ಪ್ರೀತಿ, ಮಮತೆ ಪರಿಚಯಿಸಿದ 500, 1000 ನೋಟುಗಳ ಸಾವು!
ಬೆಂಗಳೂರು, ನವೆಂಬರ್ 21: 500, 1000 ನೋಟಿನ ಹಂಗು ಕಳಚಿಕೊಂಡು ನಿಧಾನವಾಗಿ ಬದುಕಲು ಕಲಿಯುತ್ತಿದ್ದೇವಾ? ಹೀಗೊಂದು ನಡೆ ಬದುಕಿನ ಮತ್ತೊಂದು ಮುಖವನ್ನು ಪರಿಚಯಿಸ್ತಾ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಬ್ಯಾಂಕ್, ಎಟಿಎಂ ಮುಂದಿನ ಸರತಿಯನ್ನು ಸ್ವಲ್ಪ ಕಾಲ ಮರೆತು ನೋಟು ರದ್ದು ವಿಚಾರದ ಸಕಾರಾತ್ಮಕ ಬದಲಾವಣೆಗಳನ್ನು ಅವಲೋಕಿಸೋಣ.
ಇಲ್ಲಿನ ಕೆಲವು ಅಂಶಗಳನ್ನು ವೈಯಕ್ತಿಕವಾಗಿ ನೋಡಲಾಗಿದೆ. ಇಂಥ ಅನುಭವ ನಮ್ಮದಲ್ಲ ಅನ್ನೋದಾದರೆ, ನಿಮಗಾದ ಅನುಭವವನ್ನೇ ಇಲ್ಲಿನ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಬಹುದು. ಅದರೆ ಒಂದು ಮಹತ್ವದ ನಿರ್ಧಾರದ ನಂತರ ಆಗಿರುವ ನಿಚ್ಚಳವಾದ ಬದಲಾವಣೆಯನ್ನು ದಾಖಲಿಸಲೇ ಬೇಕಿದೆ.[ಮಂಗಳೂರು ವಿಟ್ಲ ರಸ್ತೆಯಲ್ಲಿ 500, 1000 ರುಪಾಯಿ ಚೆಲ್ಲಾಪಿಲ್ಲಿ]
ಒನ್ ಇಂಡಿಯಾ ಕನ್ನಡ ಕೆಲವರನ್ನು ಮಾತನಾಡಿಸಿದೆ. ಅವರಲ್ಲಿ ಬಹುತೇಕರು ತಮ್ಮ ಬಳಿ ಇರುವ 500, 1000 ನೋಟಿನ ಬದಲಾವಣೆಗೆ ಮುಂದಾಗಿಲ್ಲ. ಕೆಲವರು ಮನೆಯಲ್ಲಿ ಹಣವೇ ಇಟ್ಟುಕೊಳ್ಳುತ್ತಿರಲಿಲ್ಲವಂತೆ. ಇರುವುದರಲ್ಲೇ ಹೊಂದಾಣಿಕೆ ಮಾಡಿಕೊಂಡು, ಡೆಬಿಟ್ ಕಾರ್ಡ್ ನಲ್ಲೇ ಜೀವನ ಮಾಡುತ್ತಿರುವವರು ಸಹ ಇದರಲ್ಲಿ ಇದ್ದಾರೆ.
ಮದುವೆ, ಗೃಹಪ್ರವೇಶ ಇತರೆ ಕಾರ್ಯಕ್ರಮಗಳು ಸ್ವಲ್ಪ ಡಲ್ ಆದಂತೆ ಕಂಡಿರುವುದು ಹೌದು. ಅದಕ್ಕೆ ನೋಟು ರದ್ದು ನಿರ್ಧಾರದ ಗಾಳಿ ಬೀಸಿರಬಹುದು. ಅದರೆ ಕೆಲವು ದೀರ್ಘ ಕಾಲದ ಪಾಠಗಳನ್ನು ಸಹ ಕಲಿಯಲು ಅವಕಾಶ ಸಿಕ್ಕಿದೆ.[ತುಮಕೂರಿನಲ್ಲಿ ವ್ಯಾನಿಟಿ ಬ್ಯಾಗಲ್ಲಿ ಸಿಕ್ಕಿದ್ದು 3.90 ಲಕ್ಷ ರುಪಾಯಿ]
ನೈಟ್ ಲೈಫ್ ಕಡಿಮೆಯಾಯಿತು
ಮೈಸೂರಿಗೆ ಹೋಗುವ ಹೆದ್ದಾರಿ ಬದಿಯಲ್ಲಿ ಕೆಲ ಹೋಟೆಲ್ ಗಳು, ಕಾಫಿ ಡೇಗಳು ಇವೆ. ಮುಂಚೆ ರಾತ್ರಿ ಎಂಟು-ಒಂಬತ್ತು ಗಂಟೆಗೆ ಬೆಂಗಳೂರಿನಿಂದ ಬೈಕ್ ಗಳಲ್ಲಿ, ಕಾರುಗಳಲ್ಲಿ ಹೋಗಿ ಅಲ್ಲಿ ಕಾಫಿ-ಟೀ, ಸ್ವಲ್ಪೇ ಸ್ವಲ್ಪ ತಿಂಡಿ ತಿಂದು ಬರುವವರು ಬಹಳ ಇದ್ದರು. ಬರೀ ಮೈಸೂರು ಹೆದ್ದಾರಿಯಲ್ಲ, ನಂದಿ, ಕೋಲಾರ, ಹೊಸೂರು ಹೀಗೆ ಬೇರೆಬೇರೆ ಕಡೆ ಹೋಗುವವರಿದ್ದರು. ಅಷ್ಟು ಇಂಧನ, ಹಣ, ಸಮಯ ಎಲ್ಲವನ್ನೂ ಉಳಿಸುವವರು ಜಾಸ್ತಿಯಾಗಿದ್ದಾರೆ. ಅಷ್ಟು ದೂರಕ್ಕೆ ಹೋಗುವಾಗ ಸಿಗುತ್ತಿದ್ದ ಸಂತೋಷ ಕಳೆದುಕೊಂಡಿದ್ದೀವಿ ಅಂತಾರೆ.
ತಿಂಡಿ, ಊಟ ಎಲ್ಲ ಮನೇಲಿ
ಮನೆಯಲ್ಲೇ ತಿಂಡಿ, ಊಟ, ಕಾಫಿ ಎಲ್ಲವೂ ಮಾಡ್ತಿದ್ದಾರೆ. ದಿನಕ್ಕೆ ಹೊರಗಡೆ ಖರ್ಚು ಮಾಡುತ್ತಿದ್ದ ಹಣ ಇಷ್ಟೊಂದಾ? ಎಂಬುದು ಹಲವರಿಗೆ ಗೊತ್ತಾಗುತ್ತಿದೆ. ಮನೆಯಲ್ಲಿ ಎಲ್ಲ ಇದ್ದಾಗಲೂ ಹೊರಗೆ ಹೋಗಿ ತಿನ್ನುವ ಅಭ್ಯಾಸ ಇದ್ದವರಿಗೆ ಜ್ಞಾನೋದಯ ಪರ್ವ ಎಂಬಂತಾಗಿದೆ.
ಸರಕಾರಕ್ಕೆ ಏನೂ ಮಾಡಕ್ಕೆ ಆಗಲ್ಲ
ಯಾವ ಸರಕಾರ, ಯಾವ ವ್ಯಕ್ತಿ ಬಂದರೆ ಏನ್ರೀ ಏನೂ ಮಾಡಕ್ಕಾಗಲ್ಲ. ಸುಮ್ಮನೆ ಬಾಯಿ ಮಾತಲ್ಲಿ ಹೇಳ್ತಾರೆ ವಿನಾ, ಇವರೆಲ್ಲ ಶ್ರೀಮಂತರ ಪರವೇ ಎಂದು ಹೀಗಳೆಯುತ್ತಿದ್ದವರಿಗೆ ಸರಕಾರವೊಂದು ತೀರ್ಮಾನ ಮಾಡಿದರೆ, ಏನೆಲ್ಲ ಮಾಡಬಹುದು ಎಂಬುದು ಅನುಭವ ಆಗತೊಡಗಿದೆ.
ದುಡ್ಡೊಂದೇ ಅಲ್ಲ, ಡೆಬಿಟ್-ಕ್ರೆಡಿಟ್ ಕಾರ್ಡು ಮುಖ್ಯ
ಜೀವನದಲ್ಲಿ ದುಡ್ಡೊಂದೇ ಮುಖ್ಯವಲ್ಲ ಎನ್ನುತ್ತಿದ್ದವರಿಗೆ ಡೆಬಿಟ್-ಕ್ರೆಡಿಟ್ ಕಾರ್ಡ್ ನ ಮಹತ್ವ ಗೊತ್ತಾಗುತ್ತಿದೆ. ಪೇಟಿಎಂ, ಓಲಾ ಮನಿ ಇನ್ನೂ ಏನೇನೋ ಇದೆ. ಅದರ ಬಳಕೆ ಮಾಡುವುದು ರೂಢಿಸಿಕೊಳ್ಳಬೇಕು ಎಂಬ ಚಿಂತನೆ ಶುರುವಾಗಿದೆ.
ಅಪ್ಪ-ಅಮ್ಮನ ಬಗ್ಗೆ ಹೆಚ್ಚಿದೆ ಗೌರವ
ನಿನ್ನ ಹತ್ತು, ಐವತ್ತು, ನೂರು ರುಪಾಯಿ ಪಾಕೆಟ್ ಮನಿ ಯಾವನಿಗೆ ಬೇಕು ಎಂದು ಅಪ್ಪ-ಅಮ್ಮನನ್ನು ಹೀಯಾಳಿಸುತ್ತಿದ್ದ ಮಕ್ಕಳಿಗೆ ದುಡ್ಡು ಅಂದರೆ ಅದಕ್ಕೆ ಸದಾ ಬೆಲೆ. ಆದ್ದರಿಂದಲೇ ಮನೆಯಲ್ಲಿ ಆ ನೋಟು, ನಾಣ್ಯಗಳನ್ನು ಹುಂಡಿಗೆ, ಗೋಲಕಕ್ಕೆ ಹಾಕುತ್ತಿದ್ದರು ಎಂಬುದು ಗೊತ್ತಾಗತೊಡಗಿದೆ.
ನಂಬೋರು ಯಾರು ಗೊತ್ತಾಗಿದೆ
ಅದೇ ಅಂಗಡಿಗೆ ಅದೆಷ್ಟು ಸಲ ಹೋಗಿದ್ದೇವೋ ಆ ವಯಸ್ಸಾದ ಅಜ್ಜನ, ಆತನ ಪುಟ್ಟ ಮೊಮ್ಮಗಳ ಮುಖವೇ ನೆನಪಿರಲಿಲ್ಲ. ನನ್ನ ಹತ್ತಿರ ಹೊಸ ನೋಟಿಲ್ಲ ಅಂದಾಗ, ಪರ್ವಾಗಿಲ್ಲ ತಾತ ನಾನವರನ್ನು ದಿವಸ ನೋಡ್ತೀನಿ. ಇಲ್ಲಿಗೆ ತರಕಾರಿ ತಗೊಳ್ಳೋದಿಕ್ಕೆ ಬರೋದು. ಕೊಟ್ಟು ಕಳಿಸಿ ಪರವಾಗಿಲ್ಲ ಅಂತ ಆ ಪುಟ್ಟ ಹುಡುಗಿ ಶಿಫಾರಸು ಮಾಡಿದ್ದರಿಂದ ತರಕಾರಿ ಮನೆಗೆ ತರುವುದಿಕ್ಕೆ ಸಾಧ್ಯವಾಯಿತು. ಈಗ ದಿನವೂ ಆ ಹುಡುಗಿಯನ್ನು ನೋಡಿ, ಮಾತನಾಡಿಸಿಯೇ ಮನೆಗೆ ಬರೋದು.
ಅಮ್ಮನು ಕೂಡಿಟ್ಟ ಪ್ರೀತಿ
ಅಮ್ಮನು ಮಗಳ ಮದುವೆ, ಒಡವೆ ಸಲುವಾಗಿ ಎಷ್ಟೆಲ್ಲ ಕಷ್ಟಪಟ್ಟು ಹಣ ಉಳಿಸಿರುತ್ತಾಳೆ. ಅವಳ ಸುಖ-ಸಂತೋಷ ಎಷ್ಟು ತ್ಯಾಗ ಮಾಡಿರ್ತಾಳೆ ಅಂತ ಎಷ್ಟೋ ಹೆಣ್ಣುಮಕ್ಕಳಿಗೆ ಮತ್ತು ಪತಿರಾಯರಿಗೆ ಗೊತ್ತಾದ ಸನ್ನಿವೇಶ ಇದು.