ಎಚ್ಎಎಲ್ಗೆ ನಾವು ವಿನಾಯಿತಿ ನೀಡಬಹುದು; ಆದರೆ ವೈರಿಗಳು ನಮಗೆ ನೀಡುತ್ತಾರಾ?
ನವದೆಹಲಿ, ಫೆಬ್ರವರಿ 1: ಭಾರತೀಯ ವಾಯುಪಡೆ (ಐಎಎಫ್), ಎಚ್ಎಎಲ್ನ ಕಾರ್ಯಕ್ಷಮತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
'ಸೇವೆಯ ಸಲುವಾಗಿ ನಾವು ಎಚ್ಎಎಲ್ಗೆ ಅನೇಕ ವಿನಾಯ್ತಿಗಳನ್ನು ನೀಡಿದ್ದೆವು. ಆದರೆ, ನಾವು ಯುದ್ಧದಲ್ಲಿ ವೈರಿಗಳನ್ನು ಎದುರಿಸುವಾಗ ಅವರು ನಮಗೆ ವಿನಾಯ್ತಿ ನೀಡುತ್ತಾರೆಯೇ?' ಎಂದು ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಎಚ್ಎಎಲ್ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮಿರಾಜ್ ಯುದ್ಧ ವಿಮಾನ ಪತನಗೊಂಡ ಘಟನೆಯ ಬೆನ್ನಲ್ಲೇ ಈ ಹೇಳಿಕೆ ನೀಡಲಾಗಿದೆ.
ನವದೆಹಲಿಯಲ್ಲಿ ನಡೆದ ಹತ್ತನೇ ಜಂಬೋ ಮಜುಮ್ದಾರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಎಚ್ಎಎಲ್ನ ಸ್ವದೇಶ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್ ಅನ್ನು ಐಎಎಫ್ ಮೆಚ್ಚಿಕೊಂಡಿಲ್ಲ ಎಂಬ ಆರೋಪದ ಕುರಿತಾದ ಟೀಕೆಗಳಿಗೆ ಪ್ರತಿಕ್ರಿಯಿಸಿದರು.
ಐಎಎಫ್ ಯುದ್ಧ ವಿಮಾನದ ವಿಶೇಷಣಗಳನ್ನು ಮತ್ತು ತನ್ನ ಅಗತ್ಯಗಳನ್ನು ನಿರಂತರವಾಗಿ ಬದಲಿಸುತ್ತಿತ್ತು ಎಂಬ ಆರೋಪಗಳಿದ್ದವು. ಇದಕ್ಕೆ ಉತ್ತರಿಸಿದ ಧನೋವಾ, 'ಆರೋಪಿಸಿರುವಂತೆ ಐಎಎಫ್ ಯಾವುದೇ ಗುರಿಗಳನ್ನು ಬದಲಿಸಿಲ್ಲ. 1985ರಲ್ಲಿ ಹೊರಡಿಸಿದ 20 ಎಲ್ಸಿಎ ಎಂಕೆ-1ಯ ನಿರ್ದಿಷ್ಟ ಗುಣಮಟ್ಟದ ಅಗತ್ಯಗಳನ್ನೇ ಕಾಯ್ದುಕೊಂಡಿದ್ದೆವು. ಅಲ್ಲದೆ ಎಚ್ಎಎಲ್ ಕೂಡ ಕೇವಲ 10 ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ' ಎಂದು ವಿವರಿಸಿದರು.
ಉದ್ಯೋಗಿಗಳಿಗೆ ಸಂಬಳ ನೀಡಲು ಸಾಲ ಮಾಡಿದ ಎಚ್ಎಎಲ್
ಸ್ವದೇಶಿ ನಿರ್ಮಿತ ಮಾರುತ್, ಕಿರಣ್, ಅಜೀತ್, ಸರಸ್ ಮುಂತಾದ ಯುದ್ಧ ವಿಮಾನಗಳ ಪರೀಕ್ಷೆ ಮತ್ತು ಮೌಲ್ಯ ನಿರ್ಣಯದ ವೇಳೆ ಸಂಭವಿಸಿದ ವೈಮಾನಿಕ ಅಪಘಾತಗಳಲ್ಲಿ 17 ಪೈಲಟ್ಗಳು ಮತ್ತು ಎಂಜಿನಿಯರ್ಗಳನ್ನು ಕಳೆದುಕೊಂಡಿದ್ದೇವೆ ಎಂದು ಅವರು ಹೇಳಿದರು.
ಏರ್ ಚೀಫ್ ಮಾರ್ಷಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಎಚ್ಎಎಲ್ ವಕ್ತಾರರು ನಿರಾಕರಿಸಿದರು.
ಸಾಲದ ಸುಳಿಯಲ್ಲಿ ಎಚ್ಎಎಲ್: ಸಚಿವೆ ಜೊತೆ ಅಧಿಕಾರಿಗಳ ಚರ್ಚೆ
'ವಿದೇಶಿ ವಿಮಾನ ತಯಾರಕ ಸಂಸ್ಥೆಗಳಿಗೆ ಐಎಎಫ್ ವಿನಾಯಿತಿ ಮತ್ತು ಪರಿವರ್ತನೆಯ ಅವಕಾಶಗಳನ್ನು ನೀಡುವುದಿಲ್ಲವೇ? ಡಿಆರ್ಡಿಒ ಮತ್ತು ಎಡಿಎ ಗಳಿಗೆ ವಿನಾಯಿತಿ ನೀಡಿರುವಾಗ ಎಚ್ಎಎಲ್ಅನ್ನು ಏಕೆ ಹೊರಗಿಡಲಾಗಿದೆ' ಎಂದು ಎಚ್ಎಎಲ್ನ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಪ್ರಶ್ನಿಸಿದರು.