ನೋಟು ಬ್ಯಾನ್: ತನಿಖಾ ಸಮಿತಿಯಿದ ಪ್ರಧಾನಿ ವಿಚಾರಣೆ?
ನವದೆಹಲಿ, ಜ. 9: ಅಪನಗದೀಕರಣದ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಂಸದೀಯ ಸಮಿತಿಯಾದ ಸಾರ್ವಜನಿಕ ಲೆಕ್ಕಾಚಾರ ಸಮಿತಿ (ಪಿಎಸಿ) ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗಿ ವಿವರಣೆ ನೀಡುವ ಪ್ರಮೇಯ ಉದ್ಭವವಾಗಿದೆ.
ಅಪನಗದೀಕರಣದ ಸಾರ್ವಜನಿಕರು ಅನುಭವಿಸಿದ ಯಾತನೆಗಳ ಹಿನ್ನೆಲೆಯಲ್ಲಿ ಸಂಸದೀಯ ಸಮಿತಿಯಾದ ಪಿಎಸಿ, ಈ ಪ್ರಕರಣದ ವಿಚಾರಣೆ ಆರಂಭಿಸಿದೆ. ಅದರಂತೆ, ಜ. 20ರಂದು ತನ್ನ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಸಮಿತಿ ಸೂಚನೆ ರವಾನಿಸಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹತ್ತಾರು ಪುಟಗಳ ಪ್ರಶ್ನಾವಳಿಗಳನ್ನು ಊರ್ಜಿತ್ ಪಟೇಲ್ ಗೆ ಕಳುಹಿಸಿರುವ ಸಮಿತಿಯು, ಅವೆಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ, ವಿಚಾರಣೆ ವೇಳೆ ತರುವಂತೆ ಹೇಳಿದೆ.
ಅದರಂತೆ, ಜ. 20ರಂದು ಊರ್ಜಿತ್ ಪಟೇಲ್ ಅವರು ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಅವರೊಂದಿಗೆ, ಕೇಂದ್ರ ಹಣಕಾಸು ಇಲಾಖೆಯ ಕಾರ್ಯದರ್ಶಿ ಅಶೋಕ್ ಲಾವಾಸಾ ಹಾಗೂ ವಿತ್ತೀಯ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಕೂಡಾ ವಿಚಾರಣೆಗೆ ಹಾಜರಾಗಲಿದ್ದಾರೆ. ಆದರೆ, ಈ ಮೂವರೂ ನೀಡುವ ವಿವರಣೆಗಳು ಸಮಿತಿಗೆ ಸಮಾಧಾನ ತರಲಿಲ್ಲವಾದರೆ, ಸಮಿತಿಯು ಪ್ರಧಾನಿ ಮೋದಿಯವರನ್ನು ವಿಚಾರಣೆಗೆ ಕರೆಯಬಹುದಾಗಿದೆ.
ಈ ಬಗ್ಗೆ ವಿವರಣೆ ನೀಡಿದ ಪಿಎಸಿ ಮುಖ್ಯಸ್ಥ ಪಿಎಸಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ವಿ. ಥಾಮಸ್, "ಅಪನಗದೀಕರಣ ವಿಚಾರಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸಲು ಸಮಿತಿಗೆ ಅಧಿಕಾರವಿದೆ. ಈ ನಿಟ್ಟಿನಲ್ಲಿ ನಾವು ಪ್ರಧಾನಿಯವರನ್ನೂ ವಿಚಾರಣೆಗೊಳಪಡಿಸಬಹುದಾಗಿದೆ. ಆದರೆ, ಜ. 20ರಂದು ನಡೆಯಲಿರುವ ವಿಚಾರಣೆ ಮೇಲೆ ಅದು ಅವಲಂಬಿತ'' ಎಂದಿದ್ದಾರೆ.