ಡಿ.13ರ ಸಂಸತ್ ದಾಳಿಯನ್ನು ಮರೆಯಲು ಸಾಧ್ಯವೇ?
ನವದಹಲಿ, ಡಿ. 13 : ಭಾರತದ ಪಾಲಿಗೆ ಡಿ.13 ಅತ್ಯಂತ ಕರಾಳ ದಿನ. ದೇಶದ ಆಡಳಿತ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ 2001ರ ಡಿಸೆಂಬರ್ 13ರಂದು ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ್ದರು. ಇಡೀ ದೇಶ ದಾಳಿಯ ಸುದ್ದಿ ಕೇಳಿ ಬೆಚ್ಚಿಬಿದ್ದಿತ್ತು. ಭಾರತದಲ್ಲಿ ಸಂಸತ್ ಸೇರಿದಂತೆ ಯಾವ ಪ್ರದೇಶವೂ ಸುರಕ್ಷಿತವಲ್ಲ ಎಂಬುದು ದಾಳಿಯಿಂದಾಗಿ ಸಾಬೀತಾಯಿತು.
ಸಂಸತ್ ಭವನದ ಮೇಲಿನ ದಾಳಿಯ ಮೊದಲ ಸ್ಕೇಚ್ ರೂಪಗೊಂಡಿದ್ದು ಕಂದಹಾರ್ ವಿಮಾನ ಅಪಹರಣದ ಸಮಯದಲ್ಲಿ. 1999ರಲ್ಲಿ ಐಸಿ 814 ವಿಮಾನವನ್ನು ಉಗ್ರರು ಹೈಜಾಕ್ ಮಾಡಿದರು. ವಿಮಾನ ಅಪಹರಿಸಿದ್ದ ಉಗ್ರರು ಇಟ್ಟ ಬೇಡಿಕೆ ಮೌಲಾನಾ ಮಸೂರ್ ಅಜರ್ ಬಿಡುಗಡೆ. [ಉಂಡ ಮನೆಗೆ 2 ಬಗೆದಿದ್ದ ಗುರು ಟೈಂ ಲೈನ್]
ವಿಮಾನ ಅಪಹರಣದ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ಎರಡು ಆಯ್ಕೆ ಮಾತ್ರವಿತ್ತು. ಉಗ್ರ ಅಜರ್ ಬಿಡುಗಡೆ ಮಾಡದಿದ್ದರೆ, ವಿಮಾನದಲ್ಲಿದ್ದ ಪ್ರಯಾಣಿಕರನ್ನು ಉಗ್ರರು ಕೊಂದು ಹಾಕುತ್ತಿದ್ದರು. ವಿಮಾನ ಅಪಹರಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳೇ ಹೇಳುವ ಪ್ರಕಾರ ಇದೊಂದು ಸಂಕಷ್ಟದ ಸಮಯವಾಗಿತ್ತು.
ತಾಲಿಬಾನ್ ಹಿಡಿತದಲ್ಲಿದ್ದ ಕಂದಹಾರ್ನಲ್ಲಿ ಉಗ್ರರು ವಿಮಾನವನ್ನು ಹೈಜಾಕ್ ಮಾಡಿಕೊಂಡು ಹೋಗಿ ಇಳಿಸಿದಾಗಲೇ ಅಜರ್ನನ್ನು ಬಿಡುಗಡೆಗೊಳಿಸಬೇಕು ಎಂದು ತೀರ್ಮಾನಿಸಿಕೊಂಡಿದ್ದರು. ಕಾಶ್ಮೀರಕ್ಕಾಗಿ ಹೋರಾಟ ನಡೆಸುತ್ತಿದ್ದ ಉಗ್ರರಿಗೆ ಅಜರ್ನ ಅವಶ್ಯಕತೆ ಇತ್ತು.
ಭಾರತದಿಂದ ಬಿಡುಗಡೆಗೊಂಡು ಪಾಕಿಸ್ತಾನ ಸೇರಿದ ಮೌಲಾನಾ ಮಸೂರ್ ಅಜರ್ ಜೈಷೆ ಮೊಹಮ್ಮದ್ ಸಂಘಟನೆಯನ್ನು ಸ್ಥಾಪನೆ ಮಾಡಿದರು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾವು ಧಕ್ಕೆ ತರುತ್ತೇವೆ ಎಂಬ ಸಂದೇಶವನ್ನು ನೀಡಲು ಉಗ್ರರು ಸಂಸತ್ ಭವನದ ಮೇಲೆ ದಾಳಿ ನಡೆಸಿದರು. ಕಾಶ್ಮೀರಕ್ಕಾಗಿ ಹೋರಾಟ ಆರಂಭಿಸಿದರು.
ಕಠಿಣವಾದ ತನಿಖೆ : ಸಂಸತ್ ಭವನದ ಮೇಲೆ ನಡೆದ ದಾಳಿಯ ಬಗ್ಗೆ ತನಿಖೆ ನಡೆಸುವುದು ಕಷ್ಟವಾಗಿತ್ತು. ದಾಳಿಯಲ್ಲಿ ಪಾಲ್ಗೊಂಡಿದ್ದ ಐವರು ಉಗ್ರರು ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದರು. ದಾಳಿಯ ಹಿಂದೆ ಜೈಷೆ ಜೈಷೆ ಮೊಹಮ್ಮದ್ ಕೈವಾಡವಿದೆ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಆದರೆ, ಅದನ್ನು ದೃಢಪಡಿಸಲು ಬಲವಾದ ಸಾಕ್ಷಿಗಳು ದೊರೆಯಲಿಲ್ಲ.
ದಾಳಿಯ ನಂತರ ಭಾರತ ಮೃದುವಾಯಿತೇ? : ಸಂಸತ್ ದಾಳಿಯ ನಂತರ ಭಾರತ ಮೃದುವಾಯಿತೇ? ಎಂಬ ಬಗ್ಗೆ ಹಲವಾರು ಚರ್ಚೆಗಳು ನಡೆದಿವೆ. ಯುದ್ಧ ನಡೆಯುವ ಮುನ್ಸೂಚನೆ ಸಿಕ್ಕರೂ ಬೇರೆ-ಬೇರೆ ದೇಶಗಳು ಇದರಲ್ಲಿ ಹಸ್ತಕ್ಷೇಪ ಮಾಡಿದವು. ಪ್ರಧಾನಿ ಕಚೇರಿಯಲ್ಲಿ ಯುದ್ಧ ಘೋಷಣೆ ಬಗ್ಗೆ ಹಲವಾರು ಚರ್ಚೆಗಳು ನಡೆದವು. ಆದರೆ, ಈ ಸಮಸ್ಯೆಯನ್ನು ಬೇರೆ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಲು ವಿವಿಧ ದೇಶಗಳು ಸಲಹೆ ನೀಡಿದವು.
ಅಫ್ಜಲ್ ಗುರು ನೇಣಿಗೆ : ಸಂಸತ್ ಭವನದ ದಾಳಿಯ ತನಿಖೆ ಅಫ್ಜಲ್ ಗುರುಗೆ ಮರಣದಂಡನೆ ಶಿಕ್ಷೆಯಾಗುವ ಮೂಲಕ ಕೊನೆಗೊಂಡಿತ್ತು. ಗುರು ವಿರುದ್ಧ ಸಾಕ್ಷಿಗಳನ್ನು ಕಲೆ ಹಾಕುವುದೇ ತನಿಖೆಯ ಸಂದರ್ಭದಲ್ಲಿ ಕಠಿಣವಾಗಿತ್ತು. ಕಾಶ್ಮೀರಿಗಳು ಅಫ್ಜಲ್ಗುರು ಮುಗ್ಧ ಎಂದು ಘೋಷಿಸಿದರು.
ಸರ್ಕಾರ ಸಹ ಅಫ್ಜಲ್ ಗುರು ಮರಣದಂಡನೆ ನಂತರ ನಡೆಯಬಹುದಾದ ಘಟನೆಗಳ ಬಗ್ಗೆ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿತು. ಕಾಶ್ಮೀರ ಕಣಿವೆಯಲ್ಲಿ ಯಾವುದೇ ಹಿಂಸಾಚಾರ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿತು. ಫೆಬ್ರವರಿ 9 2013ರಲ್ಲಿ ಅಫ್ಜಲ್ ಗುರುವನ್ನು ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಯಿತು.
ದೆಹಲಿ ದಾಳಿಯ ಚಿತ್ರಣ
* ಡಿ.13 2001ರಂದು ಐವರು ಉಗ್ರರಿಂದ ಸಂಸತ್ ಭವನದ ಮೇಲೆ ದಾಳಿ 9 ಜನರ ಸಾವು, 15 ಜನರಿಗೆ ಗಾಯ.
* ಡಿ.15ರಂದು ದೆಹಲಿ ಪೊಲೀಸರಿಂದ ಪ್ರೊ.ಗಿಲಾನಿ, ಅಫ್ಜಲ್ ಗುರು ಮತ್ತು ಶೌಕತ್ ಹಸನ್ ಬಂಧನ.
* ಡಿ.18 2002, ಗಿಲಾನಿ, ಅಫ್ಜಲ್ ಗುರು ಶೌಕತ್ ಅಲಿಗೆ ಮರಣ ದಂಡನೆ ವಿಧಿಸಿದ ಕೋರ್ಟ್.
* ಅಕ್ಟೋಬರ್ 29 2003 ಗಿಲಾನಿಗೆ ನಿರ್ದೋಷಿ ದೆಹಲಿ ಹೈಕೋರ್ಟ್ ತೀರ್ಪು, ಉಳಿದ ಇಬ್ಬರು ಆರೋಪಿಗಳ ಮರಣ ದಂಡನೆ ಎತ್ತಿಹಿಡಿದು ಆದೇಶ.
* ಆ.4 2005 ಅಫ್ಜಲ್ ಗುರುವಿನ ಮರಣ ದಂಡನೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್. ಅಲಿ ಮರಣದಂಡನೆಯನ್ನು 10 ವರ್ಷದ ಶಿಕ್ಷೆಗೆ ಪರಿವರ್ತಿಸಲಾಯಿತು.
* ಜನವರಿ 12 2007 ಅಫ್ಜಲ್ ಗುರು ಮರಣದಂಡನೆ ಪುನರ್ ಪರಿಶೀಲನಾ ಅರ್ಜಿ ವಜಾ
* ಫೆಬ್ರವರಿ 9 2013ರಲ್ಲಿ ತಿಹಾರ್ ಜೈಲಿನಲ್ಲಿ ಅಫ್ವಲ್ ಗುರುಗೆ ನೇಣು