತ್ತಾರೆ.
ಇನ್ನೂ ಇದ್ದರೆ ತೊಂದರೆ
'ಕೆಲವು ಅಧಿಕಾರಿಗಳು ತಮ್ಮ ಯಾವುದಾದರೂ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡರು. ನಾನು ಅಲ್ಲಿಯೇ ಇದ್ದರೆ ಅದರಿಂದ ತೊಂದರೆಯೇ ಹೆಚ್ಚು ಎಂದು ಕೂಡಲೇ ಆ ಸ್ಥಳದಿಂದ ಹೊರಡಲು ತೀರ್ಮಾನಿಸಿದೆ. ಈಶಾನ್ಯ ಭಾಗದಿಂದಲೂ ಸೇರಿದಂತೆ ದೇಶದ ಅನೇಕ ಭಾಗಗಳಿಂದ ಸ್ವಯಂ ಕಾರ್ಯಕರ್ತರು ಬಂದು ಕೆಲಸ ಮಾಡುತ್ತಿರುವುದು ಕಂಡು ಖುಷಿಯಾಯಿತು' ಎಂದು ಹೇಳಿದ್ದಾರೆ.
|
ಅಧಿಕೃತ ಎಂದೇ ಪರಿಗಣಿಸಿದ ಸರ್ಕಾರ
ದಾದ್ರಾ ಮತ್ತು ನಗರ್ ಹವೇಲಿಗೆ ಮರಳಿದ ಬಳಿಕ ಗೋಪಿನಾಥನ್ ಅವರು ತಾವು ಕಳೆದ ಎಂಟು ದಿನಗಳಿಗೆ ರಜೆ ಅರ್ಜಿ ಸಲ್ಲಿಸಿದರು. ಆದರೆ, ಅವರು ಸಲ್ಲಿಸಿದ ರಜೆ ಅರ್ಜಿಯನ್ನು ಮಾನ್ಯ ಮಾಡದ ಸರ್ಕಾರ, ಅವರು ಪರಿಹಾರ ಕೇಂದ್ರಗಳಲ್ಲಿ ಜನರಿಗೆ ಸಹಾಯ ಮಾಡಿದ ದಿನಗಳನ್ನು ಅಧಿಕೃತ ಸರ್ಕಾರಿ ಪ್ರವಾಸ ಎಂದೇ ಪರಿಗಣಿಸಿದೆ.