ಕೊರೊನಾ ಪೀಡಿತ ದೇಶದಿಂದ ಬಂದವರಿಗೆ ಭಾರತದಲ್ಲಿ ಹೇಗಿರುತ್ತೆ ಚಿಕಿತ್ಸೆ?
ನವದೆಹಲಿ, ಫೆಬ್ರವರಿ.27: ಕೊರೊನಾ ವೈರಸ್ ಎಂಬ ಸಾವಿನ ಸುಳಿಯಿಂದ ಭಾರತವು ಗುರುವಾರ ಒಟ್ಟು 231 ಜನರನ್ನು ರಕ್ಷಿಸಿ ದೇಶಕ್ಕೆ ವಾಪಸ್ ಕರೆದುಕೊಂಡು ಬಂದಿದೆ. ಚೀನಾದ ವುಹಾನ್ ನಗರದಿಂದ 112 ಮತ್ತು ಜಪಾನ್ ನ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿದ್ದ 119 ಮಂದಿಯನ್ನು ರಕ್ಷಿಸಿ ರಾಷ್ಟ್ರ ರಾಜಧಾನಿಗೆ ಕರೆ ತರಲಾಗಿದೆ.
112 ಪ್ರಯಾಣಿಕರನ್ನು ಹೊತ್ತು ಬಂದ ಸಿ-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ 76 ಮಂದಿ ಭಾರತೀಯರು ಹಾಗೂ 36 ಮಂದಿ ವಿದೇಶಿಗರಿದ್ದರು. ಬೆಳಗ್ಗೆ 6.45ರ ಸುಮಾರಿಗೆ ಬಂದಿಳಿದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಇಂಜಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು.
ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ
ಹಾಂಗ್ ಕಾಂಗ್ ನಿಂದ ಹೊರಟ ಡೈಮೆಂಡ್ ಪ್ರಿನ್ಸಸ್ ಎಂಬ ಹಡಗಿನಲ್ಲಿ 138 ಭಾರತೀಯರು ಸೇರಿದಂತೆ 3,711 ಮಂದಿ ಪ್ರಯಾಣಿಕರಿದ್ದು, ಜಪಾನ್ ನ ಯೊಕೊಹಮಾ ಬಂದರಿನಲ್ಲಿ ಹಡಗನ್ನು ತಡೆ ಹಿಡಿಯಲಾಗಿತ್ತು. ಈ ಹಡಗಿನಲ್ಲಿ 114 ಭಾರತೀಯರು ಸೇರಿದಂತೆ 119 ಮಂದಿಯನ್ನು ಸುರಕ್ಷಿತವಾಗಿ ದೆಹಲಿಗೆ ಕರೆ ತರಲಾಗಿದೆ. ಕೊರೊನಾ ವೈರಸ್ ಪೀಡಿತ ಪ್ರದೇಶದಿಂದ ಆಗಮಿಸಿದ ಜನರನ್ನು ಭಾರತದಲ್ಲಿ ಹೇಗೆ ಸುರಕ್ಷಿತ ಮತ್ತು ಶಿಸ್ತುಬ್ಧವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂಬುದನ್ನು ಈ ವರದಿಯಲ್ಲಿ ಹೇಳಲಾಗಿದೆ.
ದೆಹಲಿ ಏರ್ ಪೋರ್ಟ್ ಎದುರು ವಾಹನ ವ್ಯವಸ್ಥೆ
ಚೀನಾ ಮತ್ತು ಜಪಾನ್ ನಿಂದ ಆಗಮಿಸಿದವರಿಗೆ ದೆಹಲಿ ಏರ್ ಪೋರ್ಟ್ ನಿಂದಲೇ ಸುರಕ್ಷತಾ ಕ್ರಮಗಳ ಬಗ್ಗೆ ಪಾಠ ಶುರುವಾಗುತ್ತದೆ. ವಿದೇಶಗಳಿಂದ ಕರೆತಂದ ಜನರನ್ನು ಕರೆದೊಯ್ಯಲು ಏರ್ ಪೋರ್ಟ್ ಹೊರಗೆ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಲ್ಲಿಂದ ನೇರವಾಗಿ ಎರಡು ಶಿಬಿರಗಳಿಗೆ ಜನರನ್ನು ರವಾನಿಸಲಾಗಿದೆ.
