ಪ್ರಿಯಾ ರಮಣಿಯನ್ನು ಹೋಟೆಲ್ ರೂಮ್ ನಲ್ಲಿ ಖಾಸಗಿಯಾಗಿ ಭೇಟಿ ಆಗಿಲ್ಲ: ಎಂ.ಜೆ. ಅಕ್ಬರ್
ನವದೆಹಲಿ, ಮೇ 20 : ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಕೇಂದ್ರದ ಮಾಜಿ ಸಚಿವ ಹಾಗೂ ಪತ್ರಕರ್ತ ಎಂ.ಜೆ.ಅಕ್ಬರ್, ಆಕೆಯನ್ನು ಹೋಟೆಲ್ ಕೋಣೆಗೆ ಕರೆದಿಲ್ಲ ಎಂದು ಹೇಳಿದ್ದಾರೆ. ಮೊದಲಿಗೆ ವೋಗ್ ಇಂಡಿಯಾಗೆ ಬರೆದಿದ್ದ ಲೇಖನದಲ್ಲಿ ಪ್ರಿಯಾ ರಮಣಿ ಅವರು ಅಕ್ಬರ್ ಹೆಸರು ಪ್ರಸ್ತಾಪಿಸದೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.
ಆ ನಂತರ ಟ್ವಿಟ್ಟರ್ ನಲ್ಲಿ ಎಂ.ಜೆ.ಅಕ್ಬರ್ ಹೆಸರು ಹಾಕಿದ್ದರು. ಅದಾದ ಮೇಲೆ ಹಲವಾರು ಮಹಿಳೆಯರು ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಹಾಗೂ ಅತ್ಯಾಚಾರದ ಆರೋಪ ಕೂಡ ಮಾಡಿದರು. ಪ್ರಿಯಾ ರಮಣಿ ಪರ ವಕೀಲಿಕೆ ಮಾಡುತ್ತಿರುವ ರೆಬೆಕಾ ಜಾನ್ ಪ್ರಶ್ನೆ ಮಾಡಿದಾಗ, ತಾನು ಉಳಿದುಕೊಂಡಿದ್ದ ಹೋಟೆಲ್ ನ ರಿಸೆಪ್ಷನ್ ನಿಂದ ಯಾವುದೇ ಫೋನ್ ಕರೆ ಬಂದಿಲ್ಲ. ನಾನು ಆಕೆಯನ್ನು ಕೋಣೆಗೆ ಕರೆದಿಲ್ಲ ಎಂದಿದ್ದಾರೆ.
ಎಂಜೆ ಅಕ್ಬರ್ ಕೇಸ್ : ಪತ್ರಕರ್ತೆ ಪ್ರಿಯಾ ರಮಣಿಗೆ ಜಾಮೀನು
ನಮ್ಮಿಬ್ಬರ ಮಧ್ಯದ ಸಂಭಾಷಣೆ ಹೆಚ್ಚು ವೈಯಕ್ತಿಕವಾಗಿತ್ತೇ ವಿನಾ ವೃತ್ತಿಪರದ್ದಾಗಿರಲಿಲ್ಲ ಎನ್ನುವುದೇ ತಪ್ಪು ಎಂದು ಅಕ್ಬರ್ ಹೇಳಿದ್ದಾರೆ. ನನಗೆ ಯಾವ ಬಗೆ ಸಂಗೀತ ಇಷ್ಟ ಎಂದು ಕೇಳಿದ ನಂತರ ನೀವು ನನಗಾಗಿ ಹಿಂದಿ ಹಾಡು ಹೇಳಿದಿರಿ ಎಂಬ ಪ್ರಿಯಾ ರಮಣಿ ಮಾತನ್ನು ಅಕ್ಬರ್ ನಿರಾಕರಿಸಿದ್ದಾರೆ.
ಭೇಟಿಯೇ ಆಗಿಲ್ಲ ಅನ್ನೋದನ್ನೇ ಅಕ್ಬರ್ ಹೇಳಿದ್ದಾರೆ. ಆ ದಿನ ಆಕೆಯನ್ನು ಭೇಟಿ ಆಗಿಲ್ಲ ಎಂದಿದ್ದಾರೆ. "ಏಷ್ಯನ್ ಏಜ್ ದೆಹಲಿ ಕಚೇರಿಗೆ ಪ್ರಿಯಾ ಸೇರಿದ ಹತ್ತು ದಿನದ ನಂತರ ಬಾಂಬೆ ಕಚೇರಿಗೆ ವರ್ಗಾವಣೆ ಕೇಳಿದ್ದಾರೆ. ಅದನ್ನು ನಿಮಗೇ ಬಿಡುತ್ತೇನೆ" ಎಂದು ಪ್ರಿಯಾ ರಮಣಿ ವಕೀಲರು ಹೇಳಿದ್ದಾರೆ.
ಈಗ ನನ್ನ ಕಥೆ ಹೇಳುವ ಸಮಯ ಬಂದಿದೆ : ಪ್ರಿಯಾ ರಮಣಿ
ಬಾಂಬೆ ಕಚೇರಿಗೆ ವರ್ಗಾವಣೆ ಕೇಳಿದರಾ ಎಂಬುದನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಹಾಗೆ ಆಗಿರಬೇಕು ಅಂದರೆ ಸಂಪಾದಕರ ಅನುಮತಿ ಪಡೆದು ಬಾಂಬೆಗೆ ಹೋಗಿರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಅಂದ ಹಾಗೆ ವಿಚಾರಣೆ ನಡೆದುವ ವೇಳೆ ಅಕ್ಬರ್ ಪರ ವಕೀಲಿಕೆ ವಹಿಸಿದ ಗೀತಾ ಲೂತ್ರಾ ಪದೇಪದೇ ಅಡ್ಡ ಪಡಿಸಿದರು.
ಪ್ರಕರಣವು ಜುಲೈ ಆರನೇ ತಾರೀಕಿಗೆ ಮುಂದಕ್ಕೆ ಹಾಕಲಾಯಿತು. ಎಂ.ಜೆ.ಅಕ್ಬರ್ ರಿಂದ ಲೈಂಗಿಕ ದೌರ್ಜನ್ಯ ಹಾಗೂ ಲೈಂಗಿಕ ಅನುಚಿತ ವರ್ತನೆ ಬಗ್ಗೆ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರು ಆರೋಪಿಸಿದ್ದಾರೆ. ಎಂ.ಜೆ.ಅಕ್ಬರ್ ಪತ್ರಕರ್ತರಾಗಿದ್ದ ಅವಧಿಯಲ್ಲಿ ಅವರ ಜತೆ ಎಲ್ಲರೂ ಕೆಲಸ ಮಾಡುತ್ತಿದ್ದವರೇ.