Chhattisgarh Maoist attack : ಭಾರತೀಯ ಸೇನೆಯ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆ ಎಡವಿದ್ದೆಲ್ಲಿ?
ನಕ್ಸಲರ ಹುಟ್ಟಡಗಿಸಲು ಭಾರತೀಯ ಸೈನಿಕರು ಆರಂಭಿಸಿದ್ದ ಕಾರ್ಯಾಚರಣೆ ಅವರ ಜೀವಕ್ಕೇ ಕುತ್ತು ತಂದಿದೆ. ಹಾಗಾದರೆ ಸೇನೆ ಮಾಡಿದ್ದ ಬೃಹತ್ ಕಾರ್ಯಾಚರಣೆ ಎಡವಿದ್ದೆಲ್ಲಿ, ನಕ್ಸಲರ ಉಪಾಯ ಏನಾಗಿತ್ತು, ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ನಕ್ಸಲರ ಟಾಪ್ ಕಮಾಂಡರ್ ಹಿದ್ಮಾ ಇರುವ ಜಾಗ ಗೊತ್ತಾಗಿದೆ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ಯೋಧರು ಕಾರ್ಯಾಚರಣೆಗೆ ಇಳಿದಿದ್ದರು.
ನಕ್ಸಲ್ ದಾಳಿ ನಡೆದ ಸ್ಥಳಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ
ಅದನ್ನು ಮೊದಲೇ ಅರಿತಿದ್ದ ನಕ್ಸಲರು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದರು. ತಮ್ಮ ಕಮಾಂಡರ್ ಬರುತ್ತಾನೆಂದು ನಕ್ಸಲರು ಸುಳ್ಳು ಸುದ್ದಿ ಹಬ್ಬಿಸಿ ಯೋಧರನ್ನು ಖೆಡ್ಡಾಕ್ಕೆ ಕೆಡವಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.
ಛತ್ತೀಸ್ಗಢದಲ್ಲಿ ಮಾವೋವಾದಿ ನಕ್ಸಲರು ಅಟ್ಟಹಾಸ ಗೈದಿದ್ದು, 22 ಮಂದಿ ಯೋಧರನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದರ ಬೆನ್ನಲ್ಲೇ ಭದ್ರತಾ ಪಡೆಗಳು ನಕ್ಸಲರ ಹೆಡೆಮುರಿ ಕಟ್ಟಲು 2000 ಸೈನಿಕರೊಂದಿಗೆ ಕಾರ್ಯಾಚರಣೆ ಆರಂಭಿಸಿದೆ.
ದೇಶದಲ್ಲೇ ಅತಿ ಹೆಚ್ಚು ನಕ್ಸಲ್ ಪೀಡಿತ ಪ್ರದೇಶವಾಗಿರುವ ಛತ್ತೀಸ್ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯಲ್ಲಿ ಶನಿವಾರ ಭದ್ರತಾ ಪಡೆಗಳ ಮೇಲೆ ನಕ್ಸಲರು ಎರಗಿದ್ದರು.
ಆ ಪೈಕಿ ಐವರ ಶವಗಳು ಶನಿವಾರ ಪತ್ತೆಯಾಗಿದ್ದವು. 18 ಮಂದಿ ಕಾಣೆಯಾಗಿದ್ದರು. ನಾಪತ್ತೆಯಾಗಿದ್ದ ಯೋಧರಿಗಾಗಿ ಶೋಧಕಾರ್ಯಾಚರಣೆ ನಡೆಸುವಾಗ 17 ಯೋಧರ ಮೃತದೇಹಗಳು ಸಿಕ್ಕಿವೆ.
ಸಕಾಲದಲ್ಲಿ ಸ್ಥಳಕ್ಕೆ ಆಗಮಿಸದ ಹೆಲಿಕಾಪ್ಟರ್
ನಕ್ಸಲರ ವಿರುದ್ಧ ಕಾರ್ಯಾಚರಣೆಗೆ 790 ಸಿಬ್ಬಂದಿಯ ಬಲ ಬಳಸಲು ಅನುಮೋದನೆ ದೊರೆತಿತ್ತು. ಸುದೀರ್ಘ ಅವಧಿಯ ಕಾರ್ಯಾಚರಣೆ ಆದ್ದರಿಂದ ಉಳಿದ ಸಿಬ್ಬಂದಿಯನ್ನು ಬೆಂಬಲವಾಗಿ ಬಳಸಲಾಗಿತ್ತು. ಗುಂಡಿನ ಚಕಮಕಿ ಆರಂಭವಾದ ಹಿಂದೆಯೇ ರಕ್ಷಣಾ ಕಾರ್ಯಕ್ಕೆ ನೆರವಾಗಲು ಹೆಲಿಕಾಪ್ಟರ್ ಸೇವೆ ಪಡೆಯಲಾಯಿತು. ಆದರೆ, ಸಕಾಲದಲ್ಲಿ ಹೆಲಿಕಾಪ್ಟರ್ ಸ್ಥಳಕ್ಕೆ ತಲುಪಲು ಆಗಲಿಲ್ಲ. ಸಂಜೆ 5ಕ್ಕೆ ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳ ಕರೆತರಲು ನೆರವಾಯಿತು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ನಮಗೆ ತಿಳಿಸಲಾಗಿದ್ದ ಜಾಗದಲ್ಲಿ ಯಾರೂ ಇರಲಿಲ್ಲ
ನಕ್ಸಲರು ಅಡಗಿದ್ದಾರೆ ಎಂದು ನಮಗೆ ಬಂದಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ತೆರಳಿದ್ದೆವು, ಆದರೆ ಆ ಜಾಗದಲ್ಲಿ ಉಆರೂ ಇರಲಿಲ್ಲ, ಕೆಂಪು ಬಾವುಟವಿತ್ತು. ನಾವು ವಾಪಸ್ ತೆರಳುವುದಕ್ಕೆ ಮುಂದಾದಾಗ ಹೇಗೆ ನಕ್ಸಲರು ದಾಳಿ ಮಾಡಿದರು ಎಂಬುದೇ ತಿಳಿಯಲಿಲ್ಲ ಎಂದು ಯೋಧರೊಬ್ಬರು ತಿಳಿಸಿದ್ದಾರೆ.
ದಾಳಿ ನಡೆಸಿದ್ದೇ ನಕ್ಸಲರ
ಮಾವೋವಾದಿಗಳ ಪ್ರಾಬಲ್ಯವಿರುವ ಗಡಿ ಜಿಲ್ಲೆಯ ಸುಕ್ಮಾದ ಅರಣ್ಯ ಭಾಗದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳನ್ನು ಸುತ್ತುವರಿದು ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಸುಮಾರು 4 ಗಂಟೆ ಗುಂಡಿನ ಚಕಮಕಿ ನಡೆದಿದೆ. ತಂಡವು ತರೆಮ್ನಿಂದ ಹೊರಟು ಜೋನಾಗುಡ ಅರಣ್ಯದ ಮೂಲಕ ಹೋಗುವಾಗ ದಾಳಿ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಛತ್ತೀಸಗಡದ ಡಿಐಜಿ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಒ.ಪಿ.ಪಾಲ್ ಅವರು, ''ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳ ಗಡಿಗೆ ಹೊಂದಿಕೊಂಡ ಅರಣ್ಯದಲ್ಲಿ ಶನಿವಾರ ಗುಂಡಿನ ಚಕಮಕಿ ನಡೆದಿದ್ದು, ಸ್ಥಳದಲ್ಲೇ ಐವರು ಯೋಧರು ಸತ್ತಿದ್ದರು. ಭಾನುವಾರ ಅದೇ ಸ್ಥಳದಲ್ಲಿ 17 ಯೋಧರ ಶವ ಪತ್ತೆಯಾಗಿದೆ. ಯೋಧರ ಬಳಿಯಿದ್ದ ಶಸ್ತ್ರಾಸ್ತ್ರಗಳು ಕಾಣೆಯಾಗಿವೆ' ಎಂದು ತಿಳಿಸಿದ್ದಾರೆ.
400 ನಕ್ಸಲರಿಂದ ದಾಳಿ
ಬಿಜಾಪುರ ಜಿಲ್ಲೆಯ ತರೆಮ್, ಉಸೂರ್, ಪಮೇಡ್, ಸುಕ್ಮಾ ಜಿಲ್ಲೆಯ ಮಿನ್ಪಾ ಹಾಗೂ ನರ್ಸಾಪುರಂ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು. 2,000 ಸಿಬ್ಬಂದಿ ಭಾಗಿಯಾಗಿದ್ದರು. ಅಧಿಕಾರಿಯೊಬ್ಬರ ಪ್ರಕಾರ, ಗುಂಡಿನ ದಾಳಿ ಕೃತ್ಯದಲ್ಲಿ ಸುಮಾರು 400 ಮಾವೋವಾದಿಗಳು ಭಾಗಿಯಾಗಿದ್ದರು. ಪಿಎಲ್ಜಿಎ ಸಂಘಟನೆ 1ನೇ ಬೆಟಾಲಿಯನ್ನ ಹಿದ್ಮಾ ಮತ್ತು ಆತನ ಸಹಚರರಾದ ಸುಜಾತಾ ಈ ದಾಳಿಯ ಹಿಂದಿದ್ದಾರೆ ಎಂದು ಶಂಕಿಸಲಾಗಿದೆ. ಕೋಬ್ರಾ ಯೋಧರು ತೀವ್ರ ಪ್ರತಿರೋಧ ತೋರಿದ್ದರಿಂದ ನಕ್ಸಲರು ಇನ್ನಷ್ಟು ದಾಳಿ ಮುಂದುವರಿಸಲಾಗಲಿಲ್ಲ.
ಮೂರು ದಿಕ್ಕುಗಳಿಂದ ಗುಂಡಿನ ಸುರಿಮಳೆ
ಮಾವೋವಾದಿಗಳು ಮೂರು ದಿಕ್ಕಿನಿಂದ ಭದ್ರತಾ ಪಡೆಯನ್ನು ಸುತ್ತುವರಿದಿದ್ದು, ಲೈಟ್ ಮಷಿನ್ ಗನ್ ಬಳಸಿ ಗುಂಡಿನ ಸುರಿಮಳೆಗೈದಿದ್ದಾರೆ ಹಾಗೂ ಸುಧಾರಿತ ಸ್ಫೋಟಕ ಸಾಧನ (ಎಲ್ಇಡಿ)ವನ್ನೂ ದಾಳಿಗೆ ಬಳಸಿದ್ದಾರೆ. ನಕ್ಸಲೀಯರ ಕಡೆಯೂ 10 ರಿಂದ 12 ಜನರು ಸತ್ತಿರುವ ಶಂಕೆ ಇದ್ದು, ಶವಗಳನ್ನು ಅವರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಒಯ್ದಿದ್ದಾರೆ. ಇನ್ನು ಗಾಯಗೊಂಡಿರುವ ಯೋಧರು, ಭದ್ರತಾ ಸಿಬ್ಬಂದಿಗಳಲ್ಲಿ 7 ಜನರನ್ನು ರಾಯಪುರದಲ್ಲಿನ ಆಸ್ಪತ್ರೆ ಹಾಗೂ 23 ಜನರನ್ನು ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.