ಭಾರತದಲ್ಲಿ ವೈದ್ಯಕೀಯ ತಪಾಸಣೆಗೆ ಎರಡು ಶಿಬಿರಗಳು ಸಿದ್ಧ
ಕಳೆದ ಬಾರಿಯಂತೆ ಈ ಬಾರಿಯೂ ಕೊರೊನಾ ಪೀಡಿತ ದೇಶಗಳಿಂದ ಆಗಮಿಸಿದ ಜನರಿಗೆ ಸುರಕ್ಷಿತ ರೀತಿಯಲ್ಲಿ ಚಿಕಿತ್ಸೆ ನೀಡಲು ಸುಸಜ್ಜಿತ ಶಿಬಿರಗಳನ್ನು ಸಿದ್ಧಪಡಿಸಲಾಗಿದೆ. ಈ ಶಿಬಿರಗಳಲ್ಲಿ ಊಟ-ಉಪಚಾರದ ಜೊತೆ ವೈದ್ಯಕೀಯ ತಪಾಸಣೆಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕೊರೊನಾ ವೈರಸ್ ನಿಂದ ಗುಣಮುಖರಾಗುವುದು ಹೇಗೆ? ಇಲ್ಲಿದೆ ಉದಾಹರಣೆ
ಚೀನಾದಿಂದ ಬಂದವರಿಗೆ ಐಟಿಬಿಪಿ ದಿಗ್ಬಂಧನ
ಗುರುವಾರ ಚೀನಾದ ವುಹಾನ್ ನಗರದಿಂದ ದೆಹಲಿಗೆ ಕರೆತಂದ 112 ಮಂದಿಯನ್ನು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ದಿಗ್ಬಂಧನದಲ್ಲಿಟ್ಟು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅದಕ್ಕಾಗಿ ದೆಹಲಿಯ ಹೊರವಲಯದಲ್ಲಿ ಇರುವ ಚೌಲ್ವಾ ಪ್ರದೇಶದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. 36 ವಿದೇಶಿಗರು ಸೇರಿದಂತೆ 112 ಮಂದಿಯ ವೈದ್ಯಕೀಯ ತಪಾಸಣೆಯನ್ನು ಅಲ್ಲಿ ಮಾಡಲಾಗುತ್ತದೆ. ಐಟಿಬಿಪಿ ದಿಗ್ಬಂಧನದಲ್ಲಿ ಇರುವ ಜನರ ವೈದ್ಯಕೀಯ ತಪಾಸಣೆಗೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ ತಜ್ಞವೈದ್ಯರ ತಂಡವನ್ನು ರಚನೆ ಮಾಡಲಾಗಿದೆ. ಈ ವೈದ್ಯರ ತಂಡವು ಪ್ರತಿನಿತ್ಯ ಶಿಬಿರದಲ್ಲಿ ಇರುವವರ ಆರೋಗ್ಯದಲ್ಲಿನ ವ್ಯತ್ಯಾಸದ ಬಗ್ಗೆ ಪರೀಕ್ಷಿಸಿ ವರದಿಯನ್ನು ಸಿದ್ಧಪಡಿಸಲಿದೆ.
