ಭಾಷಣಕ್ಕೆ ಅಡ್ಡಿ, ಕನ್ಹಯ್ಯ ಕುಮಾರ್ ಮೇಲೆ ಚಪ್ಪಲಿ ಎಸೆತ
ಹೈದರಾಬಾದ್, ಮಾರ್ಚ್, 24: ಹೈದರಾಬಾದಿನಲ್ಲಿ ಭಾಷಣ ಮಾಡಲು ಆರಂಭಿಸಿದ ನವದೆಹಲಿ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಮೇಲೆ ಚಪ್ಪಲಿ ಎಸೆಯಲಾಗಿದೆ. ಚಪ್ಪಲಿ ಎಸೆದ ಗೋ ರಕ್ಷಾದಳದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ
ಬುಧವಾರ ಹೈದರಾಬಾದ್ ಗೆ ಆಗಮಿಸಿದ ಕನ್ಹಯ್ಯಾ ಕುಮಾರ್ ಗೆ ಹೈದ್ರಾಬಾದ್ ಸಂಶೋಧನಾ ವಿವಿ ಪ್ರವೇಶಿಸದಂತೆ ತಡೆ ಒಡ್ಡಲಾಗಿತ್ತು. ಬುಧವಾರ ಸಂಜೆ ವಿವಿಯ ಆವರಣದಲ್ಲಿ ಭಾಷಣ ಮಾಡಲು ಕನ್ಹಯ್ಯ ಕುಮಾರ್ ಅವರಿಗೆ ಬಿಟ್ಟಿರಲಿಲ್ಲ.[ಕನ್ಹಯ್ಯ ಕುಮಾರ್ಗೆ ಹೈದರಾಬಾದ್ ವಿವಿ ಪ್ರವೇಶಕ್ಕೆ ತಡೆ]
ಗುರುವಾರ ಬೆಳಗ್ಗೆ ಕುಮಾರ್ ಸುಂದರಯ್ಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಆರಂಭಿಸಿದ್ದರು. ಈ ವೇಳೆ ಸಭಿಕರು ಕುಳಿತ ಎರಡನೇ ಸಾಲಿನಿಂದ ಚಪ್ಪಲಿಗಳು ತೂರಿ ಬಂದವು.
ಚಪ್ಪಲಿ ಎಸೆದವರ ಮೇಲೆ ಹಲ್ಲೆ
ಎಸೆದ ಇಬ್ಬರು ಯುವಕರನ್ನು ಎಸ್ಎಫ್ಐ ಕಾರ್ಯಕರ್ತರು ಥಳಿಸಿದ್ದಾರೆಂಬ ಆರೋಪವೂ ಕೇಳಿಬಂದಿದೆ. ಶೂ ಎಸೆದ ಘಟನೆ ನಂತರ ವಿಚಾರ ಸಂಕಿರಣದಲ್ಲಿ ಕನ್ಹಯ್ಯ ಕುಮಾರ್ ಭಾಷಣ ಮಾಡಿದ್ದಾನೆ.
ಪೊಲೀಸ್ ವಶಕ್ಕೆ
ನಂತರ ಚಪ್ಪಲಿ ಎಸೆದ ಗೋರಕ್ಷಾದಳದ ಕಾರ್ಯಕರ್ತರಾದ ಪವನ್ ಕುಮಾರ್ ರೆಡ್ಡಿ ಮತ್ತು ನರೇಶ್ ಕುಮಾರ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಆಯೋಜಕರಿಗೆ ಭದ್ರತೆ ಲೋಪದ ಬಗ್ಗೆ ಮೊದಲೆ ಸೂಚನೆ ನೀಡಿದ್ದರು.
ಏನು ಮಾಡಬೇಡಿ ಎಂದ ಕನ್ಹಯ್ಯ
ಶೂ ಎಸೆದವರಿಗೆ ಏನು ಮಾಡಬೇಡಿ, ಯಾರದ್ದೋ ಮುಲಾಜಿಗೆ ಸಿಕ್ಕು ಹೀಗೆ ಮಾಡುತ್ತಿದ್ದಾರೆ. ಅವರದ್ದು ಏನು ತಪ್ಪಿಲ್ಲ ಎಂದು ಕನ್ಹಯ್ಯ ಕುಮಾರ್ ಹೇಳಿದರು.
ನಾನು ಇದಕ್ಕೆಲ್ಲ ಹೆದರಲ್ಲ
ಚಪ್ಪಲಿ ಎಸೆದವರನ್ನು ಹೊರಕ್ಕೆ ಕಳಿಸಿದ ನಂತರ ಭಾಷಣ ಮುಂದುವರಿಸಿದ ಕುಮಾರ್, ನಾನು ಇಂಥದ್ದಕ್ಕೆಲ್ಲ ಹೆದರುವುದಿಲ್ಲ. ನಮ್ಮನ್ನು ಸುಮ್ಮನಿರಿಸಲು ಇಂಥ ಘಟನೆಗಳಿಂದ ಸಾಧ್ಯವಿಲ್ಲ ಎಂದು ಹೇಳಿದರು.
ದೇಶದ ಪರ ಹೋರಾಟ ನಿರಂತರ
ದಲಿತರು ಮತ್ತು ಹಿಂದುಳಿದವರ ಪರ ನಮ್ಮ ಹೋರಾಟ ನಿರಂತರ. ಅದನ್ನು ಇಂಥ ಕ್ಷುಲ್ಲಕ ಕ್ರಮಗಳಿಂದ ನಿಲ್ಲಿಸಲು ಸಾಧ್ಯವಿಲ್ಲ ಎಂದು ಕನ್ಹಯ್ಯಾ ಕುಮಾರ್ ಹೇಳಿದರು.