ಏರ್ ಸ್ಟ್ರೈಕ್ ಸುಳ್ಳು ಎಂದ ಸಂಸ್ಥೆಗೆ ವಾಯುಸೇನೆಯಿಂದ ಮಂಗಳಾರತಿ
ನವದೆಹಲಿ, ಮಾರ್ಚ್ 07: ಏರ್ ಸ್ಟ್ರೈಕ್ ನಡೆದಿದ್ದೇ ಸುಳ್ಳು, ಅಥವಾ ವಾಯುಸೇನೆ ಬಾಂಬ್ ಎಸೆಯುವಾಗ ಗುರಿ ತಪ್ಪಿದೆ ಎಂಬ ಅರ್ಥ ನೀಡುವ ವರದಿಯೊಂದನ್ನು Reuters India ನ್ಯೂಸ್ ಏಜೆನ್ಸಿ ವರದಿ ಮಾಡಿರುವುದನ್ನು ಭಾರತೀಯ ವಾಯುಸೇನೆ ಕಟುವಾಗಿ ಖಂಡಿಸಿದೆ.
"ನಾವು ಗುರಿ ತಪ್ಪಿಲ್ಲ. ಬಾಂಬ್ ಗಳು ಕರಾರುವಾಕ್ಕಾಗಿ ಗುರಿತಲುಪಿ, ಕಟ್ಟಡವನ್ನು ತೂತು ಮಾಡಿಕೊಂಡು ಒಳಹೋಗಿ ಸ್ಫೋಟಿಸಿವೆ. ಕಟ್ಟಡದ ಮೇಲ್ಛಾವಣಿ ತೂತಾಗಿರುವ ಚಿತ್ರ ಉಪಗ್ರಹ ಚಿತ್ರದಲ್ಲಿ ತಿಳಿಯುತ್ತದೆ" ಎಂದು ವಾಯುಸೇನೆ ಹೇಳಿದೆ.
ಏರ್ ಸ್ಟ್ರೈಕ್ ನಂತರ ಬಾಲಕೋಟ್ ಜೈಷ್ ತಾಣ ಏನಾಗಿದೆ? ಚಿತ್ರ ನೋಡಿ
ಫೆಬ್ರವರಿ 26 ರಂದು ಭಾರತೀಯ ವಾಯು ಸೇನೆ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 250-300 ಭಯೋತ್ಪಾದಕರು ಸತ್ತಿರಬಹುದು ಎದು ಮಾಧ್ಯಮಗಳೇ ವರದಿ ಮಾಡಿದ್ದವು. ಅದಕ್ಕೆ ಪೂರಕ ಎಂಬಂತೆ ಉಪಗ್ರಹ ಚಿತ್ರವೂ ಬಿಡುಗಡೆಯಾಗಿತ್ತು. ಅಂದು ದಾಳಿ ನಡೆದಿದ್ದು ಸತ್ಯ, 35 ಕ್ಕೂ ಹೆಚ್ಚು ಉಗ್ರರ ಹೆಣವನ್ನು ಪಾಕ್ ಸೈನಿಕರೇ ಸ್ಥಳಾಂತರಿಸಿದ್ದನ್ನು ನಾವು ಕಂಡಿದ್ದೇವೆ ಎಂದು ಸ್ಥಳೀಯರೇ ಹೇಳಿದ್ದೂ ವರದಿಯಾಗಿತ್ತು. ಇಷ್ಟೆಲ್ಲ ಆದರೂ ಈ ದಾಳಿಯೇ ಸುಳ್ಳು ಎಂಬ ವರದಿಗಳೂ ಹರಿದಾಡುತ್ತಿದೆ.
ರಾಜಕೀಯ ಲೆಕ್ಕಾಚಾರ ಒತ್ತಟ್ಟಿಗಿರಲಿ, ಆದರೆ ಭಾರತೀಯ ವಾಯುಸೇನೆ ಉಗ್ರನಿಗ್ರಹಕ್ಕಾಗಿ ಪ್ರಾಣದ ಹಂಗು ತೊರೆದು ಮಾಡಿದ ಸಾಹಸ ಕಾರ್ಯವನ್ನೂ ರಾಜಕೀಯ ಹಿತಾಸಕ್ತಿಗಾಗಿ ಅಲ್ಲಗಳೆಯುವುದ ಸರಿಯೇ ಎಂಬ ಪ್ರಶ್ನೆ ಈಗ ಎದ್ದಿದೆ.
ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ?
Reuters India ಪ್ರಕಟಿಸಿದ ಚಿತ್ರ ಎಷ್ಟರ ಮಟ್ಟಿಗೆ ನಿಖಕರವಾದುದು ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಕೆಲಸವಾಗುತ್ತಿದೆ. ಆದರೆ ಈ ವರದಿಯನ್ನಂತೂ ವಾಯುಸೇನೆ ಸಾರಾಸಗಟಾಗಿ ತಿರಸ್ಕರಿಸಿದೆ.