ಕೇದಾರನಾಥ ದರ್ಶನಕ್ಕೆ ಜನಸಾಗರ: ಸೋನಪ್ರಯಾಗದಲ್ಲಿಯೇ ಭಕ್ತರಿಗೆ ತಡೆ
ಸೋನಪ್ರಯಾಗ ಮೇ 28: ದಿನ ಕಳೆದಂತೆ ಕೇದಾರನಾಥನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಕೇದಾರನಾಥ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಅಧಿಕ ಜನಸಂದಣಿಯ ಹಿನ್ನೆಲೆಯಲ್ಲಿ ಸೋನಪ್ರಯಾಗದಲ್ಲಿಯೇ ಭಕ್ತರನ್ನು ತಡೆಹಿಡಿಯಲಾಗುತ್ತಿದೆ. ಶನಿವಾರ ಬೆಳಗ್ಗೆ 10 ಗಂಟೆಯಿಂದ ಸೋನ್ಪ್ರಯಾಗದ ಕೇದಾರನಾಥ ಧಾಮದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳ ಹಿನ್ನಲೆಯಲ್ಲಿ ಪೊಲೀಸರು ಮತ್ತು ಐಟಿಬಿಪಿ ಭಕ್ತರನ್ನು ತಡೆದಿದ್ದಾರೆ.
ಮೇ 29ರ ಭಾನುವಾರ ಮುಂಜಾನೆ 4 ಗಂಟೆಯಿಂದ ತಡೆಹಿಡಿದ ಪ್ರಯಾಣಿಕರನ್ನು ಕೇದಾರನಾಥ ಧಾಮಕ್ಕೆ ಕಳುಹಿಸಲಾಗುವುದು ಎಂದು ರುದ್ರಪ್ರಯಾಗ ವೃತ್ತ ಅಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಕೇದಾರನಾಥ ಧಾಮದಲ್ಲಿ ವಿಪರೀತ ಜನಸಂದಣಿಯಿಂದಾಗಿ ಯಾವುದೇ ತೊಂದರೆಯಾಗದಂತೆ ಪೊಲೀಸರು ಸೋನಪ್ರಯಾಗದಲ್ಲಿ ಭಕ್ತರನ್ನು ತಡೆದಿದ್ದಾರೆ. ಜನಸಂದಣಿ ಮತ್ತಷ್ಟು ಕಡಿಮೆಯಾದರೆ ಮಾತ್ರ ಸೋನಪ್ರಯಾಗದಿಂದ ಭಕ್ತರನ್ನು ಕಳುಹಿಸಲಾಗುತ್ತದೆ ಎಂದಿದ್ದಾರೆ.
83 ಯಾತ್ರಾರ್ಥಿಗಳ ಸಾವು
ಚಾರ್ಧಾಮ್ ಯಾತ್ರೆಯಲ್ಲಿ ಒಂದೆಡೆ ಭಕ್ತರ ಆಗಮನಕ್ಕೆ ದಾಖಲೆ ಮಾಡಲಾಗುತ್ತಿದೆ. ಮತ್ತೊಂಡೆದೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಲಿದೆ. ಚಾರ್ಧಾಮ್ ಯಾತ್ರೆ ಆರಂಭವಾದ 24 ದಿನಗಳಲ್ಲಿ 83 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಗುರುವಾರ, ಸತತ ಎರಡನೇ ದಿನ 7 ಯಾತ್ರಿಕರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 20 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ ಮತ್ತು 10 ಲಕ್ಷಕ್ಕೂ ಹೆಚ್ಚು ಯಾತ್ರಿಕರು ನಾಲ್ಕು ಧಾಮಗಳಿಗೆ ಭೇಟಿ ನೀಡಿದ್ದಾರೆ.
ಎಲ್ಲೆಲ್ಲಿ ಎಷ್ಟು ಜನ ಸಾವು?
ಕೋವಿಡ್ನಲ್ಲಿ 2 ವರ್ಷಗಳಿಂದ ಬಂದ್ ಆಗಿದ್ದ ಯಾತ್ರೆ ತೆರೆದ ಕೂಡಲೇ ಈ ಬಾರಿ ಯಾತ್ರೆಯಲ್ಲಿ ಜನಸ್ತೋಮ ಕಂಡು ಬಂದಿದೆ. ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ನಾಲ್ಕು ಧಾಮಗಳಲ್ಲದೆ, ಪ್ರಯಾಣಿಕರು ದರ್ಶನಕ್ಕಾಗಿ ಹೇಮಕುಂಡ್ ಸಾಹಿಬ್ ಅನ್ನು ತಲುಪುತ್ತಿದ್ದಾರೆ. ಕೇದಾರನಾಥ ಮತ್ತು ಯಮುನೋತ್ರಿ ಧಾಮದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದುವರೆಗೆ ಕೇದಾರನಾಥದಲ್ಲಿ 41, ಯಮುನೋತ್ರಿಯಲ್ಲಿ 25, ಬದರಿನಾಥದಲ್ಲಿ 13, ಗಂಗೋತ್ರಿಯಲ್ಲಿ 4 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಹಾನಿರ್ದೇಶಕಿ ಡಾ.ಶೈಲಜಾ ಭಟ್ ಮಾಹಿತಿ ನೀಡಿದರು.
1.25 ಸಾವಿರ ಯಾತ್ರಿಕರು ಕುದುರೆ ಮತ್ತು ಹೇಸರಗತ್ತೆಗಳ ಮೂಲಕ ಪ್ರಯಾಣ
ಅಂಕಿಅಂಶಗಳ ಪ್ರಕಾರ, ಚಾರ್ ಧಾಮ್ ಯಾತ್ರೆ ಪ್ರಾರಂಭವಾದ ಕೇವಲ 16 ದಿನಗಳಲ್ಲಿ, 55 ಕುದುರೆಗಳು ಮತ್ತು ಹೇಸರಗತ್ತೆಗಳು ತೀವ್ರವಾದ ಹೊಟ್ಟೆ ನೋವಿನಿಂದ ಸಾವನ್ನಪ್ಪಿವೆ. ಆದರೆ 4 ಕುದುರೆಗಳು ಮತ್ತು ಹೇಸರಗತ್ತೆಗಳು ಬಿದ್ದು ಒಂದು ಕಲ್ಲು ತುಂಡಾಗಿ ಸಾವನ್ನಪ್ಪಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಇದುವರೆಗೆ 1.25 ಸಾವಿರ ಯಾತ್ರಿಕರು ಕುದುರೆ ಮತ್ತು ಹೇಸರಗತ್ತೆಗಳ ಮೂಲಕ ಪ್ರಯಾಣಿಸಿದ್ದರೆ, ಇತರ ಯಾತ್ರಾರ್ಥಿಗಳು ಹೆಲಿಕಾಪ್ಟರ್ ಮತ್ತು ಕಾಲ್ನಡಿಗೆಯಲ್ಲಿ ಧಾಮ ತಲುಪಿದ್ದಾರೆ.
ವಾರಾಂತ್ಯಗಳಲ್ಲಿ ಭಕ್ತರ ಸಾಗರ
ಉತ್ತರಖಂಡ ಸರ್ಕಾರ ಚಾರ್ಧಾಮ್ ಪ್ರಯಾಣಿಕರ ಸಂಖ್ಯೆಯನ್ನು ಮಿತಿಗೊಳಿಸಿದ್ದರೂ, ಈವರೆಗೂ ಅದನ್ನು ಅನುಸರಿಸಲಾಗುತ್ತಿಲ್ಲ. ಚಾರ್ಧಾಮ್ಗೆ ಭೇಟಿ ನೀಡುವ ಪ್ರಯಾಣಿಕರು ನೋಮದಣಿಯೊಂದಿಗೆ ಭೇಟಿ ನೀಡಬೇಕು. ಆದರೆ ಅಧಿಕ ಸಂಖ್ಯೆಯಲ್ಲಿ ಜನ ನೊಂದಣಿಯಿಲ್ಲದೇ ಭೇಟಿ ನೀಡುತ್ತಿರುವುದರಿಂದ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಚಾರ್ಧಾಮ್ ರಸ್ತೆ ಮಾರ್ಗಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಕಂಡು ಬಂದಿದೆ. ಮತ್ತೊಂದೆಡೆ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾದ್ದರಿಂದ ಅವರನ್ನು ಮಾರ್ಗ ಮಧ್ಯೆ ತಡೆಯಲಾಗುತ್ತಿದೆ.