ಕಾಂಗ್ರೆಸ್ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್ಗೆ ಐಟಿ ಸಮನ್ಸ್
ನವದೆಹಲಿ, ಮಾರ್ಚ್ 6: ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಕಾಂಗ್ರೆಸ್ ಪಕ್ಷದ ಮೇಲೆ ಐಟಿ ದಾಳಿ ನಡೆಸಿತ್ತು. ಸುಮಾರು 550 ಕೋಟಿ ರು ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.
ಏಪ್ರಿಲ್ 2, 2019ರಲ್ಲಿ ಮಧ್ಯಪ್ರದೇಶ ಸೇರಿದಂತೆ 52 ಕಡೆಗಳಲ್ಲಿ ಅಕ್ಟೋಬರ್ 2019ರಲ್ಲಿ ಹಾಗೂ ಫೆಬ್ರವರಿ 2020ರಲ್ಲಿ ಹೈದರಾಬಾದ್, ವಿಜಯವಾಡ ಮುಂತಾದೆಡೆಗಳಲ್ಲಿ ಐಟಿ ದಾಳಿ ನಡೆಸಲಾಗಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಬಂದಿರುವ ದೇಣಿಗೆ ಮೊತ್ತದಲ್ಲಿ 550 ಕೋಟಿ ರುಗೂ ಅಧಿಕ ಮೊತ್ತವನ್ನು ಘೋಷಿಸಿಕೊಂಡಿಲ್ಲ. ಈ ಕುರಿತಂತೆ ವಿವರಣೆ ನೀಡುವಂತೆ ಕೋರಿ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್ಗೆ ಸಮನ್ಸ್ ನೀಡಲಾಗಿದೆ.
ಅಹ್ಮದ್ ಪಟೇಲ್ ಸೇರಿದಂತೆ ಆರು ಕಾಂಗ್ರೆಸ್ ನಾಯಕರು, ಮೇಘ ಇಂಜಿನಿಯರ್ ಸಂಸ್ಥೆ ವಿರುದ್ಧ ದೂರು ದಾಖಲಾಗಿದೆ. ಐಟಿ ಸಮನ್ಸ್ ಬಂದಿರುವ ಸುದ್ದಿಯನ್ನು ಪಟೇಲ್ ಅವರು ಖಚಿತಪಡಿಸಿದ್ದು, ದಿ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ನನಗೆ ಹುಷಾರಿಲ್ಲ, ಸಂಸತ್ತಿನ ವ್ಯವಹಾರಗಳಿವೆ, ಸಮನ್ಸ್ ನನ್ನ ಸಂಸತ್ತಿನ ಇಮೇಲ್ ಐಡಿಗೆ ಬಂದಿರುವುದರಿಂದ ತಕ್ಷಣದ ಪ್ರತಿಕ್ರಿಯೆ ನೀಡಲಾಗಿಲ್ಲ. ಶೀಘ್ರದಲ್ಲೇ ಇದಕ್ಕೆ ಉತ್ತರಿಸುತ್ತೇನೆ.
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 131 ಹಾಗೂ ಸೆಕ್ಷನ್ 13 ಎ ಉಲ್ಲಂಘನೆ ಆರೋಪದ ಮೇಲೆ ಸಮನ್ಸ್ ನೀಡಲಾಗಿದೆ. ಸರಿ ಸುಮಾರು 2000 ಕೋಟಿ ರುಗೂ ಅಧಿಕ ಮೊತ್ತದ ತೆರಿಗೆ ವಂಚನೆಯನ್ನು ರಾಜಕೀಯ ಪಕ್ಷಗಳು ಮಾಡಿದ್ದು, ಕಾಂಗ್ರೆಸ್ ಪಾಲು 550 ಕೋಟಿ ರು ನಷ್ಟಿದೆ ಎಂದು ಐಟಿ ಇಲಾಖೆ ಹೇಳಿದೆ.