ಭಾರತೀಯ ಸೇನಾ ದಿಗ್ಬಂಧನದಲ್ಲಿ ಜಪಾನ್ ನಿಂದ ಬಂದವರು
ಜಪಾನ್ ನ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿದ್ದ 119 ಮಂದಿ ಪೈಕಿ 112 ಮಂದಿ ಭಾರತೀಯರು, ಶ್ರೀಲಂಕಾದ ಇಬ್ಬರು, ನೇಪಾಳ, ಪೆರು ಮತ್ತು ದಕ್ಷಿಣ ಆಫ್ರಿಕಾದ ತಲಾ ಒಬ್ಬ ಪ್ರಜೆಯನ್ನು ಕರೆ ತರಲಾಗಿದೆ. ಈ ಪೈಕಿ 119 ಮಂದಿ ಭಾರತೀಯರಲ್ಲಿ 9 ಮಹಿಳೆಯರು ಹಾಗೂ 105 ಪುರುಷರು ಇದ್ದಾರೆ. ಇವರನ್ನೆಲ್ಲ ಹರಿಯಾಣದ ಮನೇಸರ್ ಪ್ರದೇಶದಲ್ಲಿ ಸಿದ್ಧಪಡಿಸಿರುವ ಭಾರತೀಯ ಸೇನಾ ದಿಗ್ಬಂಧನದಲ್ಲಿರುವ ಶಿಬಿರದಲ್ಲಿ ಇರಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
14 ದಿನಗಳ ಕಾಲ ದಿಗ್ಬಂಧನದಲ್ಲಿಟ್ಟು ತಪಾಸಣೆ
ವಿದೇಶದಿಂದ ಕರೆತಂದ ಅಷ್ಟೂ ಜನರನ್ನು ಕನಿಷ್ಠ 14 ದಿನಗಳ ಕಾಲ ದಿಗ್ಬಂಧನದಲ್ಲಿ ಇರಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಪ್ರತಿಯೊಬ್ಬ ಆರೋಗ್ಯದಲ್ಲಿ ಆಗುವ ಬದಲಾವಣೆಗಳ ಮೇಲೆ ವೈದ್ಯರ ತಂಡವು ನಿಗಾ ವಹಿಸಲಿದೆ. ಮೊದಲು ಶಿಬಿರದಲ್ಲಿ ಇರುವ ಎಲ್ಲರ ರಕ್ತದ ಮಾದರಿಯನ್ನು ಏಮ್ಸ್ ನ ಸೂಕ್ಷ್ಮ ರೋಗಾಣು ಪತ್ತೆ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅದಾಗಿ 14 ದಿನಗಳ ನಂತರದಲ್ಲಿ ಎರಡು ಬಾರಿ ವೈದ್ಯಕೀಯ ಪರೀಕ್ಷೆ ಮತ್ತು ರಕ್ತದ ಮಾದರಿ ಪರೀಕ್ಷೆ ಬಳಿಕ ಸೋಂಕು ಪತ್ತೆಯಾಗದಿದ್ದಲ್ಲಿ ಮಾತ್ರ ಅಂಥವರನ್ನು ಬಿಡುಗಡೆ ಮಾಡಲಾಗುತ್ತದೆ.
ತಪಾಸಣೆ ವೇಳೆ ಸೋಂಕು ಪತ್ತೆಯಾದರೆ ಬಿಹೆಚ್ ಡಿಸಿಗೆ ಶಿಫ್ಟ್
ಇನ್ನು, ವೈದ್ಯಕೀಯ ತಪಾಸಣೆ ವೇಳೆ ರಕ್ತದ ಮಾದರಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ ಇರುವುದು ಪತ್ತೆಯಾದರೆ, ಅಂಥವರನ್ನು ತಕ್ಷಣಕ್ಕೆ ದೆಹಲಿ ಕಂಟೋನ್ ಮೆಂಟ್ ನ ಬೇಸ್ ಆಸ್ಪತ್ರೆಯಲ್ಲಿ ಸಿದ್ಧಪಡಿಸಿರುವ ತುರ್ತು ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗುತ್ತದೆ. ಆ ತುರ್ತು ನಿಗಾ ಘಟಕದಲ್ಲಿ ಇರಿಸಿ, ಸೋಂಕಿತರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ.
ದಿಗ್ಬಂಧನದಲ್ಲಿ ಇದ್ದವರಿಗೂ ಇದು ವ್ಯವಸ್ಥಿತ ಕೇಂದ್ರ
ಐಟಿಬಿಪಿ ಮತ್ತು ಭಾರತೀಯ ಸೇನಾ ದಿಗ್ಬಂಧನದಲ್ಲಿ ಇರಿಸಿದರೂ ಶಿಬಿರದಲ್ಲಿ ಇರುವವರಿಗೆ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ವ್ಯವಸ್ಥಿತ ಊಟ-ಉಪಚಾರದ ಜೊತೆಗೆ ಮನರಂಜನೆಗೆ ಅನುಕೂಲವಾಗುವ ಟಿವಿ, ಉಚಿತ ವೈಫೈ ಸೇವೆ ಮತ್ತು ವಿವಿಧ ಆಟಿಕೆಗಳನ್ನು ಇರಿಸಲಾಗಿದೆ.
ಒಬ್ಬರು ಇನ್ನೊಬ್ಬರ ಜೊತೆಗೆ ಮಾತನಾಡುವಂತಿಲ್ಲ
ಎರಡೂ ಶಿಬಿರದಲ್ಲಿ ಇರುವ ಜನರಿಗೆ ಅನುಕೂಲವಾಗುವಂತಾ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಶಿಬಿರದಲ್ಲಿಯೇ ವೈದ್ಯಕೀಯ ತಪಾಸಣೆಗೆ ಸಹಾಯವಾಗುವಂತೆ ಜನರನ್ನು ವಿವಿಧ ತಂಡಗಳಾಗಿ ವಿಂಗಡನೆ ಮಾಡಲಾಗಿದೆ. ಪರಸ್ಪರ ಎಲ್ಲ ತಂಡದವರು ಜೊತೆಗೆ ಕುಳಿತು ಆಟಗಳನ್ನು ಆಡಬಹುದು, ಟಿವಿ ನೋಡಬಹುದು, ಆದರೆ, ಇಲ್ಲಿ ಒಬ್ಬರು, ಮತ್ತೊಬ್ಬರನ್ನು ಪರಸ್ಪರ ಮಾತನಾಡುವಂತಿಲ್ಲ.
ಫೆಬ್ರವರಿ ಮೊದಲ ವಾರ 650 ಮಂದಿ ಭಾರತಕ್ಕೆ
ಇದಕ್ಕೂ ಮೊದಲು ಫೆಬ್ರವರಿ.01 ಮತ್ತು 02ರಂದು ಎರಡು ಏರ್ ಇಂಡಿಯಾ ವಿಮಾನಗಳಲ್ಲಿ ಚೀನಾದಿಂದ 650 ಮಂದಿಯನ್ನನು ರಕ್ಷಿಸಿ ಭಾರತಕ್ಕೆ ಕರೆ ತರಲಾಗಿತ್ತು. ಐಟಿಬಿಪಿ ದಿಗ್ಬಂಧನಲ್ಲಿದ್ದ 406 ಮಂದಿಯನ್ನು ನಿರಂತರ 17 ದಿನಗಳ ಕಾಲ ವೈದ್ಯಕೀಯ ತಪಾಸಣೆ ಬಳಿಕ ಸೋಂಕು ಪತ್ತೆಯಾಗದನ್ನು ಸ್ಪಷ್ಟಪಡಿಸಿಕೊಂಡು ಎರಡು ಹಂತಗಳಲ್ಲಿ 200 ಮಂದಿಯ ತಂಡವನ್ನು ದಿಗ್ಬಂಧನದಿಂದ ಬಿಡುಗಡೆ ಮಾಡಲಾಯಿತು. ಇನ್ನು, ಹರಿಯಾಣದ ಭಾರತೀಯ ಸೇನಾ ದಿಗ್ಬಂಧನದಲ್ಲಿದ್ದ 244 ಮಂದಿಯನ್ನು 14 ದಿನಗಳ ಕಾಲ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಕೊರೊನಾ ವೈರಸ್ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು.