ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಉರ್ದು ಸಾಹಿತಿಯ ಅಚ್ಚರಿಯ ಹೇಳಿಕೆ
ಲಕ್ನೋ, ಅ 24: ಲೇಖಕರ ಮೇಲೆ ಆಗುತ್ತಿರುವ ದಾಳಿ ಮತ್ತು ದಾದ್ರಿ ಘಟನೆಯನ್ನು ಖಂಡಿಸಿ ನಾಡಿನ ಸಾಹಿತಿಗಳು ಪ್ರತಿಭಟನೆ ನಡೆಸುತ್ತಿದ್ದರೆ, ಉರ್ದು ಸಾಹಿತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಪ್ರಧಾನಿ ಮೋದಿ ನನಗೆ ಕಿರಿಯ ಸಹೋದರನಿದ್ದಂತೆ, ನಾನು ಅವರ ಪಾದರಕ್ಷೆಯನ್ನು ಎತ್ತಲು ಸಿದ್ದ ಎಂದು ಉರ್ದು ಕವಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮುನಾವರ್ ರಾಣಾ ಹೇಳಿದ್ದಾರೆ. (ಅಕಾಡೆಮಿ ತುರ್ತು ಸಭೆಯ ಮುನ್ನ ಲೇಖಕರ ಪ್ರತಿಭಟನೆ)
ನಗರದಲ್ಲಿ ಶುಕ್ರವಾರ (ಅ 23) ಮಾತನಾಡುತ್ತಿದ್ದ ರಾಣಾ, ತನ್ನನ್ನು ಸಹೋದರನಂತೆ ಭಾವಿಸಿ ಮೋದಿ ನನಗೆ ಆಹ್ವಾನ ನೀಡಿದರೆ, ಯಾವುದೇ ಬೇಸರವಿಲ್ಲದೆ ಅವರ ಪಾದರಕ್ಷೆ ಹೊತ್ತಯ್ಯೊಲು ಸಿದ್ದ ಎಂದು ಹೇಳಿದ್ದಾರೆ.
ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುತ್ತಿರುವುದಕ್ಕೆ ಆರಂಭದಿಂದಲೇ ಅಪಸ್ವರ ಎತ್ತಿದ್ದ ರಾಣಾ, ಮೋದಿ ಬಗ್ಗೆ ತನ್ನ ಅಭಿಮಾನದ ಮಾತನ್ನು ತನ್ನ ಕವಿತೆಯ ಸಾಲಿನಲ್ಲಿ ಬರೆದಿರುವುದು ವಿಶೇಷ.
ಮಾಧ್ಯಮವರೊಂದಿಗೆ ಮಾತನಾಡುತ್ತಿದ್ದ ರಾಣಾ, ಪ್ರಧಾನಮಂತ್ರಿ ಕಚೇರಿಯಿಂದ ಕರೆ ಬಂದಿದ್ದು ಸಾಹಿತಿಗಳು ವಿರೋಧಿಸಿದರೂ ನಾನು ಪ್ರಧಾನಿಯವರನ್ನು ಭೇಟಿಯಾಗಲಿದ್ದೇನೆಂದು ರಾಣಾ ಹೇಳಿದ್ದಾರೆ. ಮುಂದೆ ಓದಿ..
ಸಾಹಿತ್ಯ ಅಕಾಡೆಮಿ ಖಂಡನೆ
ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯಾಗಿದ್ದ ಎಂ ಎಂ ಕಲಬುರ್ಗಿ ಹಾಗೂ ಇತರರ ಹತ್ಯೆಯನ್ನು ಖಂಡಿಸಿ ಬರಹಗಾರರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಸಾಹಿತ್ಯ ಅಕಾಡೆಮಿ ಕೊನೆಗೂ ಮಣಿದಿದ್ದು ಘಟನೆಯನ್ನು ಖಂಡಿಸಿದೆ.
ಸಾಹಿತಿಗಳನ್ನು ಕಿಚಾಯಿಸಿದ್ದ ರಾಣಾ
ಸಾಹಿತಿಗಳು ಪ್ರಶಸ್ತಿ ಹಿಂದಿರುಗುಸುತ್ತಿರುವುದಕ್ಕೆ ವ್ಯಂಗ್ಯವಾಡಿದ್ದ ರಾಣಾ, ತಮ್ಮ ಬರವಣಿಗೆಯಲ್ಲಿ ನಂಬಿಕೆ ಇಲ್ಲವೋ ಅಂತವರು ಮಾತ್ರ ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ ಎಂದಿದ್ದರು. ಕೊನೆಗೆ ಒತ್ತಡಕ್ಕೆ ಮಣಿದು ತನಗೆ ಸಂದ ಪ್ರಶಸ್ತಿಯನ್ನೂ ರಾಣಾ ಹಿಂದಿರುಗಿಸಿದ್ದರು. (ಚಿತ್ರದಲ್ಲಿ ಮುನಾವರ್ ರಾಣಾ)
ತೀವ್ರ ಟೀಕೆಗೆ ಒಳಗಾಗಿದ್ದ ಸಾಹಿತ್ಯ ಅಕಾಡೆಮಿ
ವಿಚಾರವಾದಿಗಳ ಹತ್ಯೆ, ದಾದ್ರಿ ಘಟನೆ ಮುಂತಾದ ಪ್ರಕರಣಗಳಿಗೆ ಪ್ರತಿಕ್ರಿಯೆ ನೀಡದೆ ಮೌನ ತಾಳಿದ್ದಕ್ಕೆ ಸಾಹಿತ್ಯ ಅಕಾಡೆಮಿಯು ಬರಹಗಾರರಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಹೀಗಾಗಿ, ಅಕಾಡೆಮಿಯು ತುರ್ತು ಸಭೆಯನ್ನು ಕರೆದಿತ್ತು.
ಸಾಹಿತಿಗಳ ರಕ್ಷಣೆಗೆ ಕ್ರಮ
ವಿಶ್ವನಾಥ್ ಪ್ರಸಾದ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಲಬುರ್ಗಿ ಹತ್ಯೆಯನ್ನು ಖಂಡಿಸುವ ನಿರ್ಣಯ ಅಂಗೀಕರಿಸಲಾಯಿತು. ಅಲ್ಲದೇ, ಸಾಹಿತಿಗಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಸಾಹಿತ್ಯ ಅಕಾಡೆಮಿ ನೀಡಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಎಲ್ಲಾ ಸಾಹಿತಿಗಳು ಮರಳಿ ಅದನ್ನು ಪಡೆಯಬೇಕು, ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಾಹಿತಿಗಳು ರಾಜೀನಾಮೆ ಹಿಂದಕ್ಕೆ ಪಡೆಯಬೇಕು ಎಂದು ಸಭೆಯಲ್ಲಿ ಮನವಿಯನ್ನೂ ಮಾಡಲಾಯಿತು.
ಪ್ರಶಸ್ತಿ ಹಿಂದಿರುಗಿಸಿದವರು
ಇದುವರೆಗೆ ಕುಂ.ವೀರಭದ್ರಪ್ಪ, ಅಶೋಕ್ ವಾಜಪೇಯಿ, ಉದಯ್ ಪ್ರಕಾಶ್, ನಯನತಾರಾ ಸೆಹಗಲ್, ಕೇಕಿ ಎನ್. ದಾರುವಾಲಾ ಸೇರಿದಂತೆ ಸುಮಾರು 35 ಬರಹಗಾರರು ಪ್ರಶಸ್ತಿಗಳನ್ನು ಮರಳಿಸಿದ್ದಾರೆ. ಅಲ್ಲದೇ ಐವರು ಅಕಾಡೆಮಿಯ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ.