ಪಾಕ್ ಸೇನಾ ವಕ್ತಾರನ ಪತ್ರಿಕಾ ಗೋಷ್ಠಿ ಪ್ರಸಾರ ಮಾಡಿದ ಚಾನಲ್ ಗಳಿಗೆ ನೋಟಿಸ್
ಪುಲ್ವಾಮಾ ಉಗ್ರ ದಾಳಿಯ ಬಗ್ಗೆ ಫೆಬ್ರವರಿ 22ನೇ ತಾರೀಕಿನಂದು ಪಾಕಿಸ್ತಾನಿ ಸಶಸ್ತ್ರ ಪಡೆಯ ವಕ್ತಾರ ನಡೆಸಿದ ಪತ್ರಿಕಾ ಗೋಷ್ಠಿಯನ್ನು ಪ್ರಸಾರ ಮಾಡಿದ ಕನಿಷ್ಠ ಎರಡು ಟೀವಿ ಚಾನಲ್ ಗಳಿಗೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಶೋಕಾಸ್ ನೋಟಿಸ್ ನೀಡಿದೆ. ಎಬಿಪಿ ನ್ಯೂಸ್ ಹಾಗೂ ತಿರಂಗಾ ಟೀವಿಗೆ ಕಾರ್ಯಕ್ರಮ ಪ್ರಸಾರಕ್ಕೆ ಇರುವ ನಿಬಂಧನೆ ಮೀರಿದ ಆರೋಪದಲ್ಲಿ ನೋಟಿಸ್ ನೀಡಲಾಗಿದೆ.
ವೀಕಾನ್ ಮೀಡಿಯಾ ಅಂಡ್ ಬ್ರಾಡ್ ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದ ತಿರಂಗಾ ಟೀವಿ ನೀಡಿದ ಶೋಕಾಸ್ ನೋಟಿಸ್ ನಲ್ಲಿ, ಫೆಬ್ರವರಿ 22ನೇ ತಾರೀಕಿನಂದು ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಅಸೀಫ್ ಗಫೂರ್ ಪತ್ರಿಕಾಗೋಷ್ಠಿಯನ್ನು ಪ್ರಸಾರ ಮಾಡಿ, ಕೇಬಲ್ ಟೀವಿ ನೆಟ್ ವರ್ಕ್ (ವಿಯಂತ್ರಣ) ಕಾಯ್ದೆ, 1995 ಉಲ್ಲಂಘಿಸಿದ್ದೀರಿ ಎಂದು ತಿಳಿಸಲಾಗಿದೆ.
ನಿಯಮದ ಪ್ರಕಾರ ಹಿಂಸಾಚಾರವನ್ನು ಪ್ರೋತ್ಸಾಹಿಸುವ ಅಥವಾ ಉತ್ತೇಜಿಸುವ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿರುವ ಅಥವಾ ದೇಶವಿರೋಧಿ ಮನಸ್ಥಿತಿಯನ್ನು ಪ್ರಚುರ ಪಡಿಸುವ ಕಾರ್ಯಕ್ರಮವನ್ನು ಪ್ರಸಾರ ಮಾಡುವಂತಿಲ್ಲ. ದೇಶದ ಸಮಗ್ರತೆಗೆ ಧಕ್ಕೆ ತರುವಂಥ ಯಾವುದೇ ಕಾರ್ಯಕ್ರಮವನ್ನು ಕೇಬಲ್ ಸೇವೆಯಲ್ಲಿ ನೀಡಬಾರದು ಎಂದಿದೆ.
ಆದರೆ, ತಿರಂಗ ಟೀವಿಯಲ್ಲಿ ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಪತ್ರಿಕಾಗೋಷ್ಠಿ ಪ್ರಸಾರ ಮಾಡಲಾಗಿದೆ. ಅದು ಸರಿಯಾದ ಮಾಹಿತಿ ಹೌದೋ ಅಥವಾ ಅಲ್ಲವೋ ಎಂದು ಕೂಡ ಗಮನಿಸಿಲ್ಲ. ಆದ್ದರಿಂದ ಮೇಲ್ನೋಟಕ್ಕೇ ಈ ಚಾನಲ್ ನಿಂದ ನಿಯಮ ಉಲ್ಲಂಘನೆ ಆಗಿರುವುದು ಕಂಡುಬಂದಿದೆ ಎನ್ನಲಾಗಿದೆ.
ಪುಲ್ವಾಮಾ ದಾಳಿ ನಡೆದ ದಿನದಂದೇ ಮಾಧ್ಯಮಗಳ ವರದಿ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಇನ್ನು ವೀಕಾನ್ ಮೀಡಿಯಾದ ಅಧ್ಯಕ್ಷ ದೀಪಕ್ ಚೌಧರಿ ಮಾತನಾಡಿ, ಈ ನೋಟಿಸ್ ನೀಡಿರುವುದು ಅಚ್ಚರಿಯಾಗಿದೆ. ಪುಲ್ವಾಮಾ ದಾಳಿಗೆ ಪಾಕಿಸ್ತಾನದ ಪ್ರತಿಕ್ರಿಯೆ ಏನು ಎಂದು ತಿಳಿದುಕೊಳ್ಳಲು ಇದ್ದ ಮಾರ್ಗ ಇದೊಂದೇ. ನಮ್ಮ ಚಾನಲ್ ಆ ವಕ್ತಾರನ ದೃಷ್ಟಿಕೋನಕ್ಕೆ ವಿರುದ್ಧವಾಗಿದ್ದವು ಎಂದಿದ್ದಾರೆ. ನೋಟಿಸ್ ಗೆ ಉತ್ತರ ನೀಡಲು ಏಳು ದಿನಗಳ ಅವಕಾಶ ಸಿಕ್ಕಿದೆ.
ಇದೇ ರೀತಿ ಗಫೂರ್ ಪತ್ರಿಕಾಗೋಷ್ಠಿ ಪ್ರಸಾರ ಮಾಡಿದ ಎಬಿಪಿ ನ್ಯೂಸ್ ಗೆ ಕೂಡ ನೋಟಿಸ್ ನೀಡಲಾಗಿದೆ.