ಕನ್ನಡ ನಾಡಿನಲ್ಲಿ ಬದಲಾಗುತ್ತಿರುವ ಟೇಸ್ಟ್ ಬಡ್ಸ್!
ಏನಿದು ಮೊದಲ ಬರಹದಲ್ಲೇ ನೇರವಾಗಿ ಊಟ/ತಿಂಡಿ ವಿಚಾರ ಬರೆಯುತ್ತಿದ್ದಾಳಲ್ಲ ಅಂತ ಅನಿಸಬಹುದು. ಎಲ್ಲರಿಗೂ ಸಾಮಾನ್ಯವಾಗಿ ಊಟ/ತಿಂಡಿ ಅಂದರೆ ಮೂಗರಳುತ್ತದೆ, ಒಂದಲ್ಲಾ ಒಂದು ತರಹದ ತಿನಿಸು ಇಷ್ಟವಾಗುತ್ತದೆ.
ನಾನು ಇವತ್ತು ಈ ಲೇಖನ ಬರೆಯಲು ಕಾರಣ - 1. ಕೊಟ್ಟೆ ಕಡುಬಿನ(ಇಡ್ಲಿ ಹಿಟ್ಟನ್ನು ಎಲೆಯಲ್ಲಿ ಬೇಯಿಸುವುದು) ಮೇಲಿನ ಪ್ರೀತಿ... 2. ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ನಮ್ಮ ದೇಶೀಯ ತಿಂಡಿಗಳು ಕಡಿಮೆ ಆಗುತ್ತಿರುವುದು.
ಇಂದಿರಾ ಕ್ಯಾಂಟೀನ್ ನ ಮೆನು, ದರ ಮತ್ತಿತರ ಮಾಹಿತಿ
ಸಾಮಾನ್ಯವಾಗಿ ಕರಾವಳಿ ಮತ್ತು ಉತ್ತರ ಕನ್ನಡ ಭಾಗದ ಜನರಿಗೆ ಕೊಟ್ಟೆ ಕಡಬು ಚಿರ ಪರಿಚಿತ. ನಾವು ಕರಾವಳಿ ಭಾಗದವರಾಗಿದ್ದರಿಂದ ಹಾಗೂ ಮನೆ ಹತ್ತಿರ ಹಲಸಿನ ಎಲೆ ಸಿಗುತ್ತಿದ್ದರಿಂದ, ನಾವು ಉತ್ತರ ಕರ್ನಾಟಕದಲ್ಲಿ ಬೆಳೆದರೂ ನಮ್ಮ ಮನೆಯಲ್ಲಿ ನಾವು ಬಯಸಿದ್ದಾಗೆಲ್ಲ ಕೊಟ್ಟೆ ಕಡುಬು ತಯಾರಾಗುತ್ತಿತ್ತು.
ನಾನು ಇವತ್ತು ಜರ್ಮನಿಯಲ್ಲೂ ಮೃದುವಾದ ಇಡ್ಲಿ ಮಾಡಲು ನನ್ನ ದೊಡ್ಡಮ್ಮ ಪ್ರೇರಣೆ(ಅವರಿಗೆ ಅವರ ದೊಡ್ಡಮ್ಮ ಪ್ರೇರಣೆ ಅಂತೆ). ನನ್ನ ದೊಡ್ಡಮ್ಮ ಮಾಡುವಂತಹ ಕೊಟ್ಟೆ ಕಡಬು ಮಲ್ಲಿಗೆಗಿಂತ ಮೃದು. ಆ ಕಡುಬಿನಲ್ಲಿ ಸಣ್ಣ ಹೊಂಡ (ತೂತು) ಮಾಡಿ, ಅದರೊಳಗೆ ತುಪ್ಪ ಸುರಿದುಕೊಂಡು ಅಥವಾ ಕಡುಬಿನ ಮೇಲೆ ಒಂದು ರಾಶಿ ಬೆಣ್ಣೆ ಹಾಕಿಕೊಂಡು, ತೆಂಗಿನಕಾಯಿ ಚಟ್ನಿ ಜೊತೆ ತಿನ್ನುವ ಮಜಾನೇ ಬೇರೆ.
ಕೊಟ್ಟೆ ಕಡುಬಿನ ಬಗ್ಗೆ ಮಾತನಾಡುವಾಗ 2 ವಿಷಯಗಳು ನೆನಪಿಗೆ ಬರುತ್ತವೆ.
1. ಗೋಕರ್ಣದಲ್ಲಿ ಮಹಾಗಣಪತಿ ದೇವರಿಗೆ ಮಾಡೋ ಕೊಟ್ಟೆ ಕಣಜ. ಸುಮಾರು 5000 ಕೊಟ್ಟೆ ಕಡುಬನ್ನು ಮಾಡಿ, ಗಣಪತಿಯ ಸುತ್ತ ಅದನ್ನು ಹಾಕುತ್ತಾರೆ. ಆ ದೃಶ್ಯ ನೋಡಲು ಅದ್ಭುತ.
2. ಕುಂಭಾಶಿ(ಆನೆಗುಡ್ಡೆ)ಯಲ್ಲಿ, ಗಣಪತಿಗೆ ಮೂಡಕದ ಎಲೆಯಲ್ಲಿ ಕಡುಬು ಮಾಡಿ ನೈವೇದ್ಯ ಮಾಡಲಾಗುತ್ತದೆ. ಗಣಪತಿ ದೇವನಿಗೂ, ಕೊಟ್ಟೆ ಕಡುಬಿಗೂ ಬಿಡಿಸಲಾರದ ನಂಟು.
ಹೋಟಲ್ನಲ್ಲಿ ಕೊಟ್ಟೆ ಕಡುಬು ತಿನ್ನಬೇಕನಿಸಿದರೆ, ಬೆಂಗಳೂರಿನ ಮಲ್ಲೇಶ್ವರಂನ ನ್ಯೂ ಕೃಷ್ಣ ಭವನದಲ್ಲಿ ರುಚಿಕರವಾಗಿರುತ್ತದೆ.
ಎಂಟಿಆರ್ ಎಂಬ ಬೆಂಗಳೂರಿನ ತಿಂಡಿಪೋತರ ಸ್ವರ್ಗ
ನಾನು ಈ ಲೇಖನ ಬರೆಯಲು ಮತ್ತೊಂದು ಕಾರಣ- ನಮ್ಮಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು, ಅವಲಕ್ಕಿ, ಮಂಡಕ್ಕಿ ಸೂಸ್ಲಾ ತರಹದ ರುಚಿಕರವಾದ, ಆರೋಗ್ಯಕರವಾದ ದೇಶೀಯ ಆಹಾರಗಳಿದ್ದರೂ ನಮ್ಮ ಜನರ ಮನೆಗಳಲ್ಲಿ ಈ ತರಹದ ಆಹಾರಗಳು ಮಾಯವಾಗಿ ಕಾರ್ನ್ಫ್ಲೇಕ್ಸ್ ಡಬ್ಬಗಳು ಬಂದಿರುವುದು.
ಇತ್ತೀಚಿಗೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಒಂದು ಲೇಖನ ಬಂದಿತ್ತು. "Breakfast was the most important meal of the day-until America ruined it". ಕಾರ್ನ್ಫ್ಲೇಕ್ಸ್ ಬಂದ ಮೇಲೆ ಅಲ್ಲಿನ ಜನರು ಬೇರೆ ತಿಂಡಿಗಳನ್ನು ಮಾಡುವುದನ್ನು ಬಿಟ್ಟಿದಾರೆಂದು ಅದರಲ್ಲಿ ಬರೆಯಲಾಗಿತ್ತು.
ಬೆಳಗ್ಗಿನ ತಿಂಡಿಯಲ್ಲಿ ಅಗ್ರಸ್ಥಾನ ಪಡೆಯಿತು 'ದೋಸೆ'
ಭಾರತದಲ್ಲಿ ನಮ್ಮ ಜನರ ಟೇಸ್ಟ್ಬಡ್ಸ್ ನಿಜವಾಗಲೂ ಬದಲಾಗುತ್ತಿದೆಯೋ ಅಥವಾ ಫೇಸ್ಬುಕ್ನಲ್ಲಿ ಫೋಟೋ ಹಾಕುವ ಸಲುವಾಗಿ ಬದಲಾಗುತ್ತಿದೆಯೋ ಗೊತ್ತಿಲ್ಲ. ಪಿಜ್ಜಾ, ಪಾಸ್ತಾ ತಿಂದರೆ ಮಾತ್ರ "ಕೂಲ್" ಅನ್ನುವ ಹಾಗೆ ಆಗಿದೆಯೊ ಗೊತ್ತಿಲ್ಲ. ಏನೇ ಆಗಲಿ ಬದಲಾವಣೆ ಜಗತ್ತಿನ ನಿಯಮ.
ಈಗ ನಮ್ಮ ಭಾರತದಲ್ಲಿ ಬೇಕಾದಷ್ಟು ಅಡುಗೆ ಉಪಕರಣಗಳು ಲಭ್ಯವಿದ್ದರೂ, ಮನೆಯಲ್ಲಿ ಅಡುಗೆ ಮಾಡುವುದು ಕಡಿಮೆ ಆಗಿದೆ. ಹಲಸಿನ ಕಡುಬು, ಪತ್ರೊಡೆ, ಉಂಡಲಕಾಯಿ ಎಲ್ಲ ನೇಪಥ್ಯಕ್ಕೆ ಸರಿದಿವೆ. ಮುಂದಿನ ಪೀಳಿಗೆಗೆ ಇವೆಲ್ಲ ತಿನಿಸುಗಳನ್ನು ಚಿತ್ರದಲ್ಲಿ ತೋರಿಸಬೇಕಾಗಿ ಬರಬಹುದು. ಅ-ಅವಲಕ್ಕಿ, ಆ-ಆಲೆಪಾಕ, ಇ-ಇಡ್ಲಿ, ಉ-ಉಸಳಿ ಎಂದು ಚಿತ್ರಗಳು ಮಗ್ಗಿ ಪುಸ್ತಕದಲ್ಲಿ ಬರಬಹುದು.
ಜರ್ಮನಿಯಂತಹ ಶೀತ ವಾತಾವರಣದ ದೇಶದಲ್ಲೂ ನಾವು ದೋಸೆ, ಇಡ್ಲಿ ಮಾಡುತ್ತೇವೆ. ಹಿಟ್ಟನ್ನು ಅರೆದು ಮೈಕ್ರೋವೇವ್ ಓವನ್ ಅಲ್ಲಿ ಇಟ್ಟು(ಸ್ವಿಚ್ ಆನ್ ಮಾಡದೆ) ಹುಳಿ ಬರಿಸುತ್ತೇವೆ. ಯಾರು ಈ ಉಪಾಯವನ್ನು ಕಂಡು ಹಿಡಿದರೋ ಗೊತ್ತಿಲ್ಲ, ಆದರೆ ಪ್ರತಿ ನಿತ್ಯ ದೋಸೆ/ಇಡ್ಲಿ ತಿನ್ನುವಂತಹ ನಮ್ಮ ತರಹದವರಿಗೆ ಸಹಾಯವಾಗಿದೆ.
ಊಟ ಅವರವರ ಇಚ್ಛೆ. ಹೊಸ ರುಚಿಗಳನ್ನು ತಿನ್ನುವುದು ತಪ್ಪೆಂದಲ್ಲ, ಆದರೂ ನಮ್ಮ ಸಾಂಪ್ರದಾಯಿಕ ತಿನಿಸುಗಳನ್ನು ಉಳಿಸುವಲ್ಲಿ ನನ್ನದೊಂದು ಸಣ್ಣ ಪ್ರಯತ್ನ.