ರಾಹುಲ್ ವಿರುದ್ದ ಸಹೋದರ ಪ್ರೇಮ ಮೆರೆದ ವರುಣ್ ಗಾಂಧಿ
ಲಕ್ನೋ, ಮಾ 15: ರಾಜಕೀಯ ಎಂದರೆ ಬರೀ ವಿರೋಧಿಗಳ ಮೇಲೆ ಆರೋಪ, ಪ್ರತ್ಯಾರೋಪ ಮಾಡುವುದಲ್ಲ, ಸಕರಾತ್ಮಕ ಮನಸ್ಸನ್ನೂ ಹೊಂದಿರ ಬೇಕು ಎನ್ನುವುದಕ್ಕೆ ಬಿಜೆಪಿಯ ಫೈರ್ ಬ್ರ್ಯಾಂಡ್ ವರುಣ್ ಗಾಂಧಿ ಉದಾಹರಣೆಯಾಗಿದ್ದಾರೆ. ಸಹೋದರ ರಾಹುಲ್ ಗಾಂಧಿ ವಿರುದ್ದ ನಾನು ಪ್ರಚಾರ ಮಾಡಲಾರೆ ಎಂದು ವರುಣ್ ಗಾಂಧಿ ಹೇಳಿದ್ದಾರೆ.
ನಾನು ಎಂದಿಗೂ ನನ್ನ ವಿರೋಧಿಗಳ ವಿರುದ್ದ ಕೆಟ್ಟ ಅಭಿಪ್ರಾಯವನ್ನು ವ್ಯಕ್ತ ಪಡಿಸಲಾರೆ. ನಾನು ರಾಜಕೀಯದಲ್ಲಿ ಸಭ್ಯತೆ ಇರಬೇಕೆಂದು ಬಯಸುತ್ತೇನೆ ಎಂದು ಬಿಜೆಪಿಯ ಸುಲ್ತಾನಪುರ ಕ್ಷೇತ್ರದ ಅಭ್ಯರ್ಥಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವರುಣ್ ಗಾಂಧಿ ಹೇಳಿದ್ದಾರೆ.
ರಾಜಕೀಯದಲ್ಲಿ ಸಕಾರಾತ್ಮಕ ಮನೋಭಾವವನ್ನು ಹೊಂದಿರುವವನು ನಾನು. ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ, ನಾನು ಅವರ ವಿರುದ್ದ ಪ್ರಚಾರ ಮಾಡುವುದಿಲ್ಲ ಎಂದು ವರುಣ್ ಗಾಂಧಿ ಸ್ಪಷ್ಟ ಪಡಿಸಿದ್ದಾರೆ.
ಅಮೇಠಿ ಕ್ಷೇತ್ರಕ್ಕೆ ಹೊಂದಿ ಕೊಂಡಿರುವ ಸುಲ್ತಾನ್ ಪುರ್ ಕ್ಷೇತ್ರದಿಂದ ವರುಣ್ ಗಾಂಧಿ ಸ್ಪರ್ಧಿಸಲು ಬಯಸುತ್ತಿದ್ದಂತೆ, ವರುಣ್ ಗಾಂಧಿ ತನ್ನ ಸಹೋದರ ರಾಹುಲ್ ಗಾಂಧಿಗೆ ಹತ್ತಿರವಾಗುತ್ತಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇದಕ್ಕೆ ಉತ್ತರಿಸಿದ ವರುಣ್ ಗಾಂಧಿ, ನಾನು ಎಂದೂ ರಾಹುಲ್ ಗಾಂಧಿ ವಿರುದ್ದ ಪ್ರಚಾರ ಮಾಡಲಾರೆ. ನನ್ನ ಈ ನಿಲುವನ್ನು ನನ್ನ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಎಂದಿದ್ದಾರೆ. (ವರುಣ್ ಗಾಂಧಿ ದೋಷ ಮುಕ್ತ)
ಉತ್ತರ ಪ್ರದೇಶ ಪಿಲಿಭಿಟ್ ಕ್ಷೇತ್ರದ ಹಾಲಿ ಸಂಸದರಾಗಿರುವ ವರುಣ್ ಗಾಂಧಿ ಸುಲ್ತಾನ್ ಪುರದಿಂದ, ಅನೋಲ ಕ್ಷೇತ್ರದ ಸಂಸದೆಯಾಗಿರುವ ಮೇನಕಾ ಗಾಂಧಿ ಪಿಲಿಭಿಟ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಈ ಹಿಂದೆ ತನ್ನ ಕಟ್ಟಾ ಹಿಂದುತ್ವ ನಿಲುವಿನಿಂದ ವರುಣ್ ಗಾಂಧಿ ಹಲವು ಬಾರಿ ಪಕ್ಷವನ್ನು ಮುಜುಗರಕ್ಕೆ ತಂದಿಟ್ಟಿದ್ದರು. ನಂತರ ರಾಜಕೀಯದಲ್ಲಿ ಪ್ರಭುದ್ದತೆ ಸಾಧಿಸಿದ ವರುಣ್ ಪಕ್ಷ ಹಾಕಿದ ಗೆರೆಯಲ್ಲೇ ರಾಜಕೀಯ ನಡೆ ಇಡುತ್ತಿದ್ದಾರೆ.