ಭಾರತದ ಗಡಿಯನ್ನು ಚೀನಾಗೆ ಬಿಟ್ಟುಕೊಟ್ಟರೇ ಪ್ರಧಾನಿ ಮೋದಿ!?
ನವದೆಹಲಿ, ಸೆಪ್ಟೆಂಬರ್ 14: ಯಾವುದೇ ಗುದ್ದಾಟ-ಬಡಿದಾಟ ಹೋರಾಟಗಳಿಲ್ಲದೇ ಭಾರತದ 1000 ಸ್ಕ್ವೇರ್ ಕಿಲೋ ಮೀಟರ್ ಪ್ರದೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಚೀನಾಗೆ ಬಿಟ್ಟು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ದೂಷಿಸಿದ್ದಾರೆ.
ಚೀನಾ ಕಬಳಿಸಿಕೊಂಡಿರುವ ಭಾರತದ ಆ ಪ್ರದೇಶವನ್ನು ನೀವು ಹೇಗೆ ವಾಪಸ್ ಪಡೆದುಕೊಳ್ಳುತ್ತೀರಿ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಕಳೆದ 2020 ಏಪ್ರಿಲ್ ರೀತಿಯಲ್ಲಿ ಗಡಿಯನ್ನು ಯಥಾಸ್ಥಿತಿಗೆ ಮರುಸ್ಥಾಪಿಸುವ ಭಾರತದ ಬೇಡಿಕೆಯನ್ನು ಚೀನಾ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಪೂರ್ವ ಲಡಾಖ್ನ ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿನ ಗಸ್ತು ಪಾಯಿಂಟ್ 15ರಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಸಂಧಾನ ಸಭೆಯ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಉಭಯ ಸೇನೆಗಳ ಘರ್ಷಣೆಯ ಸ್ಥಳದಲ್ಲಿ ಚೀನಾದಿಂದ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಚೀನಾಗೆ ಭೂಮಿ ಬಿಟ್ಟುಕೊಟ್ಟರೇ ಪ್ರಧಾನಿ ಮೋದಿ
ಭಾರತ ಮತ್ತು ಚೀನಾದ ಗಡಿಯಲ್ಲಿ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರಣಿ ಸಭೆಯನ್ನು ನಡೆಸಲಾಗುತ್ತದೆ. ಅದೇ ರೀತಿ ಇತ್ತೀಚಿಗೆ ನಡೆದ ಸಭೆಯಲ್ಲಿ ಭಾರತವು ಇಟ್ಟಿರುವ ಬೇಡಿಕೆಯನ್ನು ಚೀನಾ ಸೇನೆಯು ಸ್ಪಷ್ಟವಾಗಿ ನಿರಾಕರಿಸಿದೆ. ಅಲ್ಲಿಗೆ ಯಾವುದೇ ಹೋರಾಟವಿಲ್ಲದೇ ಭಾರತದ ಗಡಿ ಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಂತೆ ಆಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಭಾರತದ 1000 ಸ್ಕೇರ್ ಕಿ.ಮೀ ಪ್ರದೇಶದಲ್ಲಿ ಚೀನಾ ಪ್ರಾಬಲ್ಯ
"ಲಡಾಖ್ ಗಡಿಗೆ ಹೊಂದಿಕೊಂಡಿರುವ ಪ್ರದೇಶವನ್ನು ಚೀನಾ ಸದ್ದಿಲ್ಲದೇ ಆಕ್ರಮಿಸಿಕೊಳ್ಳುತ್ತಿದೆ. 2020 ಏಪ್ರಿಲ್ ತಿಂಗಳ ರೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕೆ ಚೀನಾ ನಿರಾಕರಿಸಿದೆ. ಇತ್ತೀಚಿಗೆ ನಡೆದ ಸೇನಾ ಸಭೆಯಲ್ಲಿ ಭಾರತದ ಬೇಡಿಕೆಯನ್ನು ಚೀನಾ ತಳ್ಳಿ ಹಾಕಿದೆ. ಇದರಿಂದ ಯಾವುದೇ ಹೋರಾಟಗಳಿಲ್ಲದೇ ಭಾರತದ 1000 ಸ್ಕ್ವೇರ್ ಕಿಲೋ ಮೀಟರ್ ಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಂತೆ ಆಗಿದೆ," ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
ಭಾರತದ ಆ ಪ್ರದೇಶವನ್ನು ಹೇಗೆ ವಾಪಸ್ ಪಡೆಯುವಿರಿ ಎಂದ ರಾಹುಲ್
ಯಥಾಸ್ಥಿತಿ ಕಾಯ್ದುಕೊಳ್ಳಲು ನಿರಾಕರಿಸಿದ ಚೀನಾದಿಂದ ಭಾರತವು ಕಳೆದುಕೊಂಡಿರುವ ಪ್ರದೇಶವನ್ನು ಕೇಂದ್ರ ಸರ್ಕಾರವು ಹೇಗೆ ವಾಪಸ್ ಪಡೆದುಕೊಳ್ಳುತ್ತದೆ. ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳುವ ವಿಧಾನ ಹೇಗಿದೆ ಎಂಬುದನ್ನು ವಿವರಿಸಿ ಹೇಳುವಿರಾ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. 2020 ಮೇ 5ರಂದು ಪ್ಯಾಂಗಾಂಗ್ ತ್ಸೋ ಕೆರೆ ಬಳಿ ಭಾರತ ಮತ್ತು ಚೀನಾದ ಸೇನೆಗಳ ಮಧ್ಯೆ ಸಂಘರ್ಷ ನಡೆಯಿತು. ಎರಡೂ ಕಡೆಗಳಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತ 10,000ಕ್ಕೂ ಹೆಚ್ಚು ಯೋಧರು ಗಡಿಭಾಗಕ್ಕೆ ಬಂದು ನಿಂತರು.
ಈ ಬೆಳವಣಿಗೆ ಬೆನ್ನಲ್ಲೇ ಚೀನಾ ಮತ್ತು ಭಾರತದ ನಡುವೆ ಸರಣಿ ಸಂಧಾನ ಸಭೆಗಳು ನಡೆದವು. 2021ರಲ್ಲಿ ಗೋಗ್ರಾ ಪ್ರದೇಶದ ಪ್ಯಾಂಗಾಂಗ್ ತ್ಸೋ ಲೇಕ್ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸುವುದಕ್ಕೆ ಉಭಯ ಸೇನೆಗಳು ಒಪ್ಪಿಕೊಂಡವು.
ಚೀನಾ-ಭಾರತ ನಡುವಿನ ವಿವಾದದ ಹಿನ್ನೆಲೆ ಏನು?
ಭಾರತ ಮತ್ತು ಚೀನಾ ಗಡಿಯ ಪ್ಯಾಂಗಾಂಗ್ ತ್ಸೋ, ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಈ ಹಿಂದೆ 2,500 ಯೋಧರು ಶಸ್ತ್ರಸಜ್ಜಿತರಾಗಿ ನಿಂತಿದ್ದರು. ಪ್ಯಾಂಗಾಂಗ್ ತ್ಸೋ ಸುತ್ತಮುತ್ತಲು 180 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮೂಲಸೌಕರ್ಯಗಳ ಕಾಮಗಾರಿ ಚಟುವಟಿಕೆ ನಡೆಸುತ್ತಿರುವುದು ಉಪಗ್ರಹ ಸೆರೆ ಹಿಡಿದ ಫೋಟೋಗಳಲ್ಲಿ ಸಾಬೀತಾಗಿತ್ತು. ಇದಕ್ಕೂ ಮೊದಲು ದರ್ಬಕ್-ಶಯೊಕ್ ನಿಂದ ದೌಲತ್ ಬೆಗ್ ಒಲ್ಡಿಯೆಗೆ ಗಾಲ್ವಾನ್ ವ್ಯಾಲಿಯಲ್ಲಿ ರಸ್ತೆ ನಿರ್ಮಿಸುವುದಕ್ಕೆ ಭಾರತವು ಮುಂದಾಗಿತ್ತು. ಪ್ಯಾಂಗಾಂಗ್ ತ್ಸೋ ತುದಿಯಲ್ಲಿರುವ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಚೀನಾ ವಿರೋಧಿಸಿತ್ತು. ಪ್ಯಾಂಗಾಂಗ್ ತ್ಸೋ ಪ್ರದೇಶ ತೀರಾ ಮಹತ್ವವಾಗಿದೆ ಎಂದು ಭಾರತ ಕೂಡಾ ಪರಿಗಣಿಸಿತ್ತು. ಆದರೆ ಚೀನಾ ವಿರೋಧದ ಹಿನ್ನೆಲೆ ಗಡಿಯಲ್ಲಿ ಯಾವುದೇ ರೀತಿ ಸೇನೆ ನಿಯೋಜಿಸದಿರಲು ಭಾರತವು ತೀರ್ಮಾನಿಸಿತು.