ಹೈದರಾಬಾದ್ ಗ್ಯಾಂಗ್ ರೇಪ್: ಉಪರಾಷ್ಟ್ರಪತಿಗಳ ತೂಕದ ಈ ಮಾತು, ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ
ಮಾನವ ಕುಲವೇ ತಲೆತಗ್ಗಿಸುವಂತಹ ಹೈದರಾಬಾದಿನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣ, ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದೆ. ಅತ್ಯಾಚಾರಿಗಳನ್ನು ಸುಮ್ಮನೆ ಬಿಡಬಾರದು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಕ್ಷಾತೀತವಾಗಿ ಒಕ್ಕೂರಿಲಿನಿಂದ ಸದಸ್ಯರು ಆಗ್ರಹಿಸಿದ್ದಾರೆ.
"ಇಂತಹ ರಾಕ್ಷಸರನ್ನು ಪಬ್ಲಿಕ್ ನಲ್ಲಿ ಹೊಡೆದು ಸಾಯಿಸಬೇಕು, ಮುಲಾಜಿಲ್ಲದೇ ಮರಣದಂಡನೆ ವಿಧಿಸಬೇಕು" ಎನ್ನುವ ಆಗ್ರಹ ಸಂಸದರಿಂದ ಬಂದಿದೆ. "ಪಶುವೈದ್ಯೆಯ ಪ್ರಕರಣವನ್ನು ಖಂಡಿಸಲು ಪದಗಳೇ ಸಾಲುವುದಿಲ್ಲ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ತೆಲಂಗಾಣ ಅತ್ಯಾಚಾರ: ಆರೋಪಿಗಳಿಗೆ ಜೈಲಲ್ಲಿ ಮಟನ್ ಕರಿ ಭೋಜನ
ರಾಜ್ಯಸಭೆಯಲ್ಲೂ ಈ ಪ್ರಕರಣ ಮಾರ್ದನಿಸಿತು. ನಿಲುವಳಿ ಸೂಚನೆಗೆ ಸದಸ್ಯರು ಒತ್ತಾಯಿಸಿದರೂ, ಉಪರಾಷ್ಟ್ರಪತಿ ಮತ್ತು ಸದನದ ಸಭಾಪತಿಯೂ ಆಗಿರುವ ವೆಂಕಯ್ಯ ನಾಯ್ಡು ಇದನ್ನು ತಿರಸ್ಕರಿಸಿದರು. ನಂತರ, ಎಲ್ಲರಿಗೂ ಈ ಪ್ರಕರಣದ ಬಗ್ಗೆ ಮಾತನಾಡಲು ಅವಕಾಶ ನೀಡಿದರು.
ಪಶುವೈದ್ಯೆ ಮೇಲೆ ಅತ್ಯಾಚಾರ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಇದಾದ ನಂತರ, ರಾಜ್ಯಸಭೆಯ ಸದಸ್ಯರನ್ನು ಉದ್ದೇಶಿಸಿ ವೆಂಕಯ್ಯ ನಾಯ್ಡು ಆಡಿದ ಒಂದೊಂದು ಮಾತು, ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು. ಅವರ ಮಾತಿನ ಪ್ರಮುಖಾಂಶ ಹೀಗಿದೆ:
ಹೈದರಾಬಾದ್ ಘಟನೆ: ಚರ್ಚೆಗೆ ಅವಕಾಶ ನೀಡಿದ ವೆಂಕಯ್ಯ ನಾಯ್ಡು
"ಚರ್ಚೆಯಲ್ಲಿ ಮಾತನಾಡಲು ಎಲ್ಲರಿಗೂ ಅವಕಾಶವನ್ನು ನೀಡಿದ್ದೇನೆ. ಹೈದರಾಬಾದ್ ನಲ್ಲಿ ನಡೆದ ಘಟನೆ ನಾವೆಲ್ಲಾ ತಲೆತಗ್ಗಿಸುವಂತದ್ದು. ಇದಕ್ಕೆ ನಾವೆಲ್ಲಾ ಉತ್ತರ ಕೊಡಬೇಕಾಗುತ್ತದೆ. ಕೇವಲ ಕಾನೂನು ರೂಪಿಸುವುದರಿಂದ, ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಎಲ್ಲಾ ಸದಸ್ಯರಿಗೂ ಗೊತ್ತಿರುವ ವಿಚಾರ. ಇಂತಹ ವಿಚಾರದಲ್ಲಿ ಶಿಕ್ಷೆ ನೀಡಿದ ಮೇಲೂ ದೇಶದಲ್ಲಿ ಏನಾಗುತ್ತಿದೆ ಎನ್ನುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ" - ವೆಂಕಯ್ಯ ನಾಯ್ಡು.
ಇಂತಹ ರಾಕ್ಷಕರಿಗೆ ಕ್ಷಮಾದಾನ ನೀಡಬೇಕೇ?
"ಹೈದರಾಬಾದ್ ಪ್ರಕರಣದಲ್ಲಿ ಹಲವು ಸದಸ್ಯರು ತಮ್ಮಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಇಂತವರಿಗೆ ಕ್ಷಮಾದಾನ ನೀಡುವ ವಿಚಾರದಲ್ಲೂ ಚರ್ಚೆ ನಡೆಯಿತು. ಇಂತಹ ರಾಕ್ಷಕರಿಗೆ ಕ್ಷಮಾದಾನ ನೀಡುವ ಬಗ್ಗೆ ಚಿಂತಿಸುವುದೇ ದೊಡ್ದ ತಪ್ಪು. ಆದರೆ, ಕ್ಷಮಾದಾನ ನೀಡುವ ಪದ್ದತಿ, ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದರ ಬಗ್ಗೆ ಮರುಚಿಂತನೆಯ ಅಗತ್ಯವಿದೆ" - ವೆಂಕಯ್ಯ ನಾಯ್ಡು.
ರಾಷ್ಟ್ರಪತಿಗಳ ತನಕ, ಕ್ಷಮಾದಾನದ ವಿಚಾರದಲ್ಲಿ ಹೋಗಬಹುದಾಗಿದೆ
"ಕ್ಷಮಾದಾನದ ವಿಚಾರದಲ್ಲಿ ಕಾನೂನಿನಲ್ಲಿ ಎಷ್ಟು ಅವಕಾಶವಿದೆ. ಮೊದಲು, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುವುದು, ಅಲ್ಲಿಂದ ಕೇಂದ್ರ ಸರಕಾರಕ್ಕೆ, ಇದಾದ ನಂತರ ಗೃಹ ಸಚಿವಾಲಯ, ಅಲ್ಲಿಂದ ರಾಷ್ಟ್ರಪತಿಗಳ ತನಕ, ಕ್ಷಮಾದಾನದ ವಿಚಾರದಲ್ಲಿ ಹೋಗಬಹುದಾಗಿದೆ. ಈ ಬಗ್ಗೆ ನಾವು ಮರುಚಿಂತನೆ ಮಾಡಬೇಕಾಗಿದೆ " - ವೆಂಕಯ್ಯ ನಾಯ್ಡು.
ಹೈದರಾಬಾದ್ ನಲ್ಲಿರುವ ಘಟನೆ
"ಹೈದರಾಬಾದ್ ನಲ್ಲಿರುವ ಘಟನೆಗೆ ಸಂಬಂಧಿಸಿದಂತೇ ಮಾತ್ರ ನಾವು ಈ ವಿಚಾರವನ್ನು ಕೈಗೆತ್ತಿಕೊಳ್ಳಲಿಲ್ಲ. ಇಂತಹ ಘೋರ ಕೃತ್ಯ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ದೇಶದ ಇತರ ಭಾಗಗಳಲ್ಲೂ ಇಂತಹ ಕೃತ್ಯ ನಡೆದಿದೆ. ಇಂತಹ ಕೃತ್ಯಗಳು ನಡೆದಾಗ ಇದೆಲ್ಲಾ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಪ್ರತಿಕ್ರಿಯೆಯೂ ಸರಕಾರೀ ವಲಯದಿಂದ ಬಂದಿದೆ. ಇದೆಲ್ಲಾ ನಮ್ಮ ಸಮಾಜದ ನ್ಯೂನ್ಯತೆ, ಕಾಯಿಲೆ" - ವೆಂಕಯ್ಯ ನಾಯ್ಡು.
ಅತ್ಯಾಚಾರಿಗಳ ವಯಸ್ಸುಗಳನ್ನು ಇಟ್ಟುಕೊಂಡು ನಾವೇನು ಮಾಡಬೇಕಿದೆ
"ಫಾಸ್ಟ್ ಟ್ರ್ಯಾಕ್ ಕೋರ್ಟ್ ಎನ್ನುವುದು ಒಂದು ಸಮಾಧಾನವಷ್ಟೇ. ಅತ್ಯಾಚಾರಿಗಳ ವಯಸ್ಸುಗಳನ್ನು ಇಟ್ಟುಕೊಂಡು ನಾವೇನು ಮಾಡಬೇಕಿದೆ, ಅತ್ಯಾಚಾರ.. ಅತ್ಯಾಚಾರವೇ ಅಲ್ಲವೇ? ಈ ಕ್ಷಣಕ್ಕೆ ನಮಗೆ ಬೇಕಾಗಿರುವುದು ಹೊಸ ಮಸೂದೆಯಲ್ಲ, ಬೇಕಾಗಿರುವುದು ಪೊಲಿಟಿಕಲ್ ವಿಲ್, ಎಡ್ಮಿನಿಸ್ಟ್ರೇಟಿವ್ ಸ್ಕಿಲ್. ಒಟ್ಟಿನಲ್ಲಿ, ಹೈದರಾಬಾದ್ ಕೃತ್ಯ, ಮನುಕುಲಕ್ಕೇ ಎಸೆದ ಅವಮಾನ" - - ವೆಂಕಯ್ಯ ನಾಯ್ಡು.