ಕಾಂಗ್ರೆಸ್ ಗೆ ಮಣಿಪುರದಲ್ಲಿ ಗುಣಿ ತೋಡಿದ ಹಿಮಂತ ಬಿಸ್ವಾ ಶರ್ಮಾ ಯಾರು?
ಇಂಫಾಲ್, ಮಾರ್ಚ್ 13: ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನ ಹಿರಿಯ ಸಚಿವರು. ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಹಲವು ಖಾತೆಗಳನ್ನು ಶರ್ಮಾ ನಿರ್ವಹಿಸುತ್ತಿದ್ದಾರೆ. ಇದರ ಜತೆಗೆ ಮಣಿಪುರದಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಅವರ ಹೆಗಲಿಗಿದೆ.
2016ರಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಪಕ್ಕದ ರಾಜ್ಯ ಮಣಿಪುರದ ಮೇಲೆ ಕೇಸರಿ ಪಡೆ ಕಣ್ಣಿಟ್ಟಿತು. ಆಗಿನಿಂದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹಾಗೂ ಶರ್ಮಾ ಇಬ್ಬರೂ ಸೇರಿ ಮಣಿಪುರದಲ್ಲಿ ಪಕ್ಷಕ್ಕೆ ಅದ್ಭುತ ಎನಿಸುವಂಥ ಫಲಿತಾಂಶ ತಂದುಕೊಟ್ಟಿದ್ದಾರೆ.[ಮಣಿಪುರದಲ್ಲೂ ಗದ್ದುಗೆ ಹಿಡಿಯಲಿದೆ ಕಮಲ ಪಕ್ಷ]
2012ರಲ್ಲಿ ಮಣಿಪುರದಲ್ಲಿ ಒಂದು ಸ್ಥಾನ ಕೂಡ ಗಳಿಸಲು ಸಾಧ್ಯವಾಗದ ಬಿಜೆಪಿ, 21 ಕಡೆ ಗೆಲುವು ಸಾಧಿಸುವಲ್ಲಿ ಸಫಲವಾಗಿದೆ. ಅಷ್ಟೇ ಅಲ್ಲ, ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡು ಸರಕಾರ ರಚನೆಗೆ ಮುಂದಾಗಿದೆ. ಹದಿನೈದು ವರ್ಷದಿಂದ ಅಧಿಕಾರ ಹಿಡಿದು, ಈ ಬಾರಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದ್ದರೂ ಗದ್ದುಗೆ ಏರಲು ಸಾಧ್ಯವಾಗುತ್ತಿಲ್ಲ.
ನಾಲ್ಕೈದು ಪಕ್ಷ ಒಗ್ಗೂಡಿಸಿದರು
ಬಿಜೆಪಿಯ ಇಂಥ ನಡೆಯಲ್ಲಿ ಚತುರ ರಾಜಕಾರಣಿ ಶರ್ಮಾ ಲೆಕ್ಕಾಚಾರಗಳು ಕೆಲಸ ಮಾಡಿವೆ. ನಾಲ್ಕೈದು ಪಕ್ಷಗಳನ್ನು ಹಾಗೂ ಪಕ್ಷೇತರರನ್ನು ಒಟ್ಟುಗೂಡಿಸಿ ಅಧಿಕಾರ ಹಿಡಿಯುವುದು ಸುಲಭದ ಮಾತಲ್ಲ. ಆದರೆ ಅದನ್ನು ಶರ್ಮಾ ಮಾಡಿದ್ದಾರೆ. ಭಾನುವಾರ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಜಿಗಿದ ಕಾಂಗ್ರೆಸ್ ಶಾಸಕ ಶ್ಯಾಮ್ ಕುಮಾರ್ ಸಿಂಗ್ ಮನವೊಲಿಸಿರುವುದು ಇದೇ ಶರ್ಮಾ.
ಇನ್ನೂ ಹದಿಮೂರು ಕೈ ಪಕ್ಷದ ಶಾಸಕರು ಬಿಜೆಪಿಗೆ
ಹಾಗೆ ನೋಡಿದರೆ ಇಬ್ಬರೂ ಒಂದೇ ವಾಹನದಲ್ಲಿ ಭಾನುವಾರ ಪ್ರಯಾಣಿಸಿದ್ದಾರೆ. ಇದರ ಜೊತೆಗೆ "ಇನ್ನೂ ಹದಿಮೂರು ಕೈ ಪಕ್ಷದ ಶಾಸಕರು ಬಿಜೆಪಿಗೆ ಸೇರಲಿದ್ದಾರೆ" ಎನ್ನುವ ಮೂಲಕ ಕಾಂಗ್ರೆಸ್ ನ ಬುಡವೇ ನಡುಗುವಂಥ ಹೇಳಿಕೆ ಬೇರೆ ಶರ್ಮಾ ನೀಡಿದ್ದಾರೆ.
ಅಸ್ಸಾಮಿನಲ್ಲಿ ಕೇಸರಿ ಬಾವುಟ
ಈಶಾನ್ಯ ರಾಜ್ಯಗಳ ವಿಚಾರಕ್ಕೆ ಬಂದರೆ ಶರ್ಮಾ ಅವರು ಮೋದಿಗೆ ಬಹಳ ನಂಬಿಕೆಯ ಕೈ, ಕಳೆದ ವರ್ಷ ಅಸ್ಸಾಮಿನಲ್ಲಿ ಕೇಸರಿ ಬಾವುಟ ನೆಟ್ಟ ನಂತರ, ಇದೀಗ ಮಣಿಪುರದಲ್ಲಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿ ನಾಯಕರಾದ ಶರ್ಮಾ ಅವರದು ಪೂರ್ವಾಶ್ರಮ ಕಾಂಗ್ರೆಸ್. ಅಲ್ಲಿ ರಾಹುಲ್ ಗಾಂಧಿ ತಮ್ಮನ್ನು ನಿರ್ಲಕ್ಷ್ಯ ಮಾಡಿದರು ಎಂದು ಬಿಜೆಪಿ ಸೇರಿದರು.
ಅರುಣಾಚಲಪ್ರದೇಶದಲ್ಲೂ ಶರ್ಮಾ ಶ್ರಮ
ಹದಿನೈದು ವರ್ಷ ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಲ್ಲಿ ಇದ್ದರೂ ತನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂಬ ದ್ವೇಷವನ್ನು ಶರ್ಮಾ ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮ ವಲಯಗಳಲ್ಲಿ ಹರಿದಾಡುತ್ತಿರುವ ಮಾತು. 2016ರ ಮಧ್ಯದಲ್ಲಿ ಎನ್ ಡಿಎನ ಕನ್ವೀನರ್ ಆಗಿ ಶರ್ಮಾ ಅವರನ್ನು ನೇಮಿಸಲಾಯಿತು. ಅರುಣಾಚಲಪ್ರದೇಶದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಶರ್ಮಾ ಶ್ರಮವಿದೆ.
ಬಿಜೆಪಿಗೆ ನೆಲೆಯೇ ಇರಲಿಲ್ಲ
ಇತ್ತೀಚಿನವರೆಗೆ ಈಶಾನ್ಯ ರಾಜ್ಯದಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ. ಮಣಿಪುರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತಯಾರಿ ನಡೆಸಿದೆ. ಈ ಭಾಗದಲ್ಲಿ ಮೂರು ರಾಜ್ಯದ ಚುಕ್ಕಾಣಿ ಬಿಜೆಪಿ ಕೈಲಿದೆ. 2012ರ ವಿಧಾನಸಭಾ ಚುನಾವಣೆಯಲ್ಲಿ ಮಣಿಪುರದಲ್ಲಿ ಒಂದು ಸ್ಥಾನ ಕೂಡ ಗೆಲ್ಲಲಾರದ ಬಿಜೆಪಿ, ಇದೀಗ ಏಕ್ ದಂ ಅಧಿಕಾರವನ್ನೇ ಪಡೆದಿರುವುದು ಆ ಪಕ್ಷದಲ್ಲಿ ಹೊಸ ಚೈತನ್ಯ ಮೂಡಿಸಿದೆ.