ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ಪ್ರಧಾನಿ ಮೋದಿ ಆರೋಗ್ಯ ಹೇಗಿದೆ?
ನವದೆಹಲಿ, ಮಾರ್ಚ್ 1: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕೋವಿಡ್-19 ಲಸಿಕೆ ಪಡೆದುಕೊಳ್ಳುವ ಮೂಲಕ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಜನರಿಗೆ ಪ್ರೇರಣೆ ನೀಡಲು ಪ್ರಯತ್ನಿಸಿದ್ದಾರೆ. 60 ವರ್ಷ ಮೇಲಿನ ವಯಸ್ಕರಿಗೆ ಕೊರೊನಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮ ಮಾರ್ಚ್ 1ರಿಂದ ಆರಂಭವಾಗುತ್ತಿದ್ದು, ಸ್ವತಃ ಲಸಿಕೆ ಪಡೆದುಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಧೈರ್ಯ ತುಂಬಲು ಮುಂದಾಗಿದ್ದಾರೆ.
ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್) ಸೋಮವಾರ ಬೆಳಿಗ್ಗೆ ತೆರಳಿದ ಪ್ರಧಾನಿ ಮೋದಿ, ಹೈದರಾಬಾದ್ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಸಂಪೂರ್ಣ ಸ್ವದೇಶಿ 'ಕೋವ್ಯಾಕ್ಸಿನ್' ಲಸಿಕೆ ಪಡೆದುಕೊಂಡರು. ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ದತ್ತಾಂಶಗಳು ಸಂಪೂರ್ಣ ಲಭ್ಯವಾಗುವ ಮುನ್ನವೇ ಅದರ ತುರ್ತು ಬಳಕೆಗೆ ಅನುಮತಿ ನೀಡಿದ್ದು ವಿವಾದ ಸೃಷ್ಟಿಸಿತ್ತು.
ಕೊರೊನಾ ಲಸಿಕೆ ಪಡೆದ ಬಳಿಕ ನರ್ಸ್ ನಿವೇದಿತಾಗೆ ಪ್ರಧಾನಿ ಮೋದಿ ಹೇಳಿದ್ದೇನು?
ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ಜ್ವರ, ತಲೆನೋವು, ಆಯಾಸ, ಮೈ ಕೈ ನೋವಿನಂತಹ ಸಮಸ್ಯೆಗಳು ಕಂಡುಬಂದಿದ್ದವು. ಕೆಲವರು ಮೊದಲ ಲಸಿಕೆ ಪಡೆದುಕೊಂಡು ಎರಡನೆಯ ಲಸಿಕೆ ಪಡೆಯುವ ಮುನ್ನವೇ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಇನ್ನು ಲಸಿಕೆ ಪಡೆದುಕೊಂಡವರು ಮೃತಪಟ್ಟ ಘಟನೆಯೂ ಆತಂಕ ಮೂಡಿಸಿತ್ತು. ಆದರೆ ಜನರ ಸಾವಿಗೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ಅವರು ಇತರೆ ಅನಾರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯದ ಬಗ್ಗೆ ಕುತೂಹಲ ಮೂಡಿದೆ.
ವಿಶ್ರಾಂತಿ ಪಡೆಯದ ಮೋದಿ
ಲಸಿಕೆ ತೆಗೆದುಕೊಂಡ ಅನೇಕರು ನೋವು ಹಾಗೂ ಆಯಾಸಕ್ಕೆ ಒಳಗಾಗಿದ್ದಾರೆ. ಲಸಿಕೆಯ ನೋವಿನಿಂದ ಚೇತರಿಸಿಕೊಳ್ಳಲು ಕೆಲವರಿಗೆ ದಿನಗಳೇ ಬೇಕಾಗಿವೆ. ನಿರಂತರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೂ ಲಸಿಕೆ ಪಡೆದುಕೊಂಡ ಬಳಿಕ ವಿಶ್ರಾಂತಿ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಲಸಿಕೆ ನೀಡಿದ್ದೇ ಗೊತ್ತಾಗಲಿಲ್ಲ!
ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯು ನರೇಂದ್ರ ಮೋದಿ ಅವರ ಆರೋಗ್ಯದ ಮೇಲೆ ಅಂತಹ ಪರಿಣಾಮ ಉಂಟುಮಾಡಿಲ್ಲ. ಲಸಿಕೆ ಪಡೆದುಕೊಂಡ ನಂತರ 'ಅದು ಆಗಲೇ ಮುಗಿದು ಹೋಯಿತೇ? ನನಗೆ ಗೊತ್ತೇ ಆಗಲಿಲ್ಲ' ಎಂದು ಪ್ರಧಾನಿ ಹೇಳಿದ್ದಾಗಿ ಲಸಿಕೆ ನೀಡಿದ ನರ್ಸ್ ನಿವೇದಾ ಹೇಳಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ಮೋದಿ
ವೆಬಿನಾರ್ನಲ್ಲಿ ಮೋದಿ ಭಾಷಣ
ಕೋವಿಡ್ ಲಸಿಕೆ ಪಡೆದುಕೊಂಡ ನಂತರ ಪ್ರಧಾನಿ ತಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ಬಾರಿಯ ಬಜೆಟ್ನಲ್ಲಿ ಕೃಷಿ ವಲಯಕ್ಕೆ ನೀಡಿದ ಕೊಡುಗೆಯ ಕುರಿತಾದ ವೆಬಿನಾರ್ನಲ್ಲಿ ಅವರು ಮಾತನಾಡಿದರು. ಸುಮಾರು ಅರ್ಧ ಗಂಟೆಯವರೆಗೆ ಅವರು ಈ ವಿಚಾರವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡರು.
ಲಸಿಕೆ ಪಡೆಯಲು ಮೋದಿ ಕರೆ
ತಾವು ಲಸಿಕೆ ಪಡೆದುಕೊಂಡ ಸಂಗತಿಯನ್ನು ಹಂಚಿಕೊಂಡಿರುವ ಪ್ರಧಾನಿ, ಕೋವಿಡ್ 19ರ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಅಲ್ಪಾವಧಿಯಲ್ಲಿ ನಮ್ಮ ವೈದ್ಯರು ಮತ್ತು ವಿಜ್ಞಾನಗಳು ಗಮನಾರ್ಹ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು. ಹಾಗೆಯೇ ಎಲ್ಲ ಅರ್ಹರೂ ಲಸಿಕೆ ಪಡೆದುಕೊಳ್ಳುವ ಮೂಲಕ ಭಾರತವನ್ನು ಕೊರೊನಾ ಮುಕ್ತವಾಗಿಸೋಣ ಎಂದು ಕರೆ ನೀಡಿದರು.
ಸಂಸದರು, ಸಚಿವರಿಗೆ ಸೂಚನೆ
ಜನರಲ್ಲಿ ಕೋವಿಡ್ ಲಸಿಕೆಯ ಕುರಿತು ಭರವಸೆ ಮೂಡಿಸುವ ಸಲುವಾಗಿ ತನ್ನ ಎಲ್ಲ ಸಂಸದರು ಮತ್ತು ಸಚಿವರು ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಬಿಜೆಪಿ ಸೂಚನೆ ನೀಡಿದೆ. ಹಾಗೆಯೇ ಸರ್ಕಾರದಿಂದ ಉಚಿತವಾಗಿ ನೀಡುವ ಲಸಿಕೆಯ ಬದಲು, ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳುವಂತೆಯೂ ನಿರ್ದೇಶಿಸಿದೆ.