ಮಗನನ್ನು ಕಳೆದುಕೊಳ್ಳುವ ದುಃಖವೇನೆಂದು ನನಗೆ ಗೊತ್ತು: ರಾಧಿಕಾ ವೆಮುಲಾ
ನವದೆಹಲಿ, ಮೇ 24: "ಮಗನನ್ನು ಕಳೆದುಕೊಳ್ಳುವ ದುಃಖ ಏನು ಎಂಬುದು ನನಗೆ ಗೊತ್ತು. ನಿಮಗೆ ನನ್ನ ತೀವ್ರ ಸಂತಾಪಗಳು" ಎಂದು ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರಿಗೆ ರೋಹಿತ್ ವೆಮುಲಾ ಅವರ ತಾಯಿ ರಾಧಿಕಾ ವೆಮುಲಾ ಹೇಳಿದ್ದಾರೆ.
"ಪುತ್ರ ಶೋಕಂ ನಿರಂತರಂ ಎಂಬುದು ನನಗೆ ಗೊತ್ತು. ತಮ್ಮ ಪುತ್ರನನ್ನು ಕಳೆದುಕೊಂಡ ಬಂಡಾರು ದತ್ತಾತ್ರೇಯ ಅವರಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು" ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.
ಬಂಡಾರು ದತ್ತಾತ್ರೇಯ ಅವರ ಪುತ್ರ ಹೃದಯಾಘಾತದಿಂದ ನಿಧನ
ಕೇಂದ್ರದ ಮಾಜಿ ಸಚಿವ ಬಂಡಾರು ದತ್ತಾತ್ರೇಯ ಅವರ 21 ವರ್ಷದ ಪುತ್ರ ಬಂಡಾರು ವೈಷ್ಣವ್ ನಿನ್ನೆ(ಮೇ 23) ಹೃದಯಾಘಾತದಿಂದ ಮೃತರಾಗಿದ್ದರು. ಕೇವಲ 21 ವರ್ಷ ವಯಸ್ಸು ಸಾಯುವ ವಯಸ್ಸಲ್ಲವೇ ಅಲ್ಲ. ಅವರಿಗೆ ತಕ್ಷಣ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ರಾಧಿಕಾ ವೆಮುಲಾ ಅವರ ಪುತ್ರ ರೋಹಿತ್ ವೆಮುಲಾ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿಯಾಗಿದ್ದರು. 2016 ರ ಜನವರಿ 17 ರಂದು ತಮ್ಮ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ವಿದ್ಯಾರ್ಥಿಯ ಆತ್ಮಹತ್ಯೆಯ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.