ಹುಡ್ ಹುಡ್ ಹೊಡೆತಕ್ಕೆ ಬಾಗಿಲು ಹಾಕಿದ ವೈಜಾಗ್ ಸ್ಟೀಲ್
ವಿಶಾಖಪಟ್ಟಣ, ಅ. 15 : ಭಾನುವಾರದ ಹುಡ್ ಹುಡ್ ಹೊಡೆತಕ್ಕೆ ಸಿಲುಕಿ ವಿಶಾಖಪಟ್ಟಣದ ಕೈಗಾರಿಕಾ ಪ್ರದೇಶಗಳು ಸಂಪೂರ್ಣ ಹಾನಿಗೊಳಗಾಗಿದೆ. ಹಾನಿಯ ಅಧಿಕೃತ ಲೆಕ್ಕ ಸಿಗಲು ಇನ್ನು ಕೆಲ ದಿನ ಹಿಡಿಯಬಹುದು ಎನ್ನಲಾಗಿದೆ.
ದೇಶದಲ್ಲೇ ಹೆಸರು ಪಡೆದಿದ್ದ ವೈಜಾಗ್ ಸ್ಟೀಲ್ ಸಂಪೂರ್ಣ ನೂಚ್ಚು ನೂರಾಗಿದೆ. ಆಂಧ್ರಪ್ರದೇಶ ಮತ್ತು ವಿಶಾಖಪಟ್ಟಣದ ಅನೇಕ ಜನರ ಉದ್ಯೋಗಕ್ಕೆ ಆಸರೆಯಾಗಿದ್ದ ವೈಜಾಗ್ ಹುಡ್ ಹುಡ್ ಅಬ್ಬರಕ್ಕೆ ತತ್ತರಿಸಿಹೋಗಿದೆ.[ಆಂಧ್ರಕ್ಕೆ 1000 ಕೋಟಿ ಪ್ಯಾಕೇಜ್ ಘೋಷಿಸಿದ ಮೋದಿ]
ಈ ಬಗ್ಗೆ ಮಾಹಿತಿ ನೀಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಚಂಡಮಾರುತ ಅಪಾರ ಹಾನಿ ಮಾಡಿದ್ದು ಕೃಷಿ, ಕೈಗಾರಿಕೆಗೆ ಹೊಡೆತ ನೀಡಿದೆ. ಸ್ಟೀಲ್ ಕೈಗಾರಿಕೆಗೆ ಬಿದ್ದ ಹೊಡೆತದಿಂದ 700 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವರದಿ ನೀಡಲಾಗಿದೆ ಎಂದಿದ್ದಾರೆ.
ಅಲ್ಲದೇ ಹಿಂದೂಸ್ಥಾನ್ ಶೀಪ್ ಯಾರ್ಡ್ ಲಿಮಿಟೆಡ್, ರಕ್ಷಣಾ ಇಲಾಖೆಯ ಕೇಂದ್ರಗಳು ಹಾನಿಗೊಳಗಾಗಿವೆ. ಮೊಬೈಲ್ ಟವರ್ ಗಳು, ವಿದ್ಯುತ್ ಪ್ರಸರಣ ಕೇಂದ್ರಗಳು, ಲೈನ್ ಎಲ್ಲವೂ ನೆಲಕ್ಕೆ ಅಪ್ಪಳಿಸಿವೆ ಎಂದು ನಾಯ್ಡು ತಿಳಿಸಿದ್ದಾರೆ.[ಆಂಧ್ರಕ್ಕೆ ಕರ್ನಾಟಕದ ನೆರವು]
ಇದೊಂದು ಲೆಕ್ಕಕ್ಕೆ ಸಿಗದ ನಷ್ಟವಾಗಿದೆ. ನಿಗದಿತ ಸಮಯದೊಳಗೆ ದುರಸ್ತಿ ಕಾರ್ಯ ಮುಗಿಸಲು ಶ್ರಮಿಸಲಾಗುವುದು. ನೈಸರ್ಗಿಕ ವಿಕೋಪದ ಹಾನಿ ಎಲ್ಲಡೆಯೂ ಘಟಿಸಿದೆ ಎಂದು ವೈಜಾಗ್ ವಿಭಾಗದ ಅಧ್ಯಕ್ಷ ಜಿ.ವಿ.ಎಲ್.ಸತ್ಯ ಕುಮಾರ್ ಹೇಳಿದ್ದಾರೆ.
ವಿಶಾಖಪಟ್ಟಣ ಮತ್ತು ಗಂಗಾವರಂ ಬಂದರುಗಳಲ್ಲಿನ ಕಾರ್ಯಚಟುವಟಿಕೆ ಸಹ ಬಂದ್ ಆಗಿದ್ದು ಸಹಜ ಸ್ಥಿತಿಗೆ ಬರಲು ಇನ್ನೂ ಕೆಲ ದಿನ ಹಿಡಿಯಬಹುದು.