ಪಳನಿಗೆ ಬಹುಮತ: ಪನ್ನೀರ್ ಗೆ ನಿರಾಸೆ; ಸೋತರೂ ಗೆದ್ದ ಶಶಿಕಲಾ
ಡಿಎಂಕೆ ಗದ್ದಲದ ನಡುವೆ ಧ್ವನಿಮತದ ಬಹುಮತದ ಅಂಗೀಕಾರ ಪಡೆದ ಪಳನಿ ಸ್ವಾಮಿ; ತಮಿಳುನಾಡು ಸರ್ಕಾರ ಸ್ಥಿರ
ಚೆನ್ನೈ, ಫೆಬ್ರವರಿ 18: ಹದಿನೈದು ದಿನಗಳಿಂದ ನಡೆಯುತ್ತಿದ್ದ ಎಐಎಡಿಎಂಕೆ ಪಕ್ಷದ ಸರ್ಕಾರ ರಚನೆ ಹೈ ಡ್ರಾಮಕ್ಕೆ ಕೊನೆಗೂ ತೆರೆಬಿದ್ದಿದೆ. ಅಕ್ರಮ ಆಸ್ತಿಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪಕ್ಷದ ನಾಯಕಿ ಶಶಿಕಲಾ ಅವರ ಅನುಯಾಯಿ ಪಳನಿ ಸ್ವಾಮಿಯವರು ಶನಿವಾರ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಾಪದ ವೇಳೆ ಡಿಎಂಕೆ ಪಕ್ಷದ ಶಾಸಕರು ಗದ್ದಲೆ ಎಬ್ಬಿಸಿದ್ದರಿಂದಾಗಿ ಅವರನ್ನು ಸ್ಪೀಕರ್ ಧನರಾಜ್ ಕಲಾಪದಿಂದ ಉಚ್ಛಾಟನೆ ಮಾಡಿದರು. ಇದರಿಂದ ಸದನದ ಬಲ ಇಳಿಮುಖವಾಗಿದ್ದರಿಂದ ಪಳನಿಯವರಿಗೆ ತಮ್ಮ ಬಹುಮತ ಸಾಬೀತುಪಡಿಸಲು 77 ಶಾಸಕರ ಬೆಂಬಲ ಬೇಕಾಯ್ತು. ಅದಾಗಲೇ ಅವರ ಕಡೆ, 117 ಎಐಎಡಿಎಂಕೆ ಶಾಸಕರು ಇದ್ದ ಹಿನ್ನೆಲೆಯಲ್ಲಿ ಅವರು ಸುಲಭವಾಗಿ ಬಹುಮತ ಸಾಬೀತುಪಡಿಸಿದರು.
ಡಿಎಂಕೆ ಶಾಸಕರ ಉಚ್ಛಾಟನೆ ನಂತರ, ತಮಿಳುನಾಡು ಸರ್ಕಾರದ ಕಾರ್ಯದರ್ಶಿ ಗಿರಿಜಾ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿದ್ದು, ಡಿಎಂಕೆ ಸದಸ್ಯರು ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಾಜರಾಗಿರುವ ಶಾಸಕರ ಸಂಖ್ಯೆ ಇಳಿಮುಖವಾಗಿರುವುದರಿಂದ ಬಹುಮತ ಸಾಬೀತುಪಡಿಸಲು ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿಯವರು 77 ಶಾಸಕರ ಬೆಂಬಲ ತೋರಿಸಿದರೂ ಸಾಕು ಎಂದು ವಿವರಿಸಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಡಿಎಂಕೆ ಶಾಸಕರ ಉಚ್ಛಾಟನೆಗೂ ಮೊದಲು ಅವರು ಬಹುಮತ ಗಳಿಸಲು 117 ಶಾಸಕರ ಬೆಂಬಲ ಸಾಬೀತುಪಡಿಸಬೇಕಿತ್ತು.
ಬೆಳಗ್ಗೆ ಸದನದ ವೇಳೆ, ಡಿಎಂಕೆ ಸದಸ್ಯರು ಇತ್ತೀಚೆಗೆ ಎಐಎಡಿಎಂಕೆ ನಾಯಕಿ ಶಶಿಕಲಾ ಅವರು ಬೆಂಬಲಿಗರ ರೆಸಾರ್ಟ್ ರಾಜಕಾರಣದ ಬಗ್ಗೆ ಚರ್ಚೆ ಹಾಗೂ ಬಹುಮತ ಸಾಬೀತಿಗೆ ಗೌಪ್ಯ ಮತದಾನಕ್ಕಾಗಿ ಆಗ್ರಹಿಸಿ ಧರಣಿ ನಡೆಸಿದರು.
ಇದಕ್ಕೆ ಸ್ಪೀಕರ್ ಒಪ್ಪದಿದ್ದಾಗ, ತಮ್ಮ ಆಸನಗಳ ಮುಂದಿದ್ದ ಮೈಕುಗಳನ್ನು ಕಿತ್ತು ಹಾಕಿ, ಮೇಜುಗಳನ್ನು ಉರುಳಿ ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ, ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಗಿತ್ತು. ಆನಂತರ ನಡೆದ ಕಲಾಪದಲ್ಲಿ ಸ್ಪೀಕರ್ ಗೆ ಘೆರಾವ್ ಹಾಕಿ ಘೋಷಣೆಗಳನ್ನು ಕೂಗಿದರು. ಇದರಿಂದ ಭೀತಿಗೊಂಡ ಸ್ಪೀಕರ್ ಬಿಗಿಭದ್ರತೆ ನಡುವೆ ತಮ್ಮ ಕೊಠಡಿಗೆ ನಿರ್ಗಮಿಸಿದರು.
ಆಗ, ಸ್ಪೀಕರ್ ಮೇಜನ್ನು ಉರುಳಿಸಿ, ಅಲ್ಲಿದ ಮೈಕು ಕಿತ್ತು ಹಾಕಿದ ಡಿಎಂಕೆ ಕಾರ್ಯಕರ್ತರಲ್ಲಿ ಒಂದಿಬ್ಬರು ಸ್ಪೀಕರ್ ಕುರ್ಚಿಯ ಮೇಲೆ ಕುಳಿತು ಘೋಷಣೆ ಕೂಗಿ ಸಭೆಯ ಶಿಷ್ಟಾಚಾರಕ್ಕೆ ಧಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಸದನದಲ್ದಿದ್ದ ಎಲ್ಲಾ 88 ಶಾಸಕರನ್ನು ಸದನದ ಕಲಾಪದಿಂದ ಉಚ್ಛಾಟಿಸುವ ನಿರ್ಧಾರ ಕೈಗೊಂಡರು.
ಇದಕ್ಕೂ ಮುನ್ನ, ಕಲಾಪ ಆರಂಭವಾದಾಗ, ಡಿಎಂಕೆ ಪಕ್ಷದ ಶಾಸಕರು ತಮ್ಮ ನಾಯಕ ಸ್ಟಾಲಿನ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಹುಮತ ಸಾಬೀತಿಗೆ ಗೌಪ್ಯ ಮತದಾನ ನಡೆಸಬೇಕು ಹಾಗೂ ಅದಕ್ಕೂ ಮುನ್ನ ಚರ್ಚೆಗೆ ಅವಕಾಶ ನೀಡಬೇಕೆಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.
ಆದರೆ, ಇದಕ್ಕೆ ಸ್ಪೀಕರ್ ಒಪ್ಪದೇ ಬಹುಮತ ಸಾಬೀತು ಪ್ರಕ್ರಿಯೆಗೆ ಚಾಲನೆ ನೀಡಿದರು. ಇದು ಡಿಎಂಕೆ ಶಾಸಕರನ್ನು ಕೆರಳಿಸಿತು. ಅವರು ಗೌಪ್ಯ ಮತದಾನಕ್ಕೆ ಆಗ್ರಹಿಸುತ್ತಿದ್ದರೂ, ಸ್ಪೀಕರ್ ಅವರು ಮೊದಲಿಗೆ ವಿಧಾನಸಭೆಗೆ ಹಾಜರಾಗಿರುವ ಶಾಸಕರ ಲೆಕ್ಕ ಆರಂಭಿಸಿದರು. ಆರು ಹಂತಗಳಲ್ಲಿ ಮತದಾರರನ್ನು ಎಣಿಕೆ ಕಾರ್ಯ ನಡೆಸಲು ಶುರು ಮಾಡಿದರು.
ಇದರ ಮೊದಲ ಹಂತದಲ್ಲಿ 38 ಶಾಸಕರು ಪಳನಿ ಸ್ವಾಮಿಯವರ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಹೀಗೆ, ಬಹಿರಂಗವಾಗಿ ಮತದಾನ ನಡೆಯುತ್ತಿರುವುದನ್ನು ಆಕ್ಷೇಪಿಸಿದ ಡಿಎಂಕೆ ಸದಸ್ಯರು, ಸದನದಲ್ಲಿ ಗದ್ದಲ ನಡೆಸಿದರು. ಸದನದ ಆಸನಗಳ ಮುಂದಿದ್ದ ಮೈಕು, ಕುರ್ಚಿ, ಮೇಜುಗಳನ್ನು ಉರುಳಿದಿ ದಾಂಧಲೆ ನಡೆಸಿದರು. ಈ ಗದ್ದಲ ವಿಪರೀತಕ್ಕೆ ಹೋಗಿದ್ದರಿಂದಾಗಿ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಗಿದೆ.
ಇದಕ್ಕೂ ಮುನ್ನ, ಶನಿವಾರ ಬೆಳಗ್ಗೆ ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿಯವರ ಸರ್ಕಾರದ ಬಹುಮತ ಪರೀಕ್ಷೆ ಬೆಳಗ್ಗೆ 11:30 ಗಂಟೆಗೆ ಆರಂಭವಾಗಿತ್ತು. ತಲೆ ಎಣಿಸುವ ಮೂಲಕ ಮತಗಣನೆಗೆ ಸ್ಪೀಕರ್ ಮುಂದಾಗಿದ್ದರು. ಮೊದಲ ಹಂತದಲ್ಲಿ 38 ಶಾಸಕರು ಪಳನಿ ಸ್ವಾಮಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಇಂದಿನ ಮತದಾನ ಪ್ರಕ್ರಿಯೆಗೆ ಒಟ್ಟು 230 ಶಾಸಕರು ಆಗಮಿಸಿದ್ದರು.
ಬಹುಮತ ಸಾಬೀತು ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10: 50ಕ್ಕೆ ವಿಧಾನಸಭೆಗೆ ಪಳನಿ ಸ್ವಾಮಿಯವರು ತಮ್ಮ ಸರ್ಕಾರದ ಸಚಿವರು, ಶಾಸಕರೊಂದಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅವರ ಬೆನ್ನಲ್ಲೇ ಗೋಲ್ಡನ್ ಬೇ ರೆಸಾರ್ಸ್ ನಲ್ಲಿದ್ದ ಎಐಎಡಿಎಂಕೆ ನಾಯಕಿ ಶಶಿಕಲಾ ಅವರ ಬೆಂಬಲಿತ ಶಾಸಕರೂ ವಿಶೇಷ ಬಸ್ ನಲ್ಲಿ ವಿಧಾನಸಭೆಗೆ ಬಂದಿದ್ದರು.[ಶಶಿಕಲಾ ಮೂರುಬಾರಿ ಕುಟ್ಟಿದ್ದರ ಹಿಂದೆ ಸ್ವಾರಸ್ಯಕರ ಕಥೆ]
ಅದರ ನಂತರ, ತಮ್ಮ ಬೆಂಬಲಿತ ಶಾಸಕರ ಪಡೆಯೊಂದಿಗೆ ಎಐಎಡಿಎಂಕೆಯ ಉಚ್ಛಾಟಿತ ನಾಯಕ ಪನ್ನೀರ್ ಸೆಲ್ವಂ ಕೂಡ ವಿಧಾನಸಭೆಯ ಮೊಗಸಾಲೆಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೆಲ್ವಂ, ತಮಗೆ 40 ಶಾಸಕರ ಬೆಂಬಲವಿದ್ದು, ಪಳನಿ ಸರ್ಕಾರ ಬಹುಮತದ ಕೊರತೆಯಿಂದ ಅಧಿಕಾರ ಕಳೆದುಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭೆ ಪ್ರವೇಶಿಸಿದ ಮೇಲೆ ಸ್ಪೀಕರ್ ಗೆ ಬ್ಯಾಲೆಟ್ ಗಳಲ್ಲಿ ಗೌಪ್ಯ ಮತದಾನ ಮಾಡಲು ಅನುಮತಿ ನೀಡಬೇಕೆಂದು ಡಿಎಂಕೆ ನಾಯಕ ಸ್ಟಾಲಿನ್ ಕೋರಿದ್ದರು. ಆದರೆ, ಅವರ ಕೋರಿಕೆಯನ್ನು ತಿರಸ್ಕರಿಸಿದ ಕಿಟಕಿ, ಬಾಗಿಲು ಮುಚ್ಚಿದ ವಿಧಾನಸಭೆಯಲ್ಲಿ ಮತದಾನ ನಡೆಸಲು ಅನುಮತಿ ಕೊಟ್ಟರು.
ಏತನ್ಮಧ್ಯೆ, ಮತದಾನಕ್ಕೂ ಮುನ್ನ ಚರ್ಚೆಗೆ ಅವಕಾಶ ನೀಡದ್ದಕ್ಕೆ ಪ್ರತಿಪಕ್ಷಗಳ ಆಕ್ಷೇಪವೆತ್ತಿದ್ದವು.[ತಮಿಳುನಾಡಿನ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ವ್ಯಕ್ತಿಚಿತ್ರ]
ಬಹುಮತಕ್ಕೆ ಎಷ್ಟು ಬೆಂಬಲ ಬೇಕು? : ತಮಿಳುನಾಡು ವಿಧಾನಸಭೆಯಲ್ಲಿ 234 ಸ್ಥಾನಗಳಿದ್ದು ಇವುಗಳಲ್ಲಿ ಕನಿಷ್ಠ ಅರ್ಧದಷ್ಟಾದರೂ ಅಂದರೆ 117 ಶಾಸಕರ ಬೆಂಬಲವನ್ನು ಅವರು ತೋರಿಸಬೇಕಿದೆ.
ಸದನದಲ್ಲಿಎಐಎಡಿಎಂಕೆಗೆ ಒಟ್ಟು 134 ಸ್ಥಾನಗಳ ಬಲವಿದೆ. ಸದ್ಯಕ್ಕೀಗ, ಪಳನಿ ಬೆನ್ನ ಹಿಂದೆ ಎಐಎಡಿಎಂಕೆಯ 122 ಶಾಸಕರಿದ್ದಾರೆ. ಅಂದರೆ, ಬಹುಮತ ಸಾಬೀತಿಗೆ ಬೇಕಿರುವ ಅವಶ್ಯ ಸಂಖ್ಯೆಗಿಂತ ಐದು ಶಾಸಕರು ಹೆಚ್ಚಿದ್ದಾರೆ.
ಆದರೆ, ಪಳನಿ ಕಡೆಗಿರುವ 117 ಶಾಸಕರಲ್ಲಿ ಶುಕ್ರವಾರ ಬೆಳಗ್ಗೆ ಹೊತ್ತಿಗೆ ಒಬ್ಬ ಶಾಸಕ ಬೆಂಬಲ ಹಿಂಪಡೆದಿರುವ ಸುದ್ದಿಯಿದ್ದು, ಇನ್ನು ನಾಲ್ಕೈದು ಜನರು ಪಳನಿಗೆ ಕೊನೇ ಕ್ಷಣದಲ್ಲಿ ಕೈ ಕೊಟ್ಟರೆ ಅದು ಪಳನಿಯವರ ಸಿಎಂ ಗದ್ದುಗೆಯನ್ನು ಅಲುಗಾಡಿಸುವುದರಲ್ಲಿ ಸಂಶಯವೇ ಇಲ್ಲ.
ಇನ್ನು, ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ (93 ಸ್ಥಾನ ಹೊಂದಿದೆ) ಪಳನಿ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿದೆ. ಅತ್ತ, 9 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಯಾರ ಪರವಾಗಿ ಮತ ಚಲಾಯಿಸುತ್ತದೆ ಎಂಬುದಿನ್ನೂ ನಿರ್ಧಾರವಾಗಿಲ್ಲ.