ಕೊರೊನಾ ಮುಂದಿನ ಅಲೆ ನಿರ್ವಹಣೆಗೆ ತುರ್ತಾಗಿ ಏನು ಮಾಡಬೇಕು: ತಜ್ಞರ 8 ಶಿಫಾರಸ್ಸು
ನವದೆಹಲಿ, ಜೂನ್ 18: ಕೊರೊನಾ ಎರಡನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಕ್ರಮೇಣ ತಗ್ಗುತ್ತಿದೆ. ಇದೀಗ ಮೂರನೇ ಅಲೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದು, ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕೊರೊನಾ ಪ್ರಕರಣಗಳ ನಿಯಂತ್ರಣಕ್ಕೆ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಆರೋಗ್ಯ ಸೌಲಭ್ಯಗಳನ್ನು ಹೇಗೆ ಪರಿಷ್ಕರಣೆಗೊಳಿಸಬೇಕು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.
ಬಯೋಕಾನ್ನ ಕಿರಣ್ ಮಜುಂದಾರ್ ಹಾಗೂ ಸರ್ಜನ್ ಡಾ. ದೇವಿ ಶೆಟ್ಟಿ ಅವರನ್ನೊಳಗೊಂಡ 21 ತಜ್ಞರು ಎಂಟು ಶಿಫಾರಸ್ಸುಗಳನ್ನು ಮಾಡಿದ್ದಾರೆ. ಲ್ಯಾನ್ಸೆಟ್ ವೈದ್ಯಕೀಯ ನಿಯತಕಾಲಿಕೆ ಜೂನ್ 12ರ ಸಂಚಿಕೆಯಲ್ಲಿ ಕೊರೊನಾ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ ಮಾಡಬೇಕಾದ ಕಾರ್ಯಗಳ ಕುರಿತು ಶಿಫಾರಸ್ಸುಗಳನ್ನು ಪ್ರಸ್ತಾಪಿಸಲಾಗಿದೆ. ಆ ಶಿಫಾರಸ್ಸುಗಳು ಏನು? ವಿವರ ಇಲ್ಲಿದೆ...
ಅಗತ್ಯ ಆರೋಗ್ಯ ಸೇವೆಗಳ ವಿಕೇಂದ್ರೀಕರಣ
ದೇಶದಲ್ಲಿ ಅಗತ್ಯ ಆರೋಗ್ಯ ಸೇವೆಗಳನ್ನು ವಿಕೇಂದ್ರೀಕರಿಸಬೇಕು. ಕೊರೊನಾ ಪ್ರಕರಣಗಳು ಹಾಗೂ ಆರೋಗ್ಯ ಸೇವೆಗಳ ಸಂಖ್ಯೆಯು ಜಿಲ್ಲೆಯಿಂದ ಜಿಲ್ಲೆಗೆ ಭಿನ್ನವಾಗಿರುವುದರಿಂದ ಒಂದೇ ರೀತಿಯ ಯೋಜನೆ ಎಲ್ಲಾ ಕಡೆಯೂ ಸ್ವೀಕಾರಾರ್ಹವಲ್ಲ. ಸ್ಥಳೀಯ ಚಿತ್ರಣಕ್ಕೆ ತಕ್ಕಂತೆ ಜಿಲ್ಲಾ ಮಟ್ಟದಲ್ಲಿ ತಜ್ಞರು ಕಾರ್ಯನಿರ್ವಹಿಸಿ ಬದಲಾಗುತ್ತಿರುವ ಪರಿಸ್ಥಿತಿಗೆ ಸೂಕ್ತವಾಗಿ ಕಾರ್ಯನಿರ್ವಹಿಸುವುದು ಅವಶ್ಯಕವಾಗಿದೆ.
ಕೊರೊನಾ 2ನೇ ಅಲೆಯಿಂದ ಆರ್ಬಿಐಗೆ ಆದ ಉತ್ಪಾದನಾ ನಷ್ಟ ಎಷ್ಟು?
ಪಾರದರ್ಶಕ ರಾಷ್ಟ್ರೀಯ ಶುಲ್ಕ ನೀತಿ
ಎಲ್ಲಾ ಅಗತ್ಯ ಆರೋಗ್ಯ ಸೇವೆಗಳು- ಆಂಬುಲೆನ್ಸ್, ಆಮ್ಲಜನಕ, ಔಷಧ, ಆಸ್ಪತ್ರೆಗಳು ಎಲ್ಲ ಸೌಲಭ್ಯಗಳಿಗೂ ಪಾರದರ್ಶಕ ಶುಲ್ಕ ನೀತಿಯನ್ನು ತರಬೇಕು. ಎಲ್ಲಾ ಜನರಿಗೂ ಈಗಿರುವ ಆರೋಗ್ಯ ಯೋಜನೆಗಳಿಂದ ಅನುಕೂಲವಾಗಬೇಕು. ರಾಜ್ಯ ಸರ್ಕಾರಗಳು ಇದಕ್ಕೆ ಅನುದಾನವನ್ನು ಮೀಸಲಿಡಬೇಕು.
ಸ್ಪಷ್ಟ ಮಾಹಿತಿ ಸಿಗಬೇಕು
ರಾಜ್ಯಗಳಲ್ಲಿ ಕೊರೊನಾ ನಿರ್ವಹಣೆ ಕುರಿತು ಸ್ಪಷ್ಟ, ಸಾಕ್ಷ್ಯಾಧಾರವಿರುವ ಮಾಹಿತಿಯನ್ನು ನೀಡಬೇಕು. ಏನು ಮಾಡಬೇಕು, ಏನು ಮಾಡಬಾರದು, ಯಾವ ಚಿಕಿತ್ಸೆ ನೀಡಬೇಕು ಎಂಬೆಲ್ಲಾ ವಿವರಗಳಿಗೂ ಮಾರ್ಗಸೂಚಿಯಿರಬೇಕು. ಎಲ್ಲಾ ವರ್ಗದ, ಎಲ್ಲಾ ವಯೋಮಾನದವರಿಗೂ ಆರೋಗ್ಯ ಸಲಕರಣೆಗಳನ್ನು ಒದಗಿಸಬೇಕು.
ವಿಶ್ವಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿತರ ಸಾವು
ಮಾನವ ಸಂಪನ್ಮೂಲಗಳ ಬಳಕೆ ಮಾಡಲಿ
ಖಾಸಗಿ ವಲಯ ಸೇರಿದಂತೆ ಲಭ್ಯವಿರುವ ಎಲ್ಲಾ ಮಾನವ ಸಂಪನ್ಮೂಲವನ್ನು ಕೊರೊನಾ ನಿರ್ವಹಣೆಗೆ ಬಳಸಿಕೊಳ್ಳಬೇಕು. ಆಯುಷ್ (ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ ಹಾಗೂ ಹೋಮಿಯೋಪಥಿ) ವಿದ್ಯಾರ್ಥಿಗಳೂ ಇದಕ್ಕೆ ಒಳಗೊಳ್ಳಬೇಕು. ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳನ್ನು ನಿರ್ವಹಣೆ ಸಂಬಂಧ ಬಳಸಿಕೊಳ್ಳಬೇಕು.
ಲಸಿಕೆ ಬೆಲೆ ಕುರಿತು ಕೇಂದ್ರ, ರಾಜ್ಯದ ಸಹಕಾರ
ಲಸಿಕೆಗಳ ಉತ್ಪಾದನೆ ಹಾಗೂ ವಿತರಣೆ, ಲಸಿಕೆಗಳ ಬೆಲೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸೂಕ್ತ ಲಸಿಕಾ ನೀತಿ ಇರಬೇಕು. ರಾಜ್ಯ ಸರ್ಕಾರಗಳು ಆದ್ಯತೆ ಗುಂಪುಗಳನ್ನು ಗುರುತಿಸಿ ಲಸಿಕೆ ಕಾರ್ಯಕ್ರಮವನನ್ನು ಚುರುಕುಗೊಳಿಸಬೇಕು.
ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯ
ಕೊರೊನಾ ನಿರ್ವಹಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಸಾರ್ವಜನಿಕರು ಭಾಗವಹಿಸುವುದು ಅತ್ಯಗತ್ಯವಾಗಿದೆ. ಸರ್ಕಾರ, ಸಿವಿಲ್ ಸೊಸೈಟಿ ಸಂಸ್ಥೆಗಳು ಕೊರೊನಾ ಸೋಂಕನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವತ್ತ ಕಾರ್ಯನಿರ್ವಹಿಸಬೇಕು. ಜೀವ ಉಳಿಸುವುದೇ ಮುಖ್ಯವಾಗಿ, ಎಲ್ಲರಿಗೂ ಲಸಿಕೆಯನ್ನು ಶೀಘ್ರವಾಗಿ ನೀಡಬೇಕು.
ಸರ್ಕಾರದ ಮಾಹಿತಿ ಸಂಗ್ರಹಣೆ ಪಾರದರ್ಶಕವಾಗಿರಲಿ
ಕೊರೊನಾ ಪ್ರಕರಣಗಳ ಸಂಬಂಧ ಮಾಹಿತಿ ಸಂಗ್ರಹಣೆ, ಮಾದರಿಗಳ ಸಂಗ್ರಹಣೆಯಲ್ಲಿ ಮಾಹಿತಿಯು ಪಾರದರ್ಶಕವಾಗಿರಬೇಕು. ಕೊರೊನಾ ಸೋಂಕಿತರ ಪ್ರತಿ ಮಾಹಿತಿ, ಆಸ್ಪತ್ರೆಗೆ ಸೇರಿರುವವರ ಸಂಖ್ಯೆ, ಸಾವಿನ ಪ್ರಕರಣಗಳು ಎಲ್ಲದರ ಕುರಿತೂ ಪಾರದರ್ಶಕ ಮಾಹಿತಿ ಇರಬೇಕು.
ಜನರಿಗೆ ಆರ್ಥಿಕ ನೆರವು ನೀಡಬೇಕು
ಕೊರೊನಾ ಕಾರಣವಾಗಿ ಕೆಲಸ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ನೆರವಾಗಬೇಕು. ಅಂಥವರಿಗೆ ಆರ್ಥಿಕ ನೆರವನ್ನು ಘೋಷಿಸಬೇಕು. ಪರಿಹಾರಗಳನ್ನು ಘೋಷಿಸಬೇಕು. ಲಾಕ್ಡೌನ್ ಘೋಷಣೆಗೆ ಮುನ್ನವೇ ಈ ಕ್ರಮಗಳನ್ನು ಕೈಗೊಳ್ಳಬೇಕು.