ವೈರಲ್ ಆಗಿರುವ ಈ ಸೆಲ್ಫಿ ಹಿಂದೆ ಕಣ್ಣೀರಿನ ಕಥೆಯಿದೆ
ಕೊಚ್ಚಿ, ಜುಲೈ 22 : ಒಬ್ಬೊಬ್ಬರಿಗೆ ಒಂದೊಂದು ಆಸೆಗಳಿರುತ್ತವೆ. ಅವುಗಳಲ್ಲಿ ಕೆಲವು ಈಡೇರುತ್ತವೆ, ಕೆಲವೊಂದು ಆಸೆ ಕೈಗೂಡುವುದೇ ಇಲ್ಲ. ಅದಕ್ಕೆ ನಾವು ಬೇಜಾರೂ ಮಾಡಿಕೊಳ್ಳುವುದಿಲ್ಲ. ಆದರೆ, ಪ್ರೀತಿಪಾತ್ರರ ಕಟ್ಟಕಡೆಯ ಆಸೆಯನ್ನು ಈಡೇರಿಸುವುದಿದೆಯಲ್ಲ....
ಇಂಥದೊಂದು ಹೃದಯ ಕಲಕುವ, ಮನಸ್ಸನ್ನು ಒದ್ದೆಮುದ್ದೆ ಮಾಡುವ ಘಟನೆಯೊಂದು ಕೇರಳದ ಕೊಚ್ಚಿಯಲ್ಲಿ ನಡೆದಿದೆ. ರಮೇಶ್ ಎಂಬುವವರು ತಾವು ಅತಿಯಾಗಿ ಪ್ರೀತಿಸುವ ಹೆಂಡತಿ 'ಅಚ್ಚು'ವಿನ ಜೊತೆ ತೆಗೆಸಿಕೊಂಡ ಫೋಟೋ ಮತ್ತು ಅದರ ಹಿಂದಿನ ಕಥೆ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರಿನ ಪೊರೆ ಕಟ್ಟುವುದರಲ್ಲಿ ಸಂಶಯವೇ ಇಲ್ಲ.
ಅಚ್ಚುಳಿಗೆ ಸಚಿನ್ ತೆಂಡೂಲ್ಕರ್ ಅಂದ್ರೆ ಪಂಚಪ್ರಾಣ. ಅವರ ಆಟವನ್ನು ಟೀವಿಯಲ್ಲಿ ಹಲವಾರು ಬಾರಿ ವೀಕ್ಷಿಸಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಅಚ್ಚುವಿಗೆ ಗೊತ್ತಾಗಿದ್ದೇನೆಂದರೆ, ತಾನು ಇನ್ನು ಹೆಚ್ಚು ದಿನ ಬದುಕಿರುವುದಿಲ್ಲ. ಆಗ ಗಂಡನ ಬಳಿ ತನ್ನ 'ಕಡೆಯ' ಆಸೆಯನ್ನು ಹೇಳಿಕೊಂಡಿದ್ದಾಳೆ.
4 ವರ್ಷದ ಮಗುವಿನ ಕ್ಯಾನ್ಸರ್ ಚಿಕಿತ್ಸೆಗೆ ನಿಮ್ಮ ನೆರವು ಬೇಕಿದೆ
ಅದು ಸಚಿನ್ ಅವರನ್ನು ಸಾಕ್ಷಾತ್ ನೋಡಬೇಕೆಂಬುದು. ಕೇರಳ ಮಾಸ್ಟರ್ ಬ್ಲಾಸ್ಟರ್ ಪಂದ್ಯವನ್ನು ನೋಡಲು ಸಚಿನ್ ತೆಂಡೂಲ್ಕರ್ ಅವರು ಕೊಚ್ಚಿಗೆ ಬರುತ್ತಾರೆ ಎಂದು ತಿಳಿಯುತ್ತಿದ್ದಂತೆ, ತನ್ನ ಆಸೆಯನ್ನು ಅಚ್ಚು ಗಂಡನ ಮುಂದಿಟ್ಟಿದ್ದಾರೆ.
ಎರಡನೇ ಬಾರಿ ಕ್ಯಾನ್ಸರ್ ದಾಳಿಯಿಟ್ಟಾಗ, ಕೆಮೋ ಥೆರಪಿ ನಡೆಯುತ್ತಿರುವಾಗಲೇ ಅಚ್ಚು 'ಸಚಿನ್ ನನ್ನು ಈಗ ಹೋಗಿ ನೋಡಲು ಸಾಧ್ಯವಿಲ್ಲವೆ' ಎಂದು ತನ್ನ ಆಸೆಯನ್ನು ಗಂಡನಿಗೆ ಹೇಳಿದ್ದಾಳೆ. ಗಂಡನಿಗೆ ಬುಳುಕ್ಕನೆ ಅಳು ಬಂದರೂ ಹೆಂಡತಿಯ ಆಸೆ ಈಡೇರಿಸಲು ಸಜ್ಜಾಗಿದ್ದಾರೆ.
ಅಚ್ಚುವಿನ ಆರೋಗ್ಯ ಬಿಗಡಾಯಿಸುತ್ತಿದ್ದರೂ, ಈಗ ಹೊರಗೆ ಕರೆದುಕೊಂಡು ಹೋದರೆ ಮತ್ತಷ್ಟು ತೊಂದರೆಯಾಗಬಹುದೆಂಬ ಆತಂಕವನ್ನು ಅಚ್ಚುವಿನ ಮುಂದಿಟ್ಟರು ರಮೇಶ್. ಆಗ ಅಚ್ಚು, "ನಾವೆಲ್ಲ ಒಂದಿಲ್ಲೊಂದು ದಿನ ಸತ್ತೇ ಸಾಯುತ್ತೇವೆ. ಸಾವೆಂದರೆ ನನಗೆ ಭಯವಿಲ್ಲ. ಈಗ ಹೇಳಿ ನನನ್ನು ಕರೆದುಕೊಂಡು ಹೋಗಲು ಸಾಧ್ಯವೆ?" ಎಂದು ಕೇಳಿದ್ದಾರೆ.
ಜಿಎಸ್ ಟಿಯಿಂದ ಕ್ಯಾನ್ಸರ್, ಎಚ್ಐವಿ ಸೋಂಕು ಔಷಧಿಗಳ ಬೆಲೆ ಇಳಿಕೆ
ತೊಂದರೆಯ ಅರಿವಿದ್ದರೂ ರಮೇಶ್ ಕುಮಾರ್ ಅವರು, ಅಚ್ಚುವಿಗೆ ನಿರಾಸೆ ಮಾಡಬಾರದೆಂಬ ಕಾರಣದಿಂದ ಸ್ನೇಹಿತನ ಸಹಾಯದಿಂದ ಟಿಕೆಟ್ ಬುಕ್ ಮಾಡಿ ಕೊಚ್ಚಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದಾರೆ. ಒಂದು ವೇಳೆ ತೀವ್ರ ತೊಂದರೆಯಾದರೆ ಥಟ್ಟನೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹೇಗೆ ಎಂಬುದನ್ನೂ ತಿಳಿದುಕೊಂಡಿದ್ದರು.
ಸಚಿನ್ ಆಟವನ್ನು ನೋಡಲು ಬಂದಾಗ 'ಸಚಿನ್ ಸಚಿನ್' ಎಂದು ಅಚ್ಚು ಕೂಗುತ್ತಿದ್ದುದನ್ನು ನೋಡಿ ಗಂಡ ರಮೇಶ್ ಆಕೆಗೆ ಗೊತ್ತಾಗದಂತೆ ಕಣ್ಣೀರು ಒರೆಸಿಕೊಂಡಿದ್ದಾರೆ. ಆ ಕ್ಷಣ ನನ್ನ ನೋವನ್ನೆಲ್ಲ ಮರೆತಿದ್ದೆವು. ಅಚ್ಚು ಹಿಂದೆಂದಿಗಿಂತಲೂ ಚೆಂದವಾಗಿ ಕಾಣಿಸುತ್ತಿದ್ದಳು. ಆಗ ಕ್ರೀಡಾಂಗಣ ಹೊರಗೆ ತೆಗೆದುಕೊಂಡ ಸೆಲ್ಫಿ ನನ್ನ ಅಚ್ಚುಮೆಚ್ಚಿನದು ಎಂದು ಅವರು ಫೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.
ಕಡೆಯದಾಗಿ ರಮೇಶ್ ಹೇಳುವ ಮಾತುಗಳು ಹೀಗಿವೆ - "ಕ್ಯಾನ್ಸರ್ ನಮ್ಮ ದೇಹವನ್ನು ದುರ್ಬಲಗೊಳಿಸಬಹುದು. ಆದರೆ, ಸಾವಿರ ಹತ್ತುಸಾವಿರ ಬಾರಿ ಪ್ರಯತ್ನಿಸಿದರೂ ಆತ್ಮವನ್ನು, ನಮ್ಮ ಜೀವನೋತ್ಸಾಹವನ್ನು ಕುಂದಿಸಲು ಸಾಧ್ಯವಿಲ್ಲ. ಅಚ್ಚು ಇನ್ನೇನು ತನ್ನ ಪಯಣವನ್ನು ಮುಗಿಸಲಿದ್ದಾಳೆ. ಆದರೆ, ಆಕೆಯ ಮನಃಶಕ್ತಿ ಆ ಸಾವನ್ನೂ ಒದ್ದೋಡಿಸಬಲ್ಲದು. ಬೇಕಾದಷ್ಟು ತೊಂದರೆಗಳು ಬರುತ್ತವೆ, ಆದರೆ, ಕೊನೆಯ ಕ್ಷಣದವರೆಗೆ ಹೋರಾಡಬೇಕೆಂಬುದನ್ನು ಆಕೆ ತೋರಿಸಿಕೊಟ್ಟಿದ್ದಾಳೆ."