ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ?
ಹೈದರಾಬಾದ್, ಸೆಪ್ಟೆಂಬರ್ 19: ತೆಲಂಗಾಣದಲ್ಲಿ ನಡೆದ ಮರ್ಯಾದಾ ಹತ್ಯೆಯ ಅಮಾನುಷ ಕೃತ್ಯದ ಆರೋಪಿಗಳನ್ನು ಬಂಧಿಸಿದ ಬಳಿಕ ಘಟನೆಗೆ ಸಂಬಂಧಿಸಿದ ಆಘಾತಕಾರಿ ಮಾಹಿತಿಗಳು ಹೊರಬರುತ್ತಿವೆ.
ತಂದೆಯೇ ಮಗಳ ಸುಂದರ ಬದುಕನ್ನು ಛಿದ್ರಗೊಳಿಸಿದ ಪ್ರಕರಣ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಈ ಹತ್ಯೆಯ ಯೋಜನೆ ರೂಪುಗೊಂಡ ಬಗೆ ಮತ್ತು ಅದರ ಸುತ್ತಲಿನ ಘಟನೆಗಳ ಕುರಿತಾದ ತನಿಖೆ ಮತ್ತಷ್ಟು ಬೆಚ್ಚಿಬೀಳಿಸುತ್ತಿರುವ ಅಂಶಗಳನ್ನು ಬಹಿರಂಗಪಡಿಸುತ್ತಿವೆ.
ಸ್ಫೋಟಕ ಮಾಹಿತಿ: ಪ್ರಣಯ್ ಹತ್ಯೆಗೆ 4 ಬಾರಿ ನಡೆದಿತ್ತು ಸಂಚು!
ಅವುಗಳಲ್ಲಿ ಎರಡು ಘಟನೆಗಳು ಮನಕಲಕುವಂತಿವೆ ಮತ್ತು ಪ್ರಕರಣಕ್ಕೆ ಸಿನಿಮೀಯ ಸ್ಪರ್ಶ ನೀಡಿವೆ. ಒಂದು, ಅಮೃತಾ ತನ್ನ ತಾಯಿಗೆ ಮಾಡುತ್ತಿದ್ದ ಫೋನ್ ಕರೆಯೇ ಆಕೆಯ ಪತಿ ಪ್ರಣಯ್ ಹತ್ಯೆಗೆ ಸಂಚು ರೂಪಿಸಲು ನೆರವಾಗಿದ್ದು, ಮತ್ತೊಂದು ಕೊಲೆಯ ಪ್ರಕರಣದಿಂದ ತಪ್ಪಿಸಿಕೊಳ್ಳಲು ಆರೋಪಿಗಳು 'ದೃಶ್ಯಂ' ಸಿನಿಮಾದ ಕಥಾನಕವನ್ನು ಸೃಷ್ಟಿಸಲು ಹೋಗಿದ್ದು.
ಅಮ್ಮನೊಂದಿಗೆ ಮಾತುಕತೆ
ಅಮೃತಾ, ತಮ್ಮ ಮನೆಯವರ ವಿರೋಧದ ನಡುವೆಯೇ ಜನವರಿಯಲ್ಲಿ ಪ್ರಣಯ್ ಜತೆ ಮದುವೆಯಾಗಿದ್ದರು. ಆದರೆ, ಆಕೆ ಗರ್ಭಿಣಿಯಾಗಿರುವುದು ತಿಳಿದ ಬಳಿಕ ಅಮ್ಮನ ಜತೆ ಫೋನ್ನಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದರು.
ತಾನು ಹೇಗಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬ ಮಾಹಿತಿಯನ್ನು ಅಮ್ಮನ ಜತೆ ಅಮೃತಾ ಹಂಚಿಕೊಳ್ಳುತ್ತಿದ್ದರು. ವಿಶ್ರಾಂತಿ ಪಡೆದುಕೊಳ್ಳಲು ಮತ್ತು ಸರಿಯಾದ ಸಮಯಕ್ಕೆ ಊಟ ಮಾಡುವಂತೆ ಅಮ್ಮ ಸಲಹೆ ನೀಡುತ್ತಿದ್ದರು. ಮಗಳಿಂದ ಶುಭವಾರ್ತೆಗಳನ್ನು ಪಡೆದುಕೊಳ್ಳುತ್ತಿದ್ದ ಅಮ್ಮ ಕೂಡ ಖುಷಿಯಾಗಿದ್ದರು. ತಮಗೆ ಮಗಳಿಂದ ದೊರೆತ ಎಲ್ಲ ಮಾಹಿತಿಯನ್ನು ಆ ಖುಷಿಯೊಂದಿಗೆ ಅಮೃತಾಳ ತಂದೆ ಮಾರುತಿ ರಾವ್ ಅವರಿಗೂ ರವಾನಿಸುತ್ತಿದ್ದರು.
ಆದರೆ, ಪ್ರಣಯ್ ಹತ್ಯೆಗೆ ಹಲವು ತಿಂಗಳಿನಿಂದ ಸಂಚು ರೂಪಿಸುತ್ತಿದ್ದ ಮಾರುತಿ ರಾವ್, ಪ್ರಣಯ್ ಎಲ್ಲೆಲ್ಲಿ ಓಡಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಅವರಿಗೆ ತಾನೇ ಒದಗಿಸುತ್ತಿದ್ದೇನೆ ಎಂಬುದು ಅಮೃತಾ ತಾಯಿಯ ಕಲ್ಪನೆಗೂ ಬಂದಿರಲಿಲ್ಲ.
'ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ'
ಆ ಕರೆಯೇ ಸಾವಿನ ಮುಹೂರ್ತ ಬರೆಯಿತು
ಅಮೃತಾ ತನ್ನ ಪಾಲಿನ ದುರದೃಷ್ಟಕರ ಕರೆಯನ್ನು ಕೊನೆಯ ಬಾರಿಗೆ ಮಾಡಿದ್ದು ಸೆ.13ರಂದು. ಅಂದು ಪ್ರಣಯ್ ಹತ್ಯೆಯಾದ ಗಣೇಶ ಚತುರ್ಥಿಯ ಹಿಂದಿನ ದಿನ. ಆ ದಿನ ಕರೆ ಮಾಡಿದ್ದ ಅಮೃತಾ, ತಾನು ಮತ್ತು ಪ್ರಣಯ್ ದೈನಂದಿನ ಚೆಕ್ಅಪ್ಗಾಗಿ ಜ್ಯೋತಿ ಆಸ್ಪತ್ರೆಗೆ ತೆರಳುತ್ತಿರುವುದಾಗಿ ತಿಳಿಸಿದ್ದರು. ಈ ಮಾಹಿತಿ ಅಮ್ಮನಿಂದ ಮಾರುತಿ ರಾವ್ಗೆ ರವಾನೆಯಾಗಿತ್ತು.
ಹಲವು ತಿಂಗಳಿನಿಂದ ಸದ್ದಿಲ್ಲದೆ ನಡೆದಿದ್ದ ತಣ್ಣನೆಯ ಕ್ರೌರ್ಯದ ಹತ್ಯೆಗೆ ಅಂದೇ ದಿನ ಮತ್ತು ಸ್ಥಳ ನಿಗದಿಯಾಯಿತು.
ಸುಪಾರಿ ಕಿಲ್ಲರ್ ಗಳಿಂದ ಪ್ರಣಯ್ ಹತ್ಯೆಗೆ ಸಂಚು ನಡೆದಿದ್ದು ಹೇಗೆ?
ದೃಶ್ಯ ಸಿನಿಮಾದ ಸೃಷ್ಟಿ
ಮರ್ಯಾದೆಗೇಡು ಹತ್ಯೆಯ ಪ್ರಮುಖ ಸಂಚುಕೋರ ಮಾರುತಿ ರಾವ್, ವಿವಿಧ ಭಾಷೆಗಳಲ್ಲಿ ರೀಮೇಕ್ ಆಗಿದ್ದ ಮಲಯಾಳಂನ 'ದೃಶ್ಯಂ' ಚಿತ್ರದ ನಾಯಕನಂತೆಯೇ ದೃಶ್ಯಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದ ಎನ್ನುವುದನ್ನು ನಲ್ಗೊಂಡ ಪೊಲಿಸ್ ವರಿಷ್ಠಾಧಿಕಾರಿ ಎ.ವಿ. ರಂಗನಾಥ್ ಹೇಳಿದ್ದಾರೆ.
ಅಮಾಯಕ ವ್ಯಕ್ತಿಯಂತೆ ನಟಿಸುತ್ತಿದ್ದ ಮಾರುತಿ ರಾವ್, ದೃಶ್ಯಂ ಸಿನಿಮಾದಂತೆಯೇ ಘಟನೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದ. ಸೆ.14ರಂದು ಕೊಲೆ ನಡೆಯುವ ಎರಡು ಗಂಟೆಗಳ ಮುಂಚೆಯಷ್ಟೇ ನಲ್ಗೊಂಡದ ಜಂಟಿ ಕಲೆಕ್ಟರ್ ಕಚೇರಿಗೆ ತೆರಳಿ ಅಧಿಕಾರಿಗಳನ