ಹೆಲಿಕಾಪ್ಟರ್ ಪತನ; ತನಿಖೆ ಉಸ್ತುವಾರಿ ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ಗೆ
ನವದೆಹಲಿ, ಡಿಸೆಂಬರ್ 09; ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ತನಿಖಾ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ಹೆಲಿಕಾಪ್ಟರ್ ಪತನದ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘಟನೆಯ ತನಿಖೆ ಬಗ್ಗೆ ಮಾಹಿತಿ ನೀಡಿದರು. ಆಗ ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ತನಿಖೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದರು.
Timeline:ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ
ಏರ್ ಮಾರ್ಷಲ್ ಮನ್ವಿಂದರ್ ಸಿಂಗ್ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್ನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ. ಸ್ವತಃ ಹೆಲಿಕಾಪ್ಟರ್ ಪೈಲೆಟ್ ಆಗಿದ್ದಾರೆ. ಈಗಾಗಲೇ ಎಂಐ-17ವಿ5 ಹೆಲಿಕಾಪ್ಟರ್ ಅಪಘಾತ ಸ್ಥಳದಿಂದ ಬ್ಲಾಕ್ ಬಾಕ್ಸ್ ಅನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
ಜನರಲ್ ಬಿಪಿನ್ ರಾವತ್ ಹಠಾತ್ ನಿಧನ: ಯಾರಾಗಲಿದ್ದಾರೆ ಹೊಸ ಸಿಡಿಎಸ್?
ವಾಯುಪಡೆ ಮುಖ್ಯಸ್ಥರ ಭೇಟಿ; ಭಾರತೀಯ ವಾಯುಪಡೆ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ. ಆರ್. ಚೌಧರಿ ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿದರು. ತಮಿಳುನಾಡು ಡಿಜಿಪಿ ಸಿ. ಶೈಲೇಂದ್ರ ಬಾಬು ಸಹ ಘಟನಾ ಸ್ಥಳದಲ್ಲಿದ್ದಾರೆ.
ಬಿಪಿನ್ ರಾವತ್ ಸಾವು; ವಿವಿಧ ದೇಶಗಳಿಂದ ಸಂತಾಪ
ತಮಿಳುನಾಡು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಅಧಿಕಾರಿಗಳ ತಂಡದಲ್ಲಿ ಇಲಾಖೆಯ ನಿರ್ದೇಶಕ ಶ್ರೀನಿವಾಸನ್ ಇದ್ದು, ತಂಡಕ್ಕೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಬುಧವಾರ ಮಧ್ಯಾಹ್ನ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡಿತ್ತು. ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ 14 ಜನರ ಪೈಕಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ, ಏಳು ಅಧಿಕಾರಿಗಳು, ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್ನಲ್ಲಿದ್ದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
7 ನಿಮಿಷ ಬಾಕಿ ಇತ್ತು; ಬುಧವಾರ 11.48ಕ್ಕೆ ಸೂಲೂರಿನಲ್ಲಿರುವ ವಾಯುಪಡೆ ತರಬೇತಿ ಕೇಂದ್ರದಿಂದ ಹೆಲಿಕಾಪ್ಟರ್ ಟೇಕಾಫ್ ಆಗಿತ್ತು. 12.08ಕ್ಕೆ ಸಂಪೂರ್ಣ ಸಂಪರ್ಕ ಕಳೆದುಕೊಂಡಿತ್ತು. ಲ್ಯಾಂಡ್ ಆಗಲು 7 ನಿಮಿಷಗಳು ಮಾತ್ರ ಬಾಕಿ ಇತ್ತು ಎಂದು ಲೋಕಸಭೆಯಲ್ಲಿ ಘಟನೆ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಪಾರ್ಥಿವ ಶರೀರ ದೆಹಲಿಗೆ; ಬುಧವಾರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಎಲ್ಲಾ 13 ಜನರ ಪಾರ್ಥಿವ ಶರೀರವನ್ನು ಸೂಲೂರಿನಲ್ಲಿರುವ ವಾಯುಪಡೆ ತರಬೇತಿ ಕೇಂದ್ರದಿಂದ ದೆಹಲಿಗೆ ರವಾನೆ ಮಾಡಲಾಗುತ್ತಿದೆ. ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ತರಲಾಗುತ್ತಿದೆ. ಸೇನೆ, ಗಣ್ಯರು ಅಂತಿಮ ನಮನವನ್ನು ದೆಹಲಿಯಲ್ಲಿ ಸಲ್ಲಿಸಲಿದ್ದಾರೆ.
ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಅಂತ್ಯ ಸಂಸ್ಕಾರವನ್ನು ಸಂಪೂರ್ಣ ಸೇನಾ ಗೌರವದೊಂದಿಗೆ ನಡೆಸಲಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಗುರುವಾರ ಸಂಜೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ.
ಬ್ಲಾಕ್ ಬಾಕ್ಸ್ ಪತ್ತೆ; ಎಂಐ-17ವಿ5 ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆ ನಡೆಸುತ್ತಿರುವ ತಂಡ ಗುರುವಾರ ಬ್ಲಾಕ್ ಬಾಕ್ಸ್ ಪತ್ತೆ ಹಚ್ಚಿದೆ. ಅಪಘಾತ ನಡೆದ ಸ್ಥಳದಿಂದ 300 ಮೀಟರ್ನಿಂದ 1 ಕಿ. ಮೀ. ತನಕ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಹೆಲಿಕಾಪ್ಟರ್ ಪತನಗೊಳ್ಳುವ ಅಂತಿಮ ಕ್ಷಣದ ತನಕದ ಮಾಹಿತಿ ಬ್ಲಾಕ್ ಬಾಕ್ಸ್ನಲ್ಲಿ ದಾಖಲಾಗಿರುತ್ತದೆ. ಇದು ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.