'ನನ್ನ ದೇಶಭಕ್ತಿಗೆ ಯಾರಿಂದಲೂ ಸರ್ಟಿಫಿಕೇಟ್ ಬೇಕಿಲ್ಲ'
ಬೆಂಗಳೂರು, ನವೆಂಬರ್ 25 : "ನಾನು ಹೇಳಿದ ಪ್ರತಿಯೊಂದು ಮಾತನ್ನೂ ನಾನು ಸಮರ್ಥಿಸಿಕೊಳ್ಳುತ್ತೇನೆ. ಭಾರತ ನನ್ನ ದೇಶ, ಅದನ್ನು ನಾನು ಪ್ರೀತಿಸುತ್ತೇನೆ. ಇಲ್ಲಿ ಹುಟ್ಟಿದ್ದಕ್ಕೆ ನನ್ನನ್ನು ನಾನು ಅದೃಷ್ಟವಂತ ಎಂದು ತಿಳಿದುಕೊಳ್ಳುತ್ತೇನೆ. ನಾನು ಇಲ್ಲಿಯೇ ನೆಲೆಸುತ್ತೇನೆ" ಎಂದು ಅಮೀರ್ ಖಾನ್ ಹೇಳಿದ್ದಾರೆ.
'ಅಸಹಿಷ್ಣುತೆ' ಕುರಿತಂತೆ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾವು ಹೇಳಿದ ನುಡಿಗಳು ದೇಶದಾದ್ಯಂತ ಟೀಕೆಗೆ, ಆಕ್ರೋಶಕ್ಕೆ ಗುರಿಯಾದ ನಂತರ 'ಪದ್ಮಶ್ರೀ' ಅಮೀರ್ ಖಾನ್ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. 50 ವರ್ಷದ ಪ್ರತಿಭಾವಂತ ನಟ ಬಿಡುಗಡೆ ಮಾಡಿರುವ ಹೇಳಿಕೆಯ ಪೂರ್ಣಪಾಠ ಇಲ್ಲಿದೆ.
ಮೊದಲಿಗೆ ಒಂದು ಸಂಗತಿಯನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನನಗೆ ಮತ್ತು ನನ್ನ ಹೆಂಡತಿಗೆ ಈ ದೇಶವನ್ನು ಬಿಡುವ ಯಾವ ಇಚ್ಛೆಯೂ ಇಲ್ಲ. ಈ ರೀತಿ ಯಾವತ್ತೂ ಚಿಂತಿಸಿಲ್ಲ, ಭವಿಷ್ಯದಲ್ಲಿಯೂ ಚಿಂತಿಸುವುದಿಲ್ಲ. ಇದಕ್ಕೆ ವಿರುದ್ಧವಾದ ಮಂಡಿಸುತ್ತಿರುವವರು ಒಂದು ನನ್ನ ಸಂದರ್ಶನ ನೋಡಿಲ್ಲ ಅಥವಾ ನಾನು ನೀಡಿದ ಹೇಳಿಕೆಯನ್ನು ಬೇಕಂತಲೇ ತಿರುಚುತ್ತಿದ್ದಾರೆ. [ಎಲ್ಲಿಯ ಅಕ್ಷಯ್, ಎಲ್ಲಿಯ ಅಮೀರ್!]
ಭಾರತ ನನ್ನ ದೇಶ, ಅದನ್ನು ನಾನು ಪ್ರೀತಿಸುತ್ತೇನೆ. ಇಲ್ಲಿ ಹುಟ್ಟಿದ್ದಕ್ಕೆ ನನ್ನನ್ನು ನಾನು ಅದೃಷ್ಟವಂತ ಎಂದು ತಿಳಿದುಕೊಳ್ಳುತ್ತೇನೆ. ನಾನು ಇಲ್ಲಿಯೇ ನೆಲೆಸುತ್ತೇನೆ. ಎರಡನೇಯದಾಗಿ, ಸಂದರ್ಶನದಲ್ಲಿ ನಾನು ಹೇಳಿದ ಪ್ರತಿಯೊಂದು ಮಾತನ್ನೂ ನಾನು ಸಮರ್ಥಿಸಿಕೊಳ್ಳುತ್ತೇನೆ.
ನನ್ನನ್ನು ದೇಶದ್ರೋಹಿ ಎಂದು ಜರಿಯುತ್ತಿರುವ ಎಲ್ಲರಿಗೂ ಒಂದು ವಿಷಯ ಹೇಳಲು ಇಚ್ಛಿಸುತ್ತೇನೆ. ನಾನೊಬ್ಬ ಭಾರತೀಯ ಎಂದು ಅಭಿಮಾನದಿಂದ ಹೇಳುತ್ತೇನೆ. ನಾನು ದೇಶಪ್ರೇಮಿ ಎಂದು ಹೇಳಿಕೊಳ್ಳಲು ಯಾರಿಂದ ಅನುಮತಿಯೂ ಬೇಕಾಗಿಲ್ಲ, ಸರ್ಟಿಫಿಕೇಟೂ ಬೇಕಾಗಿಲ್ಲ. ಹೃದಯಾಂತರಾಳದಿಂದ ಅನಿಸಿಕೆ ಅಭಿವ್ಯಕ್ತಪಡಿಸಿದ್ದಕ್ಕೆ ಉದ್ದೇಶಪೂರ್ವಕವಾಗಿ ಕೆಸರೆರಚುತ್ತಿರುವುದನ್ನು ನೋಡಿದರೆ ನನಗೆ ನಿಜಕ್ಕೂ ನೋವಾಗುತ್ತದೆ. [ಅಮೀರ್ ಬ್ರಾಂಡ್ ಮೌಲ್ಯ ಕುಸಿಯುವ ಆತಂಕ]
ಅಮೀರ್
ಅಂದು
ಹೇಳಿದ್ದೇನು?
ಈ
ವಿಡಿಯೋ
ನೋಡಿರಿ
{video1}
ನನಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ನಮ್ಮ ಸುಂದರವಾದ ಮತ್ತು ವಿಶಿಷ್ಟವಾದ ದೇಶವನ್ನು ನಾವೆಲ್ಲರೂ ಸೇರಿ ರಕ್ಷಿಸಬೇಕಾಗಿದೆ. ದೇಶದ ಐಕ್ಯತೆ, ವೈವಿಧ್ಯತೆ, ಹಲವಾರು ಭಾಷೆಗಳು, ಇದರ ಸಂಸ್ಕೃತಿ, ಸಹಿಷ್ಣುತೆ, ಏಕಾಂತವಾದದ ಪರಿಕಲ್ಪನೆ, ಉಕ್ಕುವ ಪ್ರೀತಿ, ಸೂಕ್ಷ್ಮತೆ ಮತ್ತು ಭಾವನಾತ್ಮಕ ಶಕ್ತಿಯನ್ನು ಕಾಪಾಡಬೇಕಿದೆ. [ಬಿರುಗಾಳಿ ಎಬ್ಬಿಸಿರುವ ಅಮೀರ್ ಮಾತು]
ರವೀಂದ್ರನಾಥ ಟ್ಯಾಗೋರ್ ಅವರ ಕವನ ಉದ್ಧರಿಸುವುದರೊಂದಿಗೆ ನನ್ನ ಮಾತು ಮುಗಿಸುತ್ತೇನೆ :
ಎಲ್ಲಿ ಮನಸ್ಸು ಹೆದರಿಕೆಯಿಂದ ಮುಕ್ತವಾಗಿರುತ್ತದೋ, ಎಲ್ಲಿ ಹೆಮ್ಮೆಯಿಂದ ತಲೆ ಎತ್ತಿ ಹಿಡಿಯುತ್ತೇವೆಯೋ, ಜ್ಞಾನ ಉಚಿತವಾಗಿ ಸಿಗುತ್ತದೋ, ಎಲ್ಲಿ ಜಗತ್ತು ಛಿದ್ರಛಿದ್ರವಾಗಿಲ್ಲವೋ, ಎಲ್ಲಿ ಮನದಾಳದಿಂದ ಸತ್ಯದ ಮಾತು ಹೊರಬರುತ್ತದೋ, ಎಲ್ಲಿ ದಣಿವಿಲ್ಲದ ದುಡಿಮೆ ಪರಿಪೂರ್ಣತೆಯೆಡೆಗೆ ಹಸ್ತ ಚಾಚುತ್ತದೋ, ಎಲ್ಲಿ ನಿಷ್ಕಲ್ಮಷ ನೀರಿನ ಹರಿವು ದಾರಿ ತಪ್ಪಿಲ್ಲವೋ, ಎಲ್ಲ ಮುಕ್ತವಾದ ವಿಚಾರಧಾರೆಯೆಡೆಗೆ ಮನಸ್ಸು ಸಾಗುತ್ತದೋ, ನನ್ನ ತಂದೆಯೇ, ದೇಶ ಎಚ್ಚರದಿಂದಿರಲಿ.
ಜೈ ಹಿಂದ್.
ಅಮೀರ್ ಖಾನ್