ಭಾರತಕ್ಕೆ ಹೋದ್ರೆ ನಾನು ಫಿನಿಷ್: ಪೊಲೀಸರ ಮುಂದೆ ಛೋಟಾ ರಾಜನ್
ದಾವೂದ್ ಇಬ್ರಾಹಿಂನ 'ಡಿ ಗ್ಯಾಂಗ್' ನಿಂದ ತನಗೆ ಮುಂದೊದಗಬಹುದಾದ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಛೋಟಾ ರಾಜನ್ ಪೊಲೀಸರಿಗೆ ತಾನೇ ಶರಣಾಗಿದ್ದಾನೆ ಎನ್ನುವ ಬಲವಾದ ಶಂಕೆಯನ್ನು ಸಿಬಿಐ ಮತ್ತು ಕ್ರೈಂ ಬ್ರಾಂಚ್ ಅಧಿಕಾರಿಗಳು ವ್ಯಕ್ತ ಪಡಿಸಿದ್ದರು.
ಇಂಡೋನೇಷ್ಯಾ ಪೊಲೀಸರ ವಶದಲ್ಲಿರುವ ಛೋಟಾ ರಾಜನ್ ವಿಚಾರಣೆಯ ವೇಳೆ ಭಾರತಕ್ಕೆ ದಯವಿಟ್ಟು ನನ್ನನ್ನು ಕಳುಹಿಸಬೇಡಿ ಎಂದು ಅಲ್ಲಿನ ಪೊಲೀಸರ ಬಳಿ ಅಂಗಲಾಚುತ್ತಿದ್ದಾನೆ ಎನ್ನುವ ಸುದ್ದಿ ಹೊರಬಿದ್ದಿದೆ.
ಛೋಟಾ ರಾಜನ್ ಈ ಮನವಿಯಿಂದಾಗಿ ಸಿಬಿಐ ಅಧಿಕಾರಿಗಳ ಶಂಕೆಗೆ ಪುಷ್ಟಿ ಸಿಕ್ಕಿದಂತಾಗಿದೆ. ದಾವೂದ್ ನಿಂದ ತಪ್ಪಿಸಿಕೊಳ್ಳಲು ರಾಜನ್ ತನ್ನ ಬಂಧನಕ್ಕೆ ತಾನೇ ಯೋಜನೆ ರೂಪಿಸಿದ್ದ ಎಂದು ಸಿಬಿಐ ಮತ್ತು ಮುಂಬೈ ಕ್ರೈಂ ಪೊಲೀಸರ ಅನುಮಾನವಾಗಿತ್ತು. (ಕಳ್ಳಭಟ್ಟಿ ಖದೀಮ ಡಾನ್ ಆಗಿದ್ದು ಹೀಗೆ)
ಇಂಡೋನೇಷ್ಯಾ ಪೊಲೀಸರ ಪ್ರಾಥಮಿಕ ವಿಚಾರಣೆಯ ವೇಳೆ ಭಾರತದಲ್ಲಿ ನಾನು ಸುರಕ್ಷಿತವಾಗಿರುವುದಿಲ್ಲ, ಅಲ್ಲಿ ನನ್ನನ್ನು ಸಾಯಿಸುತ್ತಾರೆ. ನನ್ನನ್ನು ಜಿಂಬಾವ್ವೆಗೆ ಕಳುಹಿಸಿ ಎಂದು ಅಲ್ಲಿನ ಪೊಲೀಸರ ಬಳಿ ಛೋಟಾ ರಾಜನ್ ಮನವಿ ಮಾಡಿದ್ದಾನೆ.
ಛೋಟಾ ರಾಜನ್ ನನ್ನು ವಿಚಾರಣೆ ನಡೆಸುತ್ತಿರುವ ಬಾಲಿಯ ಸಿಐಡಿ ಅಧಿಕಾರಿ ಮೇಜರ್ ರೇನ್ಹಾರ್ಡ್ ಜೊತೆ ಇಂಡಿಯಾ ಟುಡೇ ನಡೆಸಿದ ಸಂದರ್ಶನದಲ್ಲಿ ಈ ವಿಷಯ ಬಹಿರಂಗವಾಗಿದೆ. ಇನ್ನೂ ಮುಂದೆ ಓದಿ..
ಡುಪ್ಲಿಕೇಟ್ ಪಾಸ್ ಪೋರ್ಟ್
ಮೊದಲು ವಿಚಾರಣೆ ನಡೆಸಿದಾಗ ತನ್ನ ಹೆಸರನ್ನು ಬಹಿರಂಗ ಪಡಿಸಲು ಛೋಟಾ ರಾಜನ್ ಹಿಂದೇಟು ಹಾಕಿದ್ದಾನೆ. ಮೋಹನ್ ಕುಮಾರ್ ಎನ್ನುವ ಹೆಸರಿನಲ್ಲಿದ್ದ ಪಾಸ್ ಪೋರ್ಟನ್ನು ನಮಗೆ ತೋರಿಸುತ್ತಿದ್ದ. ನಾವು ತೀವ್ರ ವಿಚಾರಣೆ ನಡೆಸಿದ ನಂತರ ತನ್ನ ನಿಜವಾದ ಹೆಸರನ್ನು ಬಹಿರಂಗಗೊಳಿಸಿದ ಎಂದು ಸಿಐಡಿ ಅಧಿಕಾರಿ ರೇನ್ಹಾರ್ಡ್ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಪಾಸ್ ಪೋರ್ಟಿನಲ್ಲಿ ಹುಟ್ಟಿದ ಸ್ಥಳ ಮಂಡ್ಯ ಎಂದು ಛೋಟಾ ರಾಜನ್ ನಮೂದಿಸಿದ್ದಾನೆ.
ಛೋಟಾ ರಾಜನ್ ಶರಣಾಗುತ್ತೇನೆ ಎಂದಿದ್ದ
ಕೆಲವೊಂದು ಮಾಹಿತಿಯ ಪ್ರಕಾರ ಆರು ತಿಂಗಳ ಹಿಂದೆಯೇ ಮುಂಬೈ ಪೊಲೀಸರ ಬಳಿ ತಾನು ಶರಣಾಗುತ್ತೇನೆ ಎಂದು ಛೋಟಾ ರಾಜನ್ ಮನವಿ ಮಾಡಿದ್ದ. ರಾಜೇಂದ್ರ ಸದಾಶಿವ್ ನಿಖ್ಲಾಂಜೆ ದೇಶದೆಲ್ಲಡೆ ಇಪ್ಪತ್ತಕ್ಕೂ ಹೆಚ್ಚು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ. 1995ರಲ್ಲಿ ಕೇಂದ್ರ ಸರಕಾರ ಈತನ ವಿರುದ್ದ ಇಂಟರ್ ಪೋಲ್ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿತ್ತು.
ಪ್ರಧಾನಮಂತ್ರಿ ಕಾರ್ಯಾಲಯ
ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಮಂಗಳವಾರ (ಅ 27) ಬೆಳಗ್ಗೆ ಸಭೆ ಸೇರಿದ್ದ R&AW, ಗುಪ್ತಚರ ಇಲಾಖೆ ಮತ್ತು ಗೃಹಸಚಿವಾಲಯದ ಅಧಿಕಾರಿಗಳು ಛೋಟಾ ರಾಜನ್ ನನ್ನು ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಬಗ್ಗೆ ವಿಷ್ಕೃತ ಚರ್ಚೆ ನಡೆದಿದೆ. ಆದರೆ ಸಭೆಯಲ್ಲಿನ ಮಾಹಿತಿಯನ್ನು ಬಹಿರಂಗ ಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸರಳ ಜೀವನ
ಕಳೆದ ಎರಡು ಮೂರು ವರ್ಷದಿಂದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸರಳ ಜೀವನ ನಡೆಸುತ್ತಿರುವ ಛೋಟಾ ರಾಜನ್ ಚಲನವಲನವನ್ನು ಸೂಕ್ಶ್ಮವಾಗಿ ಗಮನಿಸುತ್ತಿದ್ದು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದ ಪೊಲೀಸ್ ಅಧಿಕಾರಿಗಳ ಜೊತೆ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆಂದು ಸಿಬಿಐ ವರಿಷ್ಠ ಅನಿಲ್ ಸಿನ್ಹಾ ಹೇಳಿದ್ದಾರೆ.
ರಾಜನ್ ಎಲ್ಲೇ ಇರಲಿ ಅವನ ಹತ್ಯೆಯೇ ನಮ್ಮ ಗುರಿ
ಛೋಟಾ ರಾಜನ್ ಬಂಧನ ನಮಗೆ ಸಿಹಿಸುದ್ದಿಯಲ್ಲ. ರಾಜನ್ ಮೂಲಕ ನಮ್ಮ ಮಾಹಿತಿಯನ್ನು ಪಡೆಯುವುದೇ ಭಾರತದ ಉದ್ದೇಶ. ನಮ್ಮ ಮೇಲೆ ಭಾರತ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ. ರಾಜನ್ ಎಲ್ಲೇ ಇರಲಿ ಅವನ ಹತ್ಯೆಯೇ ನಮ್ಮ ಪರಮಗುರಿ ಎಂದು ದಾವೂದ್ ಇಬ್ರಾಹಿಂ ಪರಮಾಪ್ತ, ಬಲಗೈ ಭಂಟ ಛೋಟಾ ಶಕೀಲ್, ಛೋಟಾ ರಾಜನ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದಾನೆ.