20 ಸಾವಿರ ಕೋಟಿ ರು ಹೆರಾಯಿನ್ ಪತ್ತೆ; ತನಿಖೆಯಲ್ಲಿ ಅಚ್ಚರಿ ಅಂಶ ಬೆಳಕಿಗೆ
ನವದೆಹಲಿ/ವಿಜಯವಾಡ, ಸೆಪ್ಟೆಂಬರ್ 22: ಅಫ್ಘಾನಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದ ಅಪಾರ ಪ್ರಮಾಣದ ಹೆರಾಯಿನ್ ವಶ ಪಡಿಸಿಕೊಂಡಿರುವ ಸುದ್ದಿ ನಿನ್ನೆ ಭಾರಿ ಸದ್ದು ಮಾಡಿತ್ತು. ಗುಜರಾತ್ ಬಂದರು ಪ್ರದೇಶದಲ್ಲಿ ಅಲ್ಲಿನ ಅಧಿಕಾರಿಗಳು ವಶಪಡಿಸಿಕೊಂಡ ಹೆರಾಯಿನ್ ಮೌಲ್ಯ ಸರಿ ಸುಮಾರು 20 ಸಾವಿರ ಕೋಟಿ ರು ಎಂದು ಅಂದಾಜಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಮತ್ತೊಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಅಫ್ಘಾನಿನಿಂದ ಹೊರಟ ಈ ಕಳ್ಳ ಮಾಲು ಗುಜರಾತಿನ ಮಂದ್ರಾ ಬಂದರಿನಲ್ಲಿ ಸಿಕ್ಕಿಬಿದ್ದರೂ, ಆ ಮಾಲು ತಲುಪಬೇಕಿದ್ದ To Address ಬೇರೆಯದ್ದೇ ಆಗಿದೆ. ಮೊದಲಿಗೆ ಆಂಧ್ರಪ್ರದೇಶದ ಖಾಸಗಿ ಸಂಸ್ಥೆಯ ವಿಳಾಸ ಎಂಬುದು ಇದೀಗ ಪತ್ತೆ ಹಚ್ಚಲಾಗಿತ್ತು. ಆದರೆ, ಅದು ಕೂಡಾ ಸರಿಯಾದ ವಿಳಾಸವಲ್ಲ, ನಿಖರವಾದ ವಿಳಾಸ ದೆಹಲಿಸಂಸ್ಥೆ ಎಂದು ತಿಳಿದು ಬಂದಿದೆ.
ಕಂದಾಯ ಇಲಾಖೆಯ ಗುಪ್ತಚರ ವಿಭಾಗದ ನಿರ್ದೇಶನಾಲಯದ ಅಧಿಕಾರಿಗಳು ಸುಮಾರು 2,988.22 ಕಿಲೋಗ್ರಾಮ್ ತೂಗುವ ಹೆರಾಯಿನ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಸುಮಾರು 20,000 ಕೋಟಿ ರು ಎಂದು ಅಂದಾಜಿಸಲಾಗಿದೆ. ಟಾಲ್ಕ್ ಪುಡಿ ಜೊತೆಗೆ ಹೆರಾಯಿನ್ ಬೆರೆಸಿ ಎರಡು ಕಂಟೈನರ್ಗಳ ಮೂಲಕ ಕಳಿಸಲಾಗಿತ್ತು. ಒಂದು ಕಂಟೈನರ್ ನಲ್ಲಿ 1,999.58 ಕೆ.ಜಿ ಮತ್ತೊಂದರಲ್ಲಿ 988.64 ಕೆ.ಜಿ ಹೆರಾಯಿನ್ ಇಡಲಾಗಿತ್ತು. ಗಾಂಧಿನಗರದ Central Forensic Science Laboratory ನಲ್ಲಿ ಸ್ಯಾಂಪಲ್ ಪರಿಶೀಲಿಸಿದಾಗ ಉತ್ತಮ ಗುಣಮಟ್ಟದ ಹೆರಾಯಿನ್ ಇರುವುದು ದೃಢಪಟ್ಟಿದೆ. ಪ್ರತಿ ಕೆ.ಜಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 7 ಕೋಟಿ ರು ನಷ್ಟಿದೆ ಎಂದು ಅಂದಾಜಿಸಲಾಗಿದೆ.
ಅಫ್ಘಾನಿಸ್ತಾನದ ನಂಗರ್ ಹಾರ್, ಶೆರ್ಝಾದ್, ಅಂಚಿನ್ ಪ್ರದೇಶಗಳಲ್ಲಿ ಬೇಬಿ ಪೌಡರ್ ತಯಾರಿಸಲು ಬಳಸುವ ಟಾಲ್ಕ್ ಬಳಕೆಯನ್ನು 2015ರಲ್ಲಿ ನಿಷೇಧಿಸಲಾಗಿತ್ತು. ಪ್ರತಿ ಟನ್ನಿಗೆ ಸುಮಾರು 10 ರಿಂದ 12 ಡಾಲರ್ ನಂತೆ ಇದಕ್ಕೆ ಆಗ ಬೆಲೆ ಕಟ್ಟಲಾಗಿತ್ತು. ಈಗ ತಾಲಿಬಾನಿ ಸರ್ಕಾರದಲ್ಲಿ ಅಕ್ರಮವಾಗಿ ಟಾಲ್ಕ್ ಜೊತೆ ಹೆರಾಯಿನ್ ಬೆರೆಸಿ ಭಾರತಕ್ಕೆ ಕಳಿಸಲಾಗುತ್ತಿದೆ ಎಂಬ ಅಂಶ ಪತ್ತೆಯಾಗಿದೆ.
ಅಫ್ಘಾನಿಸ್ತಾನ ಕಂದಹಾರ್ ಮೂಲದ ಸಂಸ್ಥೆಯಿಂದ ಗುಜರಾತ್ ಬಂದರಿಗೆ ಇರಾನ್ ಬಂದರ್ ಅಬ್ಬಾಸ್ ಮೂಲಕ ತಲುಪಿತ್ತು. ಮಂದ್ರಾ ಬಂದರಿನಲ್ಲಿ ವಶಪಡಿಸಿಕೊಂಡ ಬಳಿಕ ಕಂಟೈನರ್ ಪರಿಶೀಲಿಸಿದಾಗ ವಿಜಯವಾಡದ ಖಾಸಗಿ ಕಂಪನಿಯೊಂದರ ವಿಳಾಸ ಪತ್ತೆಯಾಗಿತ್ತು. ಆ ಕಂಪನಿಯ ಜಿಎಸ್ಟಿ ನಂಬರ್ ನಮೂದಿಸಲಾಗಿತ್ತು. ವಿಜಯವಾಡದ ಸತ್ಯನಾರಾಯಣಪುರಂನ ಗದಿಯಾರ್ಮವಾರಿ ರಸ್ತೆಯಲ್ಲಿರುವ ಸಂಸ್ಥೆಯ ವಿಳಾಸ ಪತ್ತೆಯಾಗಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ ಪರಿಶೀಲಿಸಲು ಸೂಚಿಸಿದ್ದರು. ವಿಜಯವಾಡದ ಪೊಲೀಸ್ ಆಯುಕ್ತ ಬಿ ಶ್ರೀನಿವಾಸುಲು ಈ ಬಗ್ಗೆ ತನಿಖೆ ಕೈಗೊಂಡು ಮಾಹಿತಿ ಹಂಚಿಕೊಂಡಿದ್ದಾರೆ. ಚೆನ್ನೈ ನಿವಾಸಿಯಾದ ಗೋವಿಂದರಾಜು ದುರ್ಗಾ ಪೂರ್ಣ ವೈಶಾಲಿ ಎಂಬುವರ ಹೆಸರಿನಲ್ಲಿ ಜಿಎಸ್ಟಿ ನೋಂದಣಿಯಾಗಿದೆ. ಆಗಸ್ಟ್ 2020ರಲ್ಲಿ ಜಿಎಸ್ಟಿ ನೋಂದಣಿಯಾಗಿದ್ದು, ಸತ್ಯನಾರಾಯಣಪುರಂನ D No 23-14-16 ಎಂಬ ವಿಳಾಸದಲ್ಲಿದೆ. ವಿದೇಶಿ ಸಂಸ್ಥೆ ವಹಿವಾಟು ನಡೆಸಲು ಬೇಕಾದ ಅನುಮತಿಯನ್ನು ಸಂಬಂಧಪಟ್ಟ ನಿರ್ದೇಶನಾಲಯದಿಂದ ವೈಶಾಲಿ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ, ಟಾಲ್ಕಂ ಜೊತೆ ಬೆರೆತ ಹೆರಾಯಿನ್ ಪೌಡರ್ ವಿಜಯವಾಡದ ಬದಲಿಗೆ ದೆಹಲಿಗೆ ತಲುಪಬೇಕಿತ್ತು ಎಂದು ನಂತರ ತಿಳಿದು ಬಂದಿದೆ.
ಜಿಎಸ್ಟಿ ನಂಬರ್ ಮೂಲಕ ಸಂಸ್ಥೆಯನ್ನು ತಲುಪಿದರೂ ಪ್ರಶ್ನೆ ಮಾಡಲು ಯಾರೂ ಇಲ್ಲದಂತಾಗಿದೆ. ವೈಶಾಲಿ ಪತಿ ಸುಧಾಕರ್ ಅವರ ಸಂಪರ್ಕ ಸಂಖ್ಯೆ ಜಿಎಸ್ಟಿ ಜೊತೆ ಸೇರಿಸಲಾಗಿದೆ. ಆದರೆ ಇಬ್ಬರು ಚೆನ್ನೈನ ಕೊಳಪಾಕಂನ ಅಪಾರ್ಟ್ಮೆಂಟ್ ನಲ್ಲಿ ಕಳೆದ 8 ವರ್ಷದಿಂದ ವಾಸಿಸುತ್ತಿದ್ದಾರೆ. ಸಂಸ್ಥೆ ಹೆಸರನ್ನು ಅಕ್ರಮವಾಗಿ ಬಳಸಲಾಗಿದೆ, ಕಳೆದ 7 ವರ್ಷಗಳಿಂದ ಸಂಸ್ಥೆ ಬಾಗಿಲು ಮುಚ್ಚಿದೆ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ವೈಶಾಲಿ ಸದ್ಯಕ್ಕೆ ವಿಚಾರಣೆ ನಡೆಸಲು DRI ತನಿಖಾಧಿಕಾರಿ ಮುಂದಾಗಿದ್ದಾರೆ. ಆದರೆ, ಆಕೆ ಪತಿ ಸುಧಾಕರ್ ಸುಳಿವು ಪತ್ತೆಯಿಲ್ಲ. ಇದೇ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಲಾಯಿತು ಎಂಬುದರಿಂದ ಹಿಡಿದು, ದೆಹಲಿಯ ಸಂಸ್ಥೆ ಬಗ್ಗೆ ಕೂಡಾ ಹೆಚ್ಚಿನ ಮಾಹಿತಿ ಕಲೆಹಾಕುವತ್ತ ತನಿಖೆ ಸಾಗಿದೆ.