ತಮಿಳುನಾಡು ಪೊಲೀಸ್ ಇಲಾಖೆಗೆ ಮಾನವ ಹಕ್ಕು ಆಯೋಗದ ನೋಟಿಸ್
ಜಲ್ಲಿಕಟ್ಟು ಪ್ರತಿಭಟನೆ ವೇಳೆ ಪೊಲೀಸರೇ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಇಟ್ಟಿದ್ದಾರೆಂಬ ಆರೋಪಗಳಿಗೆ ಪ್ರತಿಕ್ರಿಯೆ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ನವದೆಹಲಿ, ಜನವರಿ 24: ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರತಿಭಟನೆ ವೇಳೆ ನಗರದ ಪೊಲೀಸರಿಂದಲೇ ನಡೆದಿದೆ ಎನ್ನಲಾದ ಕೆಲವಾರು ಪ್ರಕರಣಗಳ ಬಗ್ಗೆ ವಿವರಣೆ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ ಸಿ) ತಮಿಳುನಾಡು ಸರ್ಕಾರ ಹಾಗೂ ಅಲ್ಲಿನ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಗಲಾಟೆ ನಡೆಯುವ ವೇಳೆ, ಕೆಲ ಪೊಲೀಸರೇ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ತರುವಂಥ ಕೆಲವಾರು ದೃಶ್ಯಗಳು ವಾಹಿನಿಗಳಲ್ಲಿ ಎರಡು ದಿನಗಳ ಹಿಂದೆ ಬಿತ್ತರಗೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದವು. ಇವನ್ನು ಪೊಲೀಸರೇ ಮಾಡಿದರೆ ಅಥವಾ ಪೊಲೀಸು ಸಮವಸ್ತ್ರ ಧರಿಸಿ ಬಂದ ಕಿಡಿಗೇಡಿಗಳು ಇಂಥ ಕೃತ್ಯಗಳನ್ನು ನಡೆಸಿದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆದರೂ, ಮಾಧ್ಯಮಗಳಲ್ಲಿ ಬಂದಿರುವ ದೃಶ್ಯಾವಳಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಎನ್ಎಚ್ಆರ್ ಸಿಯು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ನೋಟಿಸ್ ಜಾರಿಗೊಳಿಸಿದೆ. ತಮಿಳುನಾಡು ಸರ್ಕಾರ, ಸರ್ಕಾರದ ಮುಖ್ಯ ಕಾರ್ಯದರ್ಶಿ, ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರು ಪ್ರಕರಣದ ಬಗ್ಗೆ ಉತ್ತರಿಸಬೇಕಿದೆ.[ನಿಮಿಷದಲ್ಲಿ ಪಾಸಾಯ್ತು ಜಲ್ಲಿಕಟ್ಟು ಮಸೂದೆ!]