ವಾಯುಪಡೆಯ ಸಾಮರ್ಥ್ಯವೃದ್ಧಿಗೆ ಪಣ; ವಾಯುಪಡೆ ಮುಖ್ಯಸ್ಥ
ನವದೆಹಲಿ, ಜೂನ್ 19: ದೇಶದಲ್ಲಿ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತೀಯ ವಾಯುಪಡೆಯಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತಿವೆ ಎಂದು ವಾಯುಪಡೆ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಹೇಳಿದ್ದಾರೆ.
ಹೈದರಾಬಾದ್ನ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ಕಂಬೈನ್ಡ್ ಗ್ರಾಜುಯೇಷನ್ ಪರೇಡ್ (ಸಿಜಿಪಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ರಾಜಕೀಯ ಅನಿಶ್ಚಿತತೆ ಹಾಗೂ ಭದ್ರತಾ ಸವಾಲುಗಳನ್ನು ಎದುರಿಸಲು ವಾಯುಪಡೆಯಲ್ಲಿ ಪರಿವರ್ತನೆಗಳಾಗುತ್ತಿವೆ. ಸೂಕ್ತ ತಂತ್ರಜ್ಞಾನಗಳೊಂದಿಗೆ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲಾಗುತ್ತಿದೆ," ಎಂದು ಹೇಳಿದರು.
ವಾಯುಪಡೆಯ ಸೇವೆಗೆ ಕರ್ನಾಟಕದ ಹೆಮ್ಮೆಯ ಮುಧೋಳ ಶ್ವಾನ
ಕಳೆದ ವರ್ಷ ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ನಡೆದ ನಂತರ ವಾಯುಪಡೆ ಇನ್ನಷ್ಟು ಎಚ್ಚರಿಕೆಯಿಂದಿದೆ. ಗಡಿಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ವಾಯುಪಡೆ ದೇಶದಲ್ಲಿ ನಡೆದ ಸಂಘರ್ಷಗಳ ನಿರ್ವಹಣೆಯಲ್ಲಿ ಎಂದಿಗೂ ನಿರ್ಣಾಯಕ ಪಾತ್ರ ವಹಿಸಿದೆ. ಈ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭ, ಫ್ರಾನ್ಸ್ನಿಂದ ಬಂದಿರುವ 36 ರಫೇಲ್ ಯುದ್ಧ ವಿಮಾನಗಳನ್ನು ಮುಂದಿನ ವರ್ಷದೊಳಗೆ ವಾಯುಪಡೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
2022ರೊಳಗೆ ರಫೇಲ್ ವಿಮಾನಗಳನ್ನು ಸೇರ್ಪಡೆಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ. ಕೊರೊನಾ ಕಾರಣ ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.