ಸೈಬರ್ ದಾಳಿ 'ರಾನ್ಸಮ್ವೇರ್'ನಿಂದ ತಪ್ಪಿಸಿಕೊಳ್ಳುವುದು ಹೇಗೆ?
'ರಾನ್ಸೊಮ್ಮೇರ್' ಸೈಬರ್ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಚರ್ಚೆ ವಿಶ್ವದಾದ್ಯಂತ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪುಣೆ ಪೊಲೀಸರು ಈ ರಾನ್ಸಮ್ವೇರ್ ನಿಂದ ತಪ್ಪಿಸಿಕೊಳ್ಳುವುದು ಬಗ್ಗೆ ಸಲಹೆ ನೀಡಿದ್ದಾರೆ. ಆ ಸಲಹೆ ಇಲ್ಲಿದೆ..
ಪುಣೆ, ಮೇ 15: ವಾನ್ನಕ್ರೈ ಎಂಬ 'ರಾನ್ಸೊಮ್ಮೇರ್' ಸೈಬರ್ ದಾಳಿಯಿಂದ ಭಾರತ ಸೇರಿ ವಿಶ್ವದ ಸುಮಾರು 150ದೇಶಗಳು ತತ್ತರಿಸಿ ಹೋಗಿವೆ.
ಶುಕ್ರವಾರ ನಡೆದ ಈ ಕಂಡು ಕೇಳರಿದ ಸೈಬರ್ ದಾಳಿಗೆ ಇಡೀ ವಿಶ್ವದ ಕಂಪ್ಯೂಟರ್ ವ್ಯವಸ್ಥೆಯೇ ಪತರಗುಟ್ಟಿ ಹೋಗಿದೆ. 150 ದೇಶಗಳಲ್ಲಿ 75,000 ಕ್ಕೂ ಹೆಚ್ಚಿನ ಸಂಸ್ಥೆಗಳನ್ನು ಗುರಿಯಾಗಿಸಿ ರಾನ್ಸಮ್ಮೇರ್ ದಾಳಿಗಳು ನಡೆದಿವೆ. ಮುಖ್ಯವಾಗಿ ರಷ್ಯಾ, ಉಕ್ರೇನ್ ಹಾಗೂ ತೈವಾನ್ ಮೂಲದ ಸಂಸ್ಥೆಗಳ ಮೇಲೆ ಹೆಚ್ಚಿನ ದಾಳಿಗಳು ನಡೆದಿವೆ.[ಭೀಕರ ಸೈಬರ್ ದಾಳಿ ಬಗ್ಗೆ ಎಚ್ಚರಿಸಿದ್ದ ಭಾರತೀಯ ಮೂಲದ ವೈದ್ಯ]
ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಚರ್ಚೆ ವಿಶ್ವದಾದ್ಯಂತ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪುಣೆ ಪೊಲೀಸರು ಈ ರಾನ್ಸಮ್ವೇರ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಪುಣೆ ಪೊಲೀಸರು ನೀಡಿದ ಸಲಹೆ ಇಲ್ಲಿದೆ.
|
ರಾನ್ಸಮ್ವೇರ್ ದಾಳಿ ಎಂದರೇನು?
ಕಂಪ್ಯೂಟರ್ ವ್ಯವಸ್ಥೆಗೆ ಅಪರಿಚಿತ ಈ ಮೇಲ್ ಮೂಲಕ ಮಾಲ್ವೇರ್ ಹಾಕಲಾಗುತ್ತದೆ. ಈ ಮಾಲ್ವೇರ್ ಮೌಲ್ಯಯುತ ಮಾಹಿತಿಯನ್ನು ಬಂದ್ ಮಾಡಿ ಅದನ್ನು ಓಪನ್ ಮಾಡಲು ಹಣ ನೀಡಿ ಎಂದು ಬೇಡಿಕೆ ಇಡುತ್ತದೆ.
ಹ್ಯಾಕ್ ಮಾಡುವವರು ಯಾರ ಕಂಪ್ಯೂಟರ್ ಸಿಸ್ಟಂ ಹ್ಯಾಕ್ ಮಾಡಬೇಕೋ ಅವರ ಸಾಮಾಜಿಕ ಜಾಲತಾಣಗಳ ಸ್ನೇಹಿತರನ್ನು ಪತ್ತೆ ಹಚ್ಚಿ ಇದನ್ನು ಆಧರಿಸಿ ನಕಲಿ ಈ ಮೇಲ್ ಗಳನ್ನು ಸೃಷ್ಟಿಸಿ ಅದರ ಮೇಲೆ ನಂಬಿಕೆ ಬಂದು ಕ್ಲಿಕ್ ಮಾಡುವಂತೆ ಮಾಡುತ್ತಾರೆ.
ಅದರಲ್ಲೂ ಕಂಪ್ಯೂಟರ್ ಸಿಸ್ಟಮ್, ಸರ್ವರ್, ಅಥವಾ ಸಾಫ್ಟ್ ವೇರ್ ನಲ್ಲಿರುವ ಲೋಪವನ್ನು ಬಳಸಿಕೊಂಡು ಇವು ಕಂಪ್ಯೂಟರ್ ಸಿಸ್ಟಂನೊಳಕ್ಕೆ ಹೊಕ್ಕುತ್ತವೆ.
ಆರೋಗ್ಯ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗೆ ಸಂಬಂಧಿಸಿದ ವ್ಯವಸ್ಥೆಯ ಹೆಚ್ಚಿನ ಸಂಸ್ಥೆಗಳು ದಾಳಿಗೆ ಗುರಿಯಾಗಿವೆ. ಇದಕ್ಕೆ ಕಾರಣ ಈ ಸಂಸ್ಥೆಗಳಲ್ಲಿ ಇರುವ ಸೂಕ್ಷ್ಮ ದಾಖಲೆಗಳು ಹಾಗೂ ಅವುಗಳನ್ನು ಅವ್ಯವಸ್ಥಿತವಾಗಿ ಪೇರಿಸಿಟ್ಟ ವ್ಯವಸ್ಥೆಗಳು.
ರಾನ್ಸಮ್ವೇರ್ ದಾಳಿಯಿಂದ ಹೇಗೆ ರಕ್ಷಿಸಬೇಕು?
1. ಅಪರಚಿತ ಮೂಲಗಳಿಂದ ಬಂದ ಹೈಪರ್ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ. ಮತ್ತು ಅಧಿಕೃತವಾಗಿಲ್ಲದೇ ಇದ್ದರೆ ಗೊತ್ತಿರುವ ಸೈಟ್ ಗಳಲ್ಲೂ ಎಚ್ಚರಿಕೆಯಿಂದ ನಡೆದುಕೊಳ್ಳಿ.
2. ನಿಮ್ಮ ಸಂಸ್ಥೆಯ ಎಲ್ಲಾ ಸಿಸ್ಟಂ ಗಳನ್ನೂ ಅಪ್ಡೇಟ್ ಆಗಿಟ್ಟುಕೊಳ್ಳಿ.
3. ಡಿಜಿಟಲ್ ಸಂಪತ್ತನ್ನು ರಕ್ಷಿಸಲು ನಂಬಿಕಸ್ಥ ಹಾಗೂ ತಜ್ಞರನ್ನು ಕಂಪೆನಿಯ ಎಲ್ಲಾ ಸ್ಥಳಗಳಲ್ಲೂ ಇಡಿ.
4. ಅದರಲ್ಲೂ ಡಿಜಿಟಲ್ ಸಂಪತ್ತಿರುವ ಸಿಸ್ಟಂನ್ನು ಅಪ್ಡೇಟ್ ಇಟ್ಟುಕೊಂಡಿರಲೇಬೇಕು. ಆಪರೇಟಿಂಗ್ ಸಿಸ್ಟಂ ಮತ್ತು ಅಪ್ಲಿಕೇಶನ್ ಗಳನ್ನು ಅಪ್ಡೇಟ್ ಇಟ್ಟುಕೊಳ್ಳಬೇಕು.[ರಾನ್ಸಮ್ವೇರ್ ಸೈಬರ್ ದಾಳಿಗೆ ತುತ್ತಾದ ಮೊದಲ ಕನ್ನಡಿಗ ಹಾವೇರಿಯವರು]
ಬ್ಯಾಕ್ ಅಪ್ ಮುಖ್ಯ
5. ಡಿಜಿಟಲ್ ಸಂಪತ್ತು ಏನೇ ಇದ್ದರೂ ಅವುಗಳ ಬ್ಯಾಕ್ ಅಪ್ ತೆಗೆದಿಡಬೇಕು. ಅದರಲ್ಲೂ ಉದ್ಯೋಗಿಗಳ ಬಳಿ ಇದ್ದ ಮಾಹಿತಿಗಳನ್ನೂ ದಿನಂಪ್ರತಿ ಬ್ಯಾಕ್ ಅಪ್ ಇಟ್ಟುಕೊಳ್ಳುವುದು ಒಳ್ಳೆಯದು.
6. ಬ್ಯಾಕ್ ಅಪ್ ಗಳನ್ನು ಸುರಕ್ಷಿತ ಸ್ಥಳದಲ್ಲಿ ಗೌಪ್ಯವಾಗಿ ತೆಗೆದಿಡಬೇಕು.
7. ಬ್ಯಾಂಕ್ ಅಪ್ ಗಳ ಹಂಚಿಕೆ: ಬ್ಯಾಕ್ ಅಪ್ ಗಳನ್ನು ಬೇರೆ ಬೇರೆ ಲೊಕೇಶನ್ ಗಳಲ್ಲಿ ಸಂಗ್ರಹಿಸಿ ಇಡಬೇಕು. ಮತ್ತು ಇದನ್ನು ನಂಬಿಕಸ್ಥರ ಜತೆ ಮಾತ್ರ ಶೇರ್ ಮಾಡಿಕೊಳ್ಳಬೇಕು.
8. ಡಿಜಿಟಲ್ ಅಸೆಟ್ ಗಳ ಅಡ್ಮಿನಿಸ್ಟ್ರೇಟರ್ ಕಂಪೆನಿಯ ಎಲ್ಲ ಉದ್ಯೋಗಿಗಳ ಜತೆ ಸಂಪರ್ಕದಲ್ಲಿದ್ದು ಉದ್ಯೋಗಿಗಳನ್ನು ಆಗಾಗ ತರಬೇತಿಗೊಳಿಸುತ್ತಿರಬೇಕು. ಇದರಲ್ಲಿ ನೆಟ್ವರ್ಕ್ ಗೆ ಸಂಪರ್ಕ ಬೆಸೆಯುವ ಮೊಬೈಲ್ ಗಳಾಗಿರಬಹುದು, ಸೈಬರ್ ದಾಳಿಯನ್ನು ತಡೆಯಲು ಅನುಸರಿಸಬೇಕಾದ ಮಾರ್ಗಗಳ ನಿರ್ದೇಶನವೂ ಸೇರಿರುತ್ತವೆ.
ರಣತಂತ್ರ ರೂಪಿಸಿ
9. ಕಂಪೆನಿಯ ನೆಟ್ವರ್ಕಿಗೆ ಯಾವುದೇ ವೈರಸ್ ದಾಳಿ ನಡೆದರೂ ಅದನ್ನು ತಕ್ಷಣ ಎಲ್ಲಾ ಉದ್ಯೋಗಿಗಳಿಗೂ ಬಲು ಬೇಗ ತಿಳಿಸುವಂತೆ ವ್ಯವಸ್ಥೆ ಇರಬೇಕು. ಇದಕ್ಕಾಗಿ ರಣತಂತ್ರವನ್ನು ಹೆಣೆಯಬೇಕು.
10. ಒಂದೊಮ್ಮೆ ಎಲ್ಲಾ ಭದ್ರತಾ ಮಾರ್ಗಗಳನ್ನು ಅನುಸರಿಸಿಯೂ, ಮಾಹಿತಿಗಳನ್ನು ಗೌಪ್ಯವಾಗಿ ತೆಗೆದಿಟ್ಟರೂ ಹ್ಯಾಕರುಗಳು ದಾಳಿ ನಡೆಸುವ ಸಾಧ್ಯತೆಗಳಿರುತ್ತವೆ. ಈ ಸಂದರ್ಭದಲ್ಲಿ ಹಣ ಕೇಳಿದರೆ ನೀಡದೆ ಸರಕಾರಕ್ಕೆ ಮಾಹಿತಿ ನೀಡಿ ತನಿಖೆಗೆ ಸಹಕರಿಸಬೇಕು.
11. ಐಸಿಇಆರ್ ಟಿ ಜತೆ ನೋಂದಾವಣೆಯಾದ ಅಡಿಟರ್ ಗಳಿಂದ ಭಾರತ ಸರಕಾರದ ಸೈಬರ್ ಸುರಕ್ಷಾ ನೀತಿಯಂತೆ ನಿಮ್ಮೆಲ್ಲಾ ಡಿಜಿಟಲ್ ಸಂಪತ್ತಿನ ಅಡಿಟಿಂಗ್ ನಡೆಸಿ. ಇದರಿಂದ ದಾಳಿಯಾಗುವುದನ್ನು ತಪ್ಪಿಸಬಹುದು.
ಗುಣಮಟ್ಟದ ಸುರಕ್ಷಾ ಮಾರ್ಗಗಳನ್ನು ಅನುಸರಿಸಿ
12. ಐಟಿಇ&ಸಿ ಇಲಾಖೆಯ ಸುರಕ್ಷಾ ತಂಡದ ಜತೆ ಹಾಗೂ ಎನ್ಐಸಿ( ನ್ಯಾಷನಲ್ ಇನ್ಫಾರ್ಮೇಷನ್ ಸೆಂಟರ್) ನ ಸುರಕ್ಷಾ ತಂಡದ ಜತೆ ಕಂಪೆನಿಗಳ ಅಡ್ಮಿನ್ ಗಳು ಸಂಪರ್ಕ ಇಟ್ಟುಕೊಂಡಿರುವುದು ಒಳ್ಳೆಯದು.
13.ಎಲ್ಲಾ ಡಿಜಿಟಲ್ ಉಪಕರಣ ಮತ್ತು ಅಸೆಟ್ ಗಳನ್ನೂನೋಂದಣಿ ಮಾಡಿಕೊಳ್ಳಿ. ಮಾಡಿಕೊಳ್ಳದ ಉಪಕರಣಗಳನ್ನು ಉಪಯೋಗಿಸಬೇಡಿ.
14. ಗುಣಮಟ್ಟದ ಭದ್ರತೆ ಹಾಗೂ ಮಾಹಿತಿಗಳ ಸುರಕ್ಷಾ ನೀತಿಗಳಿಗೆ ಒತ್ತು ನೀಡಿ. ಐಟಿಸಿ&ಸಿ ಹಾಗೂ ಎನ್ಐಸಿ ಸರಕಾರಿ ಅಧಿಕಾರಿಗಳು ಹೇಳಿದ ಸಲಹೆಗಳನ್ನು ಅನುಸರಿಸಿ.
15. ಎಲ್ಲಾ ಉಪಕರಣಗಳು ಹಾಗೂ ಕಂಪ್ಯೂಟರ್ ಗಳು ಇತ್ತೀಚಿನ ಪೈರ್ ವಾಲ್ ಹಾಗೂ ಆ್ಯಂಟಿ ವೈರಸ್ ವ್ಯವಸ್ಥೆಗಳನ್ನು ಹೊಂದಿಯೇ ಎಂಬುದನ್ನು ಪರಿಶೀಲಿಸಿ.
ವೈರಸ್ ದಾಳಿ ನಡೆದರೆ ಹೀಗೆ ಮಾಡಿ
ಒಂದೊಮ್ಮೆ ಇಷ್ಟೆಲ್ಲಾ ನಡೆಸಿಯೂ ವೈರಸ್ ದಾಳಿ ನಡೆಯುವ ಸಾಧ್ಯತೆಗಳಿರುತ್ತವೆ. ಈ ಸಂದರ್ಭದಲ್ಲಿ ಕೆಲವು ಸುರಕ್ಷಾ ಮಾರ್ಗಗಳನ್ನು ಅನುಸರಿಸುವುದು ಶ್ರೇಯಸ್ಕರ.
1. ಮೊದಲು ದಾಳಿಗೆ ಒಳಗಾದ ಕಂಪ್ಯೂಟರ್ ಹಾಗೂ ಸಾಧನವನ್ನು ನೆಟ್ವರ್ಕ್ ನಿಂದ ತೆಗೆದು ಹಾಕಿ. ಇದರಿಂದ ರಾನ್ಸಮ್ವೇರ್ ಎಲ್ಲಾ ವ್ಯವಸ್ಥೆಗಳಿಗೂ ಹರಡುವುದು ತಪ್ಪುತ್ತದೆ.
2. ದಾಳಿ ನಡೆದಿದ್ದನ್ನು ವರದಿ ಮಾಡಿ ಮತ್ತು ಎಲ್ಲಾ ಮಾಹಿತಿಗಳನ್ನು ದೂರಿನಲ್ಲಿ ದಾಖಲಿಸಿ.
3. ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವವರಿಗೆ ಸಹಕರಿಸಿ.
4. ದಾಳಿ ನಡೆದಾಗ ಕಂಪೆನಿ ಕಡೆಯಿಂದ ಯಾರಾದರೂ ಒಬ್ಬರು ಸೂಕ್ತ ಅಧಿಕಾರಿ ಮಾತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿ.
5. ಅಟ್ಯಾಕ್ ನಡೆದಿದ್ದು ಹೇಗೆ ಹಾಗೂ ಡಿಕ್ರಿಪ್ಶನ್ ಕಿಟ್ಸ್ ಹಾಗೂ ಮಿಟಿಗೇಷನ್ ಕಿಟ್ಸ್ ಗಳನ್ನು ನಿರ್ವಹಿಸುವುದು ಒಳ್ಳೆಯದು.
{promotion-urls}