'ಪಡಿತರ ಚೀಟಿ ಇಲ್ಲದೆಯೇ ವಲಸೆ ಕಾರ್ಮಿಕರಿಗೆ ಆಹಾರ ದೊರೆಯುವುದು ಹೇಗೆ?' - ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ನವದೆಹಲಿ, ಜೂ.12: ಪಡಿತರ ಚೀಟಿ ಇಲ್ಲದ ಕೋಟ್ಯಂತರ ವಲಸೆ ಕಾರ್ಮಿಕರಿಗೆ ಆಹಾರ ತಲುಪುವುದಾದರೂ ಹೇಗೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರವನ್ನು ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠವು ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭತಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ.
ವಲಸೆ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಬಹಳ ನಿಧಾನವಾಗಿದೆ, ಚುರುಕುಗೊಳಿಸಿ: ಸುಪ್ರೀಂ ಕೋರ್ಟ್
ಹಲವು ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆಯ ಕಾರಣದಿಂದಾಗಿ ಲಾಕ್ಡೌನ್ ಮಾಡಲಾಗಿದೆ. ಈ ಲಾಕ್ಡೌನ್ ಕಾರಣದಿಂದಾಗಿ ಕೋಟ್ಯಾಂತರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಾಸ್ ತೆರಳಿದ್ದಾರೆ. ಆದರೆ ಇನ್ನೂ ಕೆಲವು ವಲಸೆ ಕಾರ್ಮಿಕರು ಉದ್ಯೋಗ ಹರಸಿ ಬಂದಿದ್ದ ಊರಿನಲ್ಲೇ ಬಾಕಿಯಾಗಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತ 5 ಕೆಜಿ ಉಚಿತ ಆಹಾರ ಧಾನ್ಯ ಘೋಷಿಸಿದೆ.
''ಈಗಾಗಲೇ ಎಂಟು ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ನೀಡಿದ್ದೇವೆ''
ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭತಿ, ''ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಫಲಾನುಭವಿಗಳೆಂದು ಗುರುತಿಸಲ್ಪಟ್ಟ 80 ಕೋಟಿ ಬಡವರನ್ನು ಒಳಗೊಳ್ಳುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯೊಂದಿಗೆ ಕೇಂದ್ರವು ತನ್ನ ಅತ್ಯುತ್ತಮ ಹೆಜ್ಜೆ ಮುಂದಿರಿಸಿದೆ. ಈ ಯೋಜನೆಯ ಮೂಲಕ ಮೇ ಮತ್ತು ಜೂನ್ ತಿಂಗಳಲ್ಲಿ ಸರ್ಕಾರದಿಂದ ಪ್ರತಿ ವ್ಯಕ್ತಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದೆ. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆರ್ಥಿಕ ಅಡೆತಡೆಗಳ ಹಿನ್ನೆಲೆ ಬಡವರಿಗೆ ಸಹಾಯ ಮಾಡುವ ಉದ್ದೇಶ ನಾವು ಹೊಂದಿದ್ದೇವೆ. ಈಗಾಗಲೇ ಎಂಟು ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ನೀಡಲಾಗಿದೆ'' ಎಂದು ವಿವರಿಸಿದರು.
''ಪಡಿತರ ಚೀಟಿ ಇಲ್ಲದೆಯೇ ವಲಸೆ ಕಾರ್ಮಿಕರಿಗೆ ಆಹಾರ ದೊರೆಯುವುದು ಹೇಗೆ?''
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್, ''ನೀವು (ಕೇಂದ್ರ ಸರ್ಕಾರ) ಆಹಾರವನ್ನು ಒದಗಿಸುತ್ತಿರುವುದರಲ್ಲಿ ಸಂಶಯವಿಲ್ಲ. ಕೆಲವು ವಲಸೆ ಕಾರ್ಮಿಕರಲ್ಲಿ ಪಡಿತರ ಚೀಟಿಗಳಿವೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಾವು ಪಡಿತರ ಚೀಟಿ ಇಲ್ಲದವರ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಪಡಿತರ ಚೀಟಿ ಇಲ್ಲದ ಜನರನ್ನು ಗುರುತಿಸಲು ಮತ್ತು ಆಹಾರವನ್ನು ಒದಗಿಸುವ ನಿಮ್ಮ ಕಾರ್ಯವಿಧಾನದ ಬಗ್ಗೆ ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಪಡಿತರ ಚೀಟಿ ಇಲ್ಲದೆಯೇ ವಲಸೆ ಕಾರ್ಮಿಕರಿಗೆ ಆಹಾರ ದೊರೆಯುವುದು ಹೇಗೆ?'' ಎಂದು ಸರ್ಕಾರಕ್ಕೆ ವಿವರ ನೀಡುವಂತೆ ಹೇಳಿದರು. ಈ ವೇಳೆ, ''ಆಹಾರ ಧಾನ್ಯಗಳನ್ನು ಲಭ್ಯವಾಗುವಂತೆ ಮಾಡುವ ಅಥವಾ ಸಂಗ್ರಹಿಸುವ ಜವಾಬ್ದಾರಿಯನ್ನು ಮಾತ್ರ ಕೇಂದ್ರದಲ್ಲಿ ಹೊಂದಿದ್ದೇವೆ. ರಾಜ್ಯಗಳು ತಮ್ಮ ಪ್ರದೇಶದೊಳಗೆ ಆಹಾರವನ್ನು ವಿತರಿಸಬೇಕಾಗಿದೆ'' ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭತಿ ಹೇಳಿದ್ದಾರೆ. ಇನ್ನು ''ರಾಜ್ಯಗಳಿಗೆ ಏನು ಬೇಕಾದರೂ ಸಹಾಯ ಮಾಡಲು ಕೇಂದ್ರ ಸಿದ್ಧವಾಗಿದೆ'' ಎಂದು ಕಾನೂನು ಅಧಿಕಾರಿ ಹೇಳಿದರು.
"ಹೊರಡುವುದೇ ಒಳ್ಳೇದು"; ಅತಂತ್ರದ ನಡುವೆ ನಗರ ಬಿಡುತ್ತಿರುವ ಕಾರ್ಮಿಕರು
''ಪಡಿತರ ಚೀಟಿ ಇಲ್ಲದವರನ್ನು ಸಾಯಲು ಬಿಡಲಾಗದು''
ಇನ್ನು ವಕೀಲ ಪ್ರಶಾಂತ್ ಭೂಷಣ್ ಜೊತೆ ಹಾಜರಾದ ಹಿರಿಯ ವಕೀಲ ದುಶ್ಯಂತ್ ದೇವ್, "ಕೇಂದ್ರವು ಪಡಿತರ ಚೀಟಿಗಳಿಲ್ಲದ ಬಡವರನ್ನು ರಾಜ್ಯಗಳ ಕರುಣೆಗೆ ಬಿಡುತ್ತಿದೆ. ಪಡಿತರ ಚೀಟಿ ಇಲ್ಲದವರನ್ನು ಸಾಯಲು ಬಿಡಲಾಗದು. ಆರ್ಥಿಕ ಪರಿಸ್ಥಿತಿ ಈಗ ಹೆಚ್ಚು ಭೀಕರವಾಗಿದೆ" ಎಂದು ಹೇಳಿದ್ದಾರೆ. ದೇವ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೆಹ್ತಾ, ದುಶ್ಯಂತ್ ದೇವ್ ಈ ಸಮಸ್ಯೆಯನ್ನು "ನಾಟಕೀಯಗೊಳಿಸುತ್ತಿದ್ದಾರೆ" ಎಂದು ದೂರಿದರು.
1 ತಿಂಗಳಿನಿಂದ ಕಾರ್ಯ ನಿರ್ವಹಿಸದ ವಲಸೆ ಕಾರ್ಮಿಕರ ನೋಂದಾವಣೆ ಪೋರ್ಟಲ್
ಕಳೆದ ವರ್ಷ ಕೇಂದ್ರವು 8 ಕೋಟಿ ವಲಸೆ ಕಾರ್ಮಿಕರನ್ನು ಪಡಿತರ ಚೀಟಿಗಳಿಲ್ಲದೆ ಇದ್ದಾರೆ ಎಂಬುದನ್ನು ಗುರುತಿಸಿದೆ. 2.8 ಕೋಟಿಗ ಲೆಕ್ಕಾಚಾರವನ್ನು ರಾಜ್ಯಗಳು ಗುರುತಿಸಿವೆ. ಈ ಸಮಯದಲ್ಲಿ, ವಲಸೆ ಕಾರ್ಮಿಕರನ್ನು ಗುರುತಿಸಲು ಮತ್ತು ನೋಂದಾಯಿಸಲು ರಾಷ್ಟ್ರೀಯ ದತ್ತಾಂಶ ಸಂಗ್ರಹವನ್ನು ಪೂರ್ಣಗೊಳಿಸಲು ವಿಳಂಬ ಮಾಡಿದ್ದಕ್ಕಾಗಿ ನ್ಯಾಯಾಲಯವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಡೇಟಾಬೇಸ್ ಪೋರ್ಟಲ್ನ ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು, ''ಈ ವಿಳಂಬಕ್ಕೆ ಸಾಫ್ಟ್ವೇರ್ನ ಸಮಸ್ಯೆ ಕಾರಣ. ಮುಂದಿನ ಮೂರು ಅಥವಾ ನಾಲ್ಕು ತಿಂಗಳಲ್ಲಿ ಡೇಟಾಬೇಸ್ ಸಿದ್ಧವಾಗಲಿದೆ'' ಎಂದು ಹೇಳಿದೆ.
ಲಾಕ್ಡೌನ್ ಭೀತಿ: ವಲಸೆ ಕಾರ್ಮಿಕರ ಎದೆಯಲ್ಲಿ ಹೆಚ್ಚಿದ ಢವಢವ!
ಡೇಟ್ಬೇಸ್ ಪೋರ್ಟಲ್ ಸಿದ್ದತೆಗೆ ಮೂರ್ನಾಲ್ಕು ತಿಂಗಳು ಯಾಕೆ ಬೇಕು?
ಸರ್ಕಾರ ಮೂರು ಅಥವಾ ನಾಲ್ಕು ತಿಂಗಳಲ್ಲಿ ಡೇಟಾಬೇಸ್ ಸಿದ್ಧವಾಗಲಿದೆ ಎಂದು ಹೇಳಿರುವುದಕ್ಕೆ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ''ನಿಮಗೆ ಮೂರು ಅಥವಾ ನಾಲ್ಕು ತಿಂಗಳು ಏಕೆ ಬೇಕು? ನೀವು ಡೇಟಾಬೇಸ್ ಪೋರ್ಟಲ್ ಅನ್ನು ಮಾತ್ರ ಸಿದ್ಧಪಡಿಸುತ್ತಿದ್ದೀರಿ'' ಎಂದು ನ್ಯಾಯಮೂರ್ತಿ ಭೂಷಣ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯ ಭತಿ, ''ಈ ಪೋರ್ಟಲ್ನಲ್ಲಿ ಸಂಪೂರ್ಣ ಮಾಹಿತಿ ಇರುತ್ತದೆ. ಇದು ಡೇಟಾಬೇಸ್ ಆಗಿ ಕಾರ್ಯನಿರ್ವಹಿಸುವುದಲ್ಲದೆ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ನಡೆಸಲು ಸಹಾಯ ಮಾಡುತ್ತದೆ'' ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)