'ಜೈಲಲ್ಲಿದ್ದ ಸಾವರ್ಕರ್ ಜೊತೆ ಗಾಂಧೀಜಿ ಮಾತನಾಡಿದ್ದು ಹೇಗೆ?': ಬಘೇಲ್ ಟಾಂಗ್
ಛತ್ತೀಸ್ಗಢ, ಅಕ್ಟೋಬರ್ 13: "ಹಿಂದುತ್ವದ ಐಕಾನ್ ಆದ ವೀರ ಸಾರ್ವಕರ್ ಅಂಡಮಾನ್ ಜೈಲಿನಲ್ಲಿ ಇದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಾವರ್ಕರ್ಗೆ ಹೇಳಿದ್ದು ಮಹಾತ್ಮ ಗಾಂಧೀಜಿ," ಎಂದು ಹೇಳಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ಟಾಂಗ್ ನೀಡಿರುವ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, "ಜೈಲಿನಲ್ಲಿ ಇದ್ದ ಸಾವರ್ಕರ್ ಜೊತೆಯಲ್ಲಿ ಮಹಾತ್ಮ ಗಾಂಧಿ ಮಾತನಾಡಿದ್ದು ಹೇಗೆ," ಎಂದು ಪ್ರಶ್ನಿಸಿದ್ದಾರೆ.
"ರಾಷ್ಟ್ರಪಿತ ಮಹಾತ್ಮ ಗಾಂಧಿ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಲು ಸಾವರ್ಕರ್ಗೆ ಸೂಚನೆ ನೀಡಿದರು ಎಂದು ನಮ್ಮ ದೇಶದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹೇಳಿದ್ದಾರೆ. ಆದರೆ ಆ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಎಲ್ಲಿದ್ದರು ಹಾಗೂ ಸಾವರ್ಕರ್ ಎಲ್ಲಿದ್ದರು," ಎಂದು ಸಚಿವರನ್ನು ಪ್ರಶ್ನೆ ಮಾಡಿರುವ ಭೂಪೇಶ್ ಬಘೇಲ್, "ಸಾವರ್ಕರ್ ಜೈಲಿನಲ್ಲಿ ಇದ್ದರು, ಆದರೆ ಜೈಲಿನಲ್ಲಿದ್ದ ಸಾವರ್ಕರ್ ಜೊತೆ ಮಹಾತ್ಮ ಗಾಂಧಿ ಮಾತನಾಡಿದಾದರೂ ಹೇಗೆ," ಎಂದು ಟಾಂಗ್ ನೀಡಿದ್ದಾರೆ.
ಬಿಜೆಪಿ ಶೀಘ್ರವೇ ಸಾವರ್ಕರ್ನನ್ನು 'ರಾಷ್ಟ್ರಪಿತ' ಎಂದು ಘೋಷಿಸುತ್ತೆ: ಓವೈಸಿ
"ಸಾವರ್ಕರ್ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಬಳಿಕ ಬ್ರಿಟಿಷರ ಜೊತೆಯೇ ಸಾವರ್ಕರ್ ಇದ್ದರು," ಎಂದು ಕೂಡಾ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಹೇಳಿಕೊಂಡಿದ್ದಾರೆ.
ಇನ್ನು "ಎರಡು ದೇಶಗಳ ಸಿದ್ಧಾಂತದ ಬಗ್ಗೆ ಮಾತನಾಡಿದ ಮೊದಲ ವ್ಯಕ್ತಿಯೇ ಸಾವರ್ಕರ್, 1925 ರಲ್ಲಿ ತಾನು ಕ್ಷಮಾದಾನ ಅರ್ಜಿ ಸಲ್ಲಿಸಿ ಜೈಲಿನಿಂದ ಹೊರ ಬಂದ ಬಳಿಕ ಸಾವರ್ಕರ್ ಎರಡು ದೇಶಗಳ ಸಿದ್ಧಾಂತದ ಬಗ್ಗೆ ಮಾತನಾಡಿದ್ದರು," ಎಂದು ಬಘೇಲ್ ಆರೋಪ ಮಾಡಿದ್ದಾರೆ.
ಇದಕ್ಕೂ ಮುನ್ನ ದೇಶದ ರಕ್ಷಣಾ ಸಚಿವರ ಹೇಳಿಕೆಯ ಬಗ್ಗೆ ಮಾತನಾಡಿದ್ದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ಬಿಜೆಪಿಯು ಶೀಘ್ರದಲ್ಲೇ ಸಾವರ್ಕರ್ ಅನ್ನು ರಾಷ್ಟ್ರಪಿತ ಎಂದು ಘೋಷಣೆ ಮಾಡುತ್ತದೆ," ಎಂದು ಹೇಳಿದ್ದಾರೆ.
'ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್ಗೆ ಹೇಳಿದ್ದು ಗಾಂಧಿ' ಎಂದ ರಾಜನಾಥ್ ಸಿಂಗ್
"ಬಿಜೆಪಿಯು ತನ್ನದೇ ಆದ, ವಿಕೃತವಾದ ಇತಿಹಾಸವನ್ನು ಪ್ರಸ್ತುತ ಪಡಿಸುತ್ತಿದೆ. ಹೀಗೆಯೇ ಮುಂದುವರಿದರೆ ಇನ್ನು ಬಿಜೆಪಿಯವರು ಶೀಘ್ರದಲ್ಲೇ, ರಾಷ್ಟ್ರಪಿತ ಮಹಾತ್ಮ ಗಾಂಧಿಯ ಬದಲಾಗಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಆರೋಪವನ್ನು ಹೊತ್ತಿರುವ ಸಾವರ್ಕರ್ ಅನ್ನು ದೇಶದ ಪಿತಾಮಹ ಎಂದು ಹೇಳುತ್ತಾರೆ," ಎಂದು ಓವೈಸಿ ದೂರಿದ್ದಾರೆ.
ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಾರ್ವಕರ್ ಕುರಿತಾದ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಸಾವರ್ಕರ್ಗೆ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದ್ದು ಗಾಂಧೀಜಿ. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಸಾವರ್ಕರ್ ನೀಡಿದ ಕೊಡುಗೆಯನ್ನು ಕೆಲವು ಸಿದ್ಧಾಂತವನ್ನು ಅನುಸರಿಸುವವರು ನಿಂದಿಸಿದ್ದಾರೆ. ಅದನ್ನು ಇನ್ನು ಮುಂದೆ ಸಹಿಸಲಾಗದು," ಎಂದು ಹೇಳಿದ್ದರು.
"ಸಾವರ್ಕರ್ ವಿರುದ್ಧವಾಗಿ ಹಲವಾರು ಸುಳ್ಳು ಸುದ್ದಿಗಳನ್ನು ಹರಡಲಾಗಿದೆ. ಬ್ರಿಟಿಷ್ ಸರ್ಕಾರದ ಮುಂದೆ ಸಾವರ್ಕರ್ ಎರಡು ಬಾರಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು ಎಂದು ಪದೇ ಪದೇ ಹೇಳಲಾಗುತ್ತದೆ. ಆದರೆ ನಿಜವಾಗಿ ಸಾವರ್ಕರ್ ತನ್ನ ಬಿಡುಗಡೆಗಾಗಿ ಈ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿಲ್ಲ. ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳು ಕ್ಷಮಾದಾನ ಅರ್ಜಿಯನ್ನು ಸಲ್ಲಿಕೆ ಮಾಡಬಹುದು," ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು.
"ಗುಲಾಮಗಿರಿಯ ಸಂಕೋಲೆಯನ್ನು ಮುರಿಯಲು ಜನರಿಗೆ ಸಾವರ್ಕರ್ ಪ್ರೇರಣೆ ನೀಡಿದರು. ಸಾವರ್ಕರ್ ಮಹಿಳಾ ಹಕ್ಕುಗಳು ಸೇರಿದಂತೆ ಇತರ ಸಾಮಾಜಿಕ ಸಮಸ್ಯೆಗಳ ನಡುವೆ ಅಸ್ಪೃಶ್ಯತೆಯ ವಿರುದ್ಧ ಆಂದೋಲನ ಮಾಡಿದರು. ಆದರೆ ಸಾವರ್ಕರ್ ಅವರು ದೇಶದ ಸಾಂಸ್ಕೃತಿಕ ಏಕತೆಗಾಗಿ ನೀಡಿದ ಕೊಡುಗೆಯನ್ನು ಕಡೆಗಣಿಸಲಾಗುತ್ತಿದೆ," ಎಂದು ರಕ್ಷಣಾ ಸಚಿವರು ಉಲ್ಲೇಖ ಮಾಡಿದ್ದರು.
ಇನ್ನು ಈ ಕಾರ್ಯಕ್ರಮದಲ್ಲೇ ಮಾತನಾಡಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, "ಸಾವರ್ಕರ್ ನೇರವಾಗಿ ಮಾತನಾಡುತ್ತಿದ್ದ ಕಾರಣದಿಮದಾಗಿ ಅವರನ್ನು ತಪ್ಪಾಗಿ ತಿಳಿಯಲಾಗಿದೆ. ಆದರೆ ಎಲ್ಲಾ ಭಾರತೀಯರು ಆ ಸಂದರ್ಭದಲ್ಲಿ ಸಾವರ್ಕರ್ನಂತೆ ಕಠಿಣವಾಗಿ, ನೇರವಾಗಿ ಮಾತನಾಡಿದ್ದರೆ ಈಗ ದೇಶವು ವಿಭಜನೆ ಆಗುತ್ತಿರಲಿಲ್ಲ," ಎಂದು ಅಭಿಪ್ರಾಯಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)