ಸೇನಾ ಜೀಪ್ ಗೆ ಕಟ್ಟಿಸಿಕೊಂಡವಗೆ 10 ಲಕ್ಷ ರು. ಪರಿಹಾರಕ್ಕೆ ಆದೇಶ
ಸೇನಾ ಮೇಜರ್ ರಿಂದ ಸೇನಾ ಜೀಪಿಗೆ ಕಟ್ಟಿಸಿಕೊಂಡಿದ್ದವನಿಗೆ 10 ಲಕ್ಷ ರು. ನೀಡುವಂತೆ ಮಾನವ ಹಕ್ಕುಗಳ ಆಯೋಗದಿಂದ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಆದೇಶ.
ಶ್ರೀನಗರ, ಜುಲೈ 10: ಎರಡು ತಿಂಗಳ ಹಿಂದೆ, ಶ್ರೀನಗರದ ಗಲಭೆ ಪೀಡಿತ ಪ್ರದೇಶವೊಂದರಲ್ಲಿ ಭಾರತೀಯ ಸೇನಾ ಜೀಪ್ ಗೆ ಕಟ್ಟಿಸಿಕೊಂಡಿದ್ದ ವ್ಯಕ್ತಿಗೆ ಜಮ್ಮು ಕಾಶ್ಮೀರ ರಾಜ್ಯ ಮಾನವ ಹಕ್ಕುಗಳ ಆಯೋಗವು (ಎಸ್ ಎಚ್ ಆರ್ ಸಿ) 10 ಲಕ್ಷ ರು. ಪರಿಹಾರ ನೀಡಬೇಕೆಂದು ಜಮ್ಮು ಕಾಶ್ಮೀರ ಸರ್ಕಾರಕ್ಕೆ ಆದೇಶಿಸಿದೆ.
ಏಪ್ರಿಲ್ 9ರಂದು ಜಮ್ಮು ಕಾಶ್ಮೀರದಲ್ಲಿ ಸಂಸತ್ ಚುನಾವಣೆ ನಡೆಯುತ್ತಿದ್ದ ದಿನ ಕೆಲ ಉದ್ರಿಕ್ತ ಯುವಕರ ಗುಂಪು ಬದ್ ಗಂ ಜಿಲ್ಲೆಯ ಪ್ರಾಂತ್ಯವೊಂದರಲ್ಲಿ ಕಲ್ಲು ತೂರಾಟದಲ್ಲಿ ನಿರತವಾಗಿತ್ತು. ಅಲ್ಲಿಗೆ ಧಾವಿಸಿದ ಸೇನೆಯ ಜನರನ್ನು ಶಾಂತಿಗೊಳಿಸಲು ಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಆದರೆ, ಸೇನಾ ಜೀಪ್ ಮೇಲೆಯೇ ಆ ಗುಂಪು ಕಲ್ಲು ತೂರಲು ಸಜ್ಜಾಗಿತ್ತು.
'ಮಾನವ ಗುರಾಣಿ', ಭಾರತೀಯ ಸೇನೆ ವಿರುದ್ದ ಎಫ್ಐಆರ್
ಮುಂದಾಗಬಹುದಾದ ಅಪಾಯವನ್ನರಿತ ಜೀಪ್ ನಲ್ಲಿದ್ದ ಭಾರತೀಯ ಸೇನಾ ಮೇಜರ್ ನಿತಿನ್ ಗಗೋಯ್, ಅವರು ಆ ಗುಂಪಿನಲ್ಲಿದ್ದ ಫಾರೂಕ್ ಅಹ್ಮದ್ ದಾರ್ ನನ್ನು ತಾವು ಹಾಗೂ ಇತರ ಸೈನಿಕರಿದ್ದ ಜೀಪಿನ ಮುಂಭಾಗಕ್ಕೆ ಕಟ್ಟಿ ಹಾಕಿದರು. ಇದರಿಂದ ಕಲ್ಲು ತೂರಾಟ ನಡೆಸುವವರು ಕೈ ಚೆಲ್ಲಬೇಕಾಯಿತು.
ಹೀಗೆ, ಫಾರೂಕ್ ನನ್ನು ತಮ್ಮ ಗುರಾಣಿಯಂತೆ ಬಳಸಿಕೊಂಡ ಸೇನಾ ಜೀಪ್, ಸುತ್ತಲಿನ 19 ಹಳ್ಳಿಗಳಲ್ಲಿ ಆತನನ್ನು ಅದೇ ಅವಸ್ಥೆಯಲ್ಲೇ ಮೆರವಣಿಗೆ ಮಾಡಿತ್ತು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.
ಮೇಜರ್ ಗಗೋಯ್ ಅವರ ಸಮಯಪ್ರಜ್ಞೆಗೆ ಭಾರತೀಯ ಸೇನೆಯ ಕೆಲ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದರೂ, ಇದು ಹಲವರ ಟೀಕೆಗೆ ಕಾರಣವಾಯಿತು.
ಶಿಕ್ಷೆ ಅನುಭವಿಸಿದ್ದ ಫಾರೂಕ್, ಜಮ್ಮು ಕಾಶ್ಮೀರದ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ, ನ್ಯಾಯ ಕೊಡಿಸಬೇಕೆಂದು ಕೋರಿದ್ದ.
ಈ ಬಗ್ಗೆ ವಿಚಾರಣೆ ನಡೆಸಿ, ಸೋಮವಾರ ತನ್ನ ಆದೇಶ ಪ್ರಕಟಿಸಿದ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿಲಾಲ್ ನಜ್ಕಿ, ''ಯಾವುದೇ ವ್ಯಕ್ತಿ, ಆತ ಅಪರಾಧಿಯೇ ಆಗಿರಲಿ, ಆತನನ್ನು ಹೀಗೆ ಜೀಪಿಗೆ ಕಟ್ಟಿ ಮೆರವಣಿಗೆ ಮಾಡಿ ಅವಮಾನಿಸುವುದನ್ನು ಯಾವುದೇ ಅಂತಾರಾಷ್ಟ್ರೀಯ ಕಾನೂನುಗಳೂ ಒಪ್ಪುವುದಿಲ್ಲ. ಈ ಘಟನೆ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಜಮ್ಮು ಕಾಶ್ಮೀರ ಸರ್ಕಾರ ನೊಂದ ವ್ಯಕ್ತಿಗೆ 10 ಲಕ್ಷ ರು. ಪರಿಹಾರ ನೀಡಬೇಕು'' ಎಂದು ಹೇಳಿದ್ದಾರೆ.
ಆದರೆ, ತೀರ್ಪಿನಲ್ಲಿ ಮೇಜರ್ ಗಗೋಯ್ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಸೂಚಿಸಲಾಗಿಲ್ಲ.