ವೈದ್ಯನ ಕ್ರಿಕೆಟ್ ಹುಚ್ಚಿಗೆ ಯುವಕನ ಪ್ರಾಣ ಹಾರಿಹೋಯ್ತು
ನವದೆಹಲಿ, ಏಪ್ರಿಲ್, 03: ಅತ್ತ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದರೆ ಇತ್ತ ಚಿಕಿತ್ಸೆ ಸಿಗದೆ ಯುವಕನೊಬ್ಬನ ಪ್ರಾಣ ಹಾರಿಹೋಗಿತ್ತು. ಮಥುರಾದಲ್ಲಿ ಇಂಥದ್ದೊಂದು ದುರ್ಘಟನೆ ನಡೆದು ಹೋಗಿದೆ. ಹಲ್ಲೆಗೆ ಒಳಗಾಗಿದ್ದ ಯುವಕನೊಬ್ಬ ವೈದ್ಯರ ಕ್ರಿಕೆಟ್ ಹುಚ್ಚಿಗೆ ಪ್ರಾಣ ಕಳೆದುಕೊಂಡಿದ್ದಾನೆ.
ಸೋನು ಎಂಬಾತನನ ಪ್ರಾಣ ವೈದ್ಯನ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ಸೋನು ಮತ್ತು ಮೋನು ಎಂಬ ಇಬ್ಬರು ಯುವಕರ ಮೇಲೆ ಅಲ್ಲಿನ ಸ್ಥಳೀಯರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿತ್ತು. ಗಂಭೀರ ಗಾಯಗೊಂಡಿದ್ದ ಸೋನು ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.[ಟೀಂ ಇಂಡಿಯಾಗೆ ವಿಲನ್ ಆದ ಆ ಎರಡು ನೋಬಾಲ್ಸ್]
ಸೋನು ನನ್ನು ಆಸ್ಪತ್ರೆಗೆ ಸೇರಿಸಿದ ವೇಳೆಯೇ ಭಾರತ-ವಿಂಡೀಸ್ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಕೆಲ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರೂ ವೈದ್ಯರು ಮಾತ್ರ ಪರೀಕ್ಷೆ ನಡೆಸುವ ಗೋಜಿಗೆ ಹೋಗಿಲ್ಲ. ಪಂದ್ಯ ಮುಗಿಯುವ ವೇಳೆಗೆ ಯುವಕ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ.[ಟೀಂ ಇಂಡಿಯಾ ಸೋಲಿಗೆ ಹುಚ್ಚು ಅಭಿಮಾನಿ ಬಲಿ!]
ಇದಾದ ಮೇಲೆ ಯುವಕನ ಪಾಲಕರು ಮತ್ತು ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಈ ಬಗ್ಗೆ ಪೊಲೀಸರು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿರ್ಲಕ್ಷ್ಯ ಮಾಡಿದ ವೈದ್ಯ, ಡಾ. ಧರ್ಮವೀರ್, ಡಾ. ಸುಶೀಲ್ ಹಾಗೂ ನರ್ಸ್ ಪೂನಮ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.