ಕಾಶ್ಮೀರ ನಡೆಗೆ ಟೀಕೆ: ಭಾರತೀಯ ಎಂಬ ಹೆಮ್ಮೆ ನನಗೀಗ ಇಲ್ಲ ಎಂದ ಅಮರ್ತ್ಯ ಸೇನ್
ನವದೆಹಲಿ, ಆಗಸ್ಟ್ 20: "ಅಂತಿಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲದೆ ಕಾಶ್ಮೀರಕ್ಕೆ ಬೇರೆ ಯಾವುದೇ ಪರಿಹಾರ ಇಲ್ಲ" ಎಂದು ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಡಾ.ಅಮರ್ತ್ಯ ಸೇನ್ ಸೋಮವಾರ ಅಭಿಪ್ರಾಯ ಪಟ್ಟಿದ್ದಾರೆ. ಜಮ್ಮು- ಕಾಶ್ಮೀರದ ವಿಚಾರದಲ್ಲಿ ಭಾರತ ಸರಕಾರದ ನಡೆಯನ್ನು ಅವರು ಟೀಕಿಸಿದ್ದಾರೆ.
ವಿವಿಧ ಹಂತಗಳಲ್ಲಿ ಸರಕಾರದ ನಿರ್ಧಾರಗಳಲ್ಲಿನ ಹುಳುಕುಗಳನ್ನು ಎತ್ತಿ ತೋರಿಸಿದ ಅವರು, ಭಾರತೀಯನಾಗಿ ನಾನು ಈಗ ಹೆಮ್ಮೆ ಪಡುತ್ತಿಲ್ಲ. ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಪಶ್ಚಿಮೇತರ ದೇಶಗಳ ಪೈಕಿ ಪ್ರಜಾತಂತ್ರ ವ್ಯವಸ್ಥೆ ಆಳವಡಿಸಿಕೊಂಡ ಮೊದಲ ದೇಶ ಭಾರತ. ಈಗ ತೆಗೆದುಕೊಳ್ಳುತ್ತಿರುವ ನಿರ್ಧಾರದಿಂದ ಆ ವರ್ಚಸ್ಸನ್ನು ಕಳೆದುಕೊಳ್ಳುತ್ತೇವೆ ಎಂದು ಆಭಿಪ್ರಾಯ ಪಟ್ಟಿದ್ದಾರೆ.
ಮೇಲ್ಜಾತಿ ಮೀಸಲಾತಿ, ಮೋದಿ ಆಡಳಿತದ ಬಗ್ಗೆ ಅಮರ್ತ್ಯ ಸೇನ್ ಹೇಳಿದ್ದೇನು?
ಜಮ್ಮು- ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನ ರದ್ದು ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ಸರಕಾರದ ನಿರ್ಧಾರಕ್ಕೆ ರಾಜಕೀಯ ಹಾಗೂ ಜನಪ್ರಿಯ ಬೆಂಬಲ ದೊರೆತಿದೆ. ಜಮ್ಮು- ಕಾಶ್ಮೀರ ಪುನಾರಚನೆ ಮಸೂದೆಗೆ ಪ್ರಮುಖ ವಿರೋಧ ಪಕ್ಷಗಳು ಸಹ ಬೆಂಬಲ ಸೂಚಿಸಿದ್ದವು.
ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಆಸ್ತಿ- ಭೂಮಿ ಖರೀದಿ ಮಾಡಬಹುದು. ಆ ಬಗ್ಗೆ ಅಭಿಪ್ರಾಯ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದ ಬಗ್ಗೆ ನಿರ್ಧಾರ ಮಾಡಬೇಕಾದವರು ಕಾಶ್ಮೀರಿಗಳು. ಏಕೆಂದರೆ, ಆದು ಅವರ ಭೂಮಿ ಎಂದು ಹೇಳಿದ್ದಾರೆ.
ಜನ ನಾಯಕರ ಧ್ವನಿಯನ್ನು ಕೇಳಿಸಿಕೊಳ್ಳದೆ ನ್ಯಾಯಸಮ್ಮತವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ. ಸಾವಿರಾರು ನಾಯಕರನ್ನು ನಿಗ್ರಹಿಸಲಾಗಿದೆ. ಕೆಲವರನ್ನು ಜೈಲಿನಲ್ಲಿ ಇರಿಸಲಾಗಿದೆ. ಅವರಲ್ಲಿ ಕೆಲ ನಾಯಕರು ದೇಶವನ್ನು ಮುನ್ನಡೆಸಿದ್ದಾರೆ ಹಾಗೂ ಈ ಹಿಂದೆ ಸರಕಾರ ರಚನೆ ಮಾಡಿದ್ದಾರೆ ಎಂದಿದ್ದಾರೆ.
ಅಮರ್ತ್ಯ ಸೇನ್ ನಿಂದ ಅರುಣ್ ಜೇಟ್ಲಿವರೆಗೆ ನೋಟು ರದ್ದು ಬಗ್ಗೆ ಏನಂತಾರೆ?
ಜಮ್ಮು- ಕಾಶ್ಮೀರದಲ್ಲಿ ದೊಡ್ಡ ಮಟ್ಟದ ಭದ್ರತಾ ವ್ಯವಸ್ಥೆ ಮಾಡಿರುವುದು 'ಮುಂಜಾಗ್ರತಾ ಕ್ರಮ' ಎನ್ನಲಾಗಿದೆ. ಒಂದು ವೇಳೆ ಜಮ್ಮು- ಕಾಶ್ಮೀರದಲ್ಲಿ ದಂಗೆ ಎದ್ದು, ಜೀವ ಹಾನಿ ಆಗುವುದನ್ನು ತಡೆಯಲು ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. "ಇದು ವಸಾಹತುಶಾಹಿ ಆಲೋಚನೆಗೆ ಅತ್ಯುತ್ತಮ ಉದಾಹರಣೆ. ಇನ್ನೂರು ವರ್ಷಗಳ ಕಾಲ ಬ್ರಿಟಿಷರು ಈ ದೇಶವನ್ನು ನಡೆಸಿದ್ದೇ ಹೀಗೆ" ಎಂದು ಸೇನ್ ಹೇಳಿದ್ದಾರೆ.
ನಾನು ನಿರೀಕ್ಷಿಸುವ ಕೊನೆ ಸಂಗತಿ ಏನೆಂದರೆ, ನಾವು ಸ್ವಾತಂತ್ರ್ಯ ಪಡೆದಿದ್ದೇವೆ. ಮುಂಜಾಗ್ರತಾ ಕ್ರಮದ ಬಂಧನ ಮೂಲಕ ಮತ್ತೆ ವಸಾಹತುಶಾಹಿ ಸಂಸ್ಕೃತಿಗೆ ಹಿಂತಿರುಗುತ್ತಿದ್ದೇವಾ ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ.