ಸ್ವಾವಲಂಬನೆಯ ಬದುಕು ಕಲಿಸಿಕೊಟ್ಟ ಗುರು ಸತ್ಯಾರ್ಥಿ
ಕೈಲಾಶ್ ಸತ್ಯಾರ್ಥಿ ತಾವು ಕಾರ್ಯಾಚರಣೆ ಮಾಡಿ ರಕ್ಷಿಸಿದ ಮಕ್ಕಳಲ್ಲಿ ಧೈರ್ಯ, ವಿಶ್ವಾಸವನ್ನು ತುಂಬಿ ಅವರನ್ನು ಸ್ವಾವಲಂಬನೆಯ ಬದುಕಿಗೆ ಸನ್ನದ್ದಗೊಳಿಸುವ ಕಲೆಯು ಸತ್ಯಾರ್ಥಿಯವರಿಗೆ ಕರಗತವಾಗಿತ್ತು. ಕೆಲವೊಮ್ಮೆ ಜೀತವಿಮುಕ್ತರಾದ ಮಕ್ಕಳಿಗೆ ತಾವೇ ಸ್ವತಃ ಅಡುಗೆ ಮಾಡಿ ಉಣಬಡಿಸುತ್ತಿದ್ದರು. ಇಂತಹಾ ಕೆಲಸವೆಂದರೆ ಅವರಿಗೆ ಎಲ್ಲಿಲ್ಲದ ಸಂತೋಷವನ್ನು ನೀಡುತ್ತಿತ್ತು.
ಜೀತವಿಮುಕ್ತಿ ಹೊಂದಿದ ಮಕ್ಕಳ ಹಾಗೂ ಪಾಲಕರು ಸಾಕಶ್ಟು ಸಂದರ್ಭಗಳಾಲ್ಲಿ ಭೀತಿಗೊಳ್ಳುತ್ತಿದ್ದರು. ತಮ್ಮ ಮಾಲೀಕರ ಕಡೆಯಿಂದ ತಮಗೆ ತೊಂದರೆಯಾಗಬಹುದೆನ್ನುವುದು ಅವರ ಭೀತಿಗಿದ್ದ ಪ್ರಮುಖ ಕಾರಣಾವಾಗಿತ್ತು. ಆದರೆ ಅಂತಹಾ ಸಂದರ್ಭಗಳಲ್ಲಿ ಸತ್ಯಾರ್ಥಿ ಅವರಿಗೆ ನೀಡುತ್ತಿದ್ದ ಸಾಂತ್ವನದ ನುಡಿಗಳು, ಭರವಸೆಗಳು ಅಂತಹಾ ಸಮಯದಲ್ಲಿಯೂ ಅವರ ಮೊಗದಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದವು.
1988ರಲ್ಲಿ ಬಾಲಕಾರ್ಮಿಕರ ಮುಕ್ತಿಗಾಗಿ ಕೈಲಾಶ್ ಸತ್ಯಾರ್ಥಿಯವರ ನೇತೃತ್ವದಲ್ಲಿ ಜಾಗತಿಕ ಮೆರವಣಿಗೆ 103 ದೇಶಗಳ 7.2 ಮಿಲಿಯನ್ ಜನ 20,000 ನಾಗರಿಕ ಸಂಘಟನೆಗಳು ಭಾಗವಹಿಸಿದ್ದವು. [ನೊಬೆಲ್ ಪಾರಿತೋಷಕ ವಿಜೇತ ಕೈಲಾಶ್ ಸತ್ಯಾರ್ಥಿ]
1994 ರಲ್ಲಿ ಕೈಲಾಶ್ ಸತ್ಯಾರ್ಥಿಯವರು ಪರಿಚಯಿಸಿದ "ರಗ್ ಮಾರ್ಕ್" ಯೋಜನೆ ಸಾಕಷ್ಟು ಜನಪ್ರಿಯವಾಗಿದ್ದು ಆ ಯೋಜನೆಯಂತೆ ಬಾಲ ಕಾರ್ಮಿಕರನ್ನು ಬಳಸಿಕೊಳ್ಳದೆ ರತ್ನಗಂಬಳಿ ಹಾಗೂ ರಗ್ಗುಗಳನ್ನು ದೇಶ ವಿದೇಶಗಳಲ್ಲಿ ಮಾರಾಟ ಮಾಡುವುದಾಗಿದೆ. ಹಾಗೆ ಮಾರಾಟವಾಗುವ ಉತ್ಪನ್ನಗಳಿಗೆ "ರಗ್ ಮಾರ್ಕ್" ಚಿಹ್ನೆಯನ್ನು ನೀಡಲಾಗುತ್ತದೆ. ಇದೊಂದು ಸಾಮಾಜಿಕ ಪ್ರಮಾಣಪತ್ರವಾಗಿದ್ದು ಇದನ್ನು ಬಳಸಿಕೊಳ್ಳಲು ಒಪ್ಪಿದ ಕಾರ್ಖಾನೆಗಳು ಪರಿಶೀಲನೆಗೆ ಒಳಪಡಲೂ ಸಹ ಸಹಮತವನ್ನು ಸೂಚಿಸಬೇಕಾಗುವುದು.
2001 ರಲ್ಲಿ "ಬಾಲಮಿತ್ರ ಗ್ರಾಮ"" ಯೋಜನೆಯನ್ನು ಪ್ರಾರಂಭಿಸಿದ ಸತ್ಯಾರ್ಥಿಯವರು ಬಾಲ ಕಾರ್ಮಿಕ ಪದ್ದತಿ ನಿರ್ಮೂಲನ, ಮಕ್ಕಳ ಹಕ್ಕುಗಳ ರಕ್ಷಣೆ ಸರ್ವರಿಗೂ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಈ ಯೋಜನೆಯು ಸಹ ಯಶಸ್ವಿಯಾಗಿ ಮುಂದುವರಿದುಕೊಂಡು ಬಂದಿದೆ. ಈ ಯೋಜನೆಯಡಿಯಲ್ಲಿ ಪ್ರಾರಂಭಗೊಂಡ "ಬಾಲ ಪಂಚಾಯತ್" ಕಾರ್ಯಕ್ರಾಮದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳೂ ನೇರವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಆ ಮೂಲಕ ಮಕ್ಕಳ ಹಕ್ಕು ಬಾದ್ಯತೆಗಳನ್ನು ಅವರ ಮೂಲಕವೇ ಸಮಾಜಕ್ಕೆ ಮನವರಿಕೆ ಮಾಡಿಸುವ ಕೆಲಸ ನಡೆಯುತ್ತದೆ.
ಹೀಗೆ ದೇಶದಲ್ಲಿ ಪ್ರಾರಂಭವಾದ ಮೊದಲ ಮಕ್ಕಳ ಹಕ್ಕುಗಳ ಸಂಘಟನೆ "ಬಚ್ ಪನ್ ಬಚಾವೋ" ಆಂದೋಲನ ಸ್ಥಾಪಕರಾದ ಕೈಲಾಶ್ ಸತ್ಯಾರ್ಥಿಯವರು ಹಲವು ಕಾರ್ಖಾನೆಗಳಲ್ಲಿ ಕೆಟ್ತ ಸನ್ನಿವೇಶಗಳಾಲ್ಲಿ ಜೀತದಾಳಿನಂತೆ ದುಡಿಯುತ್ತಿದ್ದ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಅನೇಕ ಮಹಿಳೆಯರನ್ನು ಸಹ ತಮ್ಮ ಸಂಘಟನೆಯ ಮುಖಾಂತರ ರಕ್ಷಿಸಿದ್ದಾರೆ ಹಾಗೂ ಅವರಲ್ಲಿ ಪ್ರತಿಯೊಬ್ಬರಿಗೂ ಸ್ವಾವಲಂಬನೆಯಿಂದ ಬದುಕುವ ದಾರಿ ತೋರಿಸಿದ್ದಾರೆ. "ಮಕ್ಕಳ ಮಾರಾಟ ನಿಲ್ಲಬೇಕು, ನಿರುದ್ಯೋಗ ಸಮಸ್ಯೆ, ಅನಕ್ಷರತೆ ನಿವಾರಣೆಯಾಗಬೇಕು, ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂಬ ನಿಲುವನ್ನು ಹೊಂದಿರುವ ಸತ್ಯಾರ್ಥಿಯವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಪ್ರಬಲ ಪ್ರತಿಪಾದಕರೆನಿಸಿದ್ದಾರೆ. [ಮಲಾಲಾ, ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ]
ಪ್ರಶಸ್ತಿ - ಪುರಸ್ಕಾರಗಳು: ಇದೀಗ ದೆಹಲಿ ನಗರದಲ್ಲಿ ತನ್ನ ಧರ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ನೆಮ್ಮದಿ ಜೀವನ ನದೆಸುತ್ತಿರುವ, ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ಕಾರ್ಮಿಕರ ಉದ್ದಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಿಟ್ಟ ಕೈಲಾಶ್ ಸತ್ಯಾರ್ಥಿಯವರ ಕಾರ್ಯಗಳನ್ನು ಮೆಚ್ಚಿ ದೇಶ ವಿದೇಶಗಳ ಅನೇಕ ಸರ್ಕಾರ, ಸಂಘಟನೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.
1993 ರಲ್ಲಿ ಅಮೇರಿಕ ಸರ್ಕಾರದ "ಅಶೋಕ ಫೆಲೋಶಿಪ್" ಗೌರವಕ್ಕೆ ಆಯ್ಕೆಯಾದರೆ, 1994 ರಲ್ಲಿ ಜರ್ಮನಿ ಸರ್ಕಾರವು ಕೊಡಮಾಡುವ "ದಿ ಅಷೇನರ್ ಇಂಟರ್ನಾಷನಲ್ ಪೀಸ್ ಅವಾರ್ಡ್" ಗೆ ಪಾತ್ರರಾಗಿದ್ದರು.1995 ರಲ್ಲಿ ಅಮೇರಿಕಾ ದೇಶದ "ರಾಬರ್ಟ್ ಎಫ್. ಕೆನಡಿ ಮಾನವ ಹಕ್ಕುಗಳ ಪ್ರಶಸ್ತಿ ಸ್ವೀಕರಿಸಿದ್ದ ಸತ್ಯಾರ್ಥಿಯವರಿಗೆ 1998 ರಲ್ಲಿ ನೆದರ್ಲ್ಯಾಂಡ್ ದೇಶದಿಂದ "ಗೋಲ್ದನ್ ಫ್ಲ್ಯಾಗ್" ಪುರಸ್ಕಾರ ಲಭಿಸಿತ್ತು 1999 ರಲ್ಲಿ ಜರ್ಮನಿಯಿಂದ Friedrich Ebert Stiftung ಪುರಸ್ಕಾರಕ್ಕೆ ಭಾಜನರಾಗುವ ಮೂಲಕ ಜರ್ಮನಿ ದೇಶದವರಿಂದ ಎರಡನೇ ಬಾರಿಗೆ ಗೌರವಿಸಲ್ಪಟ್ಟರು. 2002 ರಲ್ಲಿ ಮಿಚಿಗನ್ ವಿಶ್ವವಿದ್ಯಾನಿಲಯದಿಂದ "ವೆಲ್ಲಿಂಗ್ಬರ್ಗ್ ಮೆಡಲ್" ಸ್ವೀಕರಿಸ್ದ್ದ ಕೈಲಾಶ್ ಸತ್ಯಾರ್ಥಿಯವರಿಗೆ 2006 ರಲ್ಲಿ ಅಮೇರಿಕಾ ದೇಶವು "ಫ್ರೀಡಮ್ ಅವಾರ್ಡ್" ನ್ನು ನೀಡಿ ಸತ್ಕರಿಸಿತು.
ಮತ್ತೆ 2007 ರಲ್ಲಿ ಇಟಾಲಿಯನ್ ಸೆನೆಟ್ ನೀಡುವ ಗೋಲ್ಡ್ ಮೆದಲ್ ಪುರಸ್ಕಾರವನ್ನು ತನ್ನದಾಗಿಸಿಕೊಂಡ ಸತ್ಯಾರ್ಥಿಯವರು 2008 ರಲ್ಲಿ ಸ್ಪೇನ್ ನಿಂದ "ಅಲ್ಫಾನ್ಸೋ ಕೋಮನ್ ಅಂತರಾಷ್ಟ್ರೀಯ ಪುರಸ್ಕಾರವನ್ನು ಪಡೆದರು. . 2009 ರಲ್ಲಿ ಅಮೇರಿಕಾ ಸರ್ಕಾರದಿಂದ "ಡಿಫೆನ್ಸ್ ಆಫ್ ಡೆಮಾಕ್ರಸಿ ಅವಾರ್ಡ್" ಪ್ರಶಸ್ತಿ ಪಡೆದಿದ್ದ ಸತ್ಯಾರ್ಥಿಯವರಿಗೆ ಇದೀಗ 2014 ನೇ ಸಾಲಿನ ಪ್ರತಿಷ್ಠಿತ ನೋಬೆಲ್ ಶಾಂತಿ ಪ್ರಶಸ್ತಿ ಒಲಿದು ಬಂದಿದೆ.
ಭಾರತೀಯರಿಗೆಲ್ಲಾ ಹೆಮ್ಮೆಯಿಂದ ಬೀಗುವಂತೆ ಮಾಡಿರುವ ಭಾರತದ ವಿಶ್ವಶಾಂತಿಯ ಧೋರಣೆಯನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಬಿತ್ತರಿಸಿರುವ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾದ ಸತ್ಯಾರ್ಥಿಯಂತಹವರನ್ನು ಇನ್ನಾದರೂ ನಮ್ಮ ದೇಶದ ಸರ್ಕಾರಗಳು, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕಿದೆ. ಹಾಗಾದಾಗ ಮಾತ್ರವೇ ನಮ್ಮ ಸಮಾಜಕ್ಕೂ, ಜನತೆಗೂ ಮಾನವತೆಯ ಮೌಲ್ಯಗಳ ಅರಿವಿದೆ ಎಂದು ಇತರರಿಗೆ ತಿಳಿಸಿದಂತಾಗುತ್ತದೆ.
"ಈಗ ಆಗಲ್ಲ ಎಂದರೆ ಯಾವಾಗ ಆಗುತ್ತೆ? ನಿಮ್ಮ ಕಡೆ ಮಾದಲು ಆಗುವುದಿಲ್ಲವೆಂದರೆ ಬೇರೆ ಯಾರ ಬಳಿ ಆಗುತ್ತೆ? ನಾವು ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗುಲಾಮಿತನ ಹೊಡೆದೋಡಿಸಲು ಸಾಧ್ಯ."
***
"ಯಾವುದೇ ದೇಶವು ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ. ಬಾಲ ಕಾರ್ಮಿಕ ಪದ್ದತಿಗೂ ನಿರುದ್ಯೋಗಕ್ಕೂ ನೇರ ಸಂಬಂಧವಿದೆ ಎಂಬುದು ನಮ್ಮ ವಾದ ದೇಶದಲ್ಲಿ 65 ದಶಲಕ್ಷ ಮಂದಿ ನಿರುದ್ಯೋಗಿಗಳಿದ್ದಾರೆ. ಕಾರ್ಖಾನೆಗಳ ಮಾಲೀಕರು ತಂದೆ ತಾಯಿಗಳಿಗಿಂತ ಅವರ ಮಕ್ಕಳನ್ನೇ ಕೆಲಸಕ್ಕೆ ತೆಗೆದುಕೊಳ್ಳಲುಹೆಚ್ಚಾಗಿ ಆಸಕ್ತಿ ತೋರುತ್ತಾರೆ. ಯಾಕೆಂದರೆ ಮಕ್ಕಳಿಗೆ ಕಡಿಮೆ ವೇತನ ನೀಡಿ ಹೆಚ್ಚಿನ ಕೆಲಸ ಮಾಡಿಸಬಹುದು. ಇದರ ಜತೆಗೆ ಮಕ್ಕಳು ಯೂನಿಯನ್ ಗಳನ್ನು ನಿರ್ಮಿಸಿಕೊಳ್ಳುವುದಿಲ್ಲ. ಬಾಲ ಕಾರ್ಮಿಕ ಸಮಸ್ಯೆಯ ಮೂಲವಿರುವುದೇ ಇಲ್ಲಿ."
***
"ಜಗತ್ತಿನಲ್ಲಿ ಮಕ್ಕಳ ಜೀತ ಪದ್ದತಿ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದೊಂದು ಪಿಶಾಚಿಯಷ್ಟೇ ಅಲ್ಲ, ಮಾನವತೆಯ ವಿರುದ್ದ ಅಪರಾಧವೂ ಹೌದು."
***
"ನನ್ನ ಪಾಲಿಗೆ ಇದನ್ನು (ಮಕ್ಕಳ ಶೋಷಣೆ) ಒಂದು ಪರೀಕ್ಷೆಯಾಗಿ ನೋಡುತ್ತೇನೆ. ಇದೊಂದು ರೀತಿಯ ನೈತಿಕ ಪರೀಕ್ಷೆ. ಈ ರೀತಿಯ ಪೈಶಾಚಿಕತೆಯ ವಿರುದ್ದ ಎದ್ದು ನಿಲ್ಲಬೇಕಾದರೆ ಈ ಪರೀಕ್ಷೆಯಲ್ಲಿ ಪ್ರತಿಯೊಬ್ಬರೂ ಉತ್ತೀರ್ಣರಾಗಲೇಬೇಕು."
***
"ಹಿಂದೆ ಚಹಾ ಮಾರುತ್ತಿದ್ದ ಹುಡುಗ ಈಗ ಈ ದೇಶದ ಪ್ರಧಾನಿಯಾಗುವ ಮೂಲಕ ತಮ್ಮ ಟೀಕಾಕಾರರಿಗೆ ಸಡ್ಡು ಹೊಡೆದು ನಿಂತಿದ್ದಾನೆ. ಯಾವ ಮಗುವೂ ಬಾಲಕಾರ್ಮಿಕತೆಯ ಕೂಪಕ್ಕೆ ಬೀಳದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಈಗ ಅವರ ಮುಂದೆ ಇದೆ."
- ಲೋಕಸಭಾ ಚುನಾವಣೆ ೨೦೧೪ ರ ಫಲಿತಾಂಶ ಹೊರಬಂದ ಸಮಯದಲ್ಲಿ ಕೈಲಾಶ್ ಸತ್ಯಾರ್ಥಿಯವರು ನರೇಂದ್ರ ಮೋದಿಯವರ ಕುರಿತು ಮಾಡಿದ ಟ್ವೀಟ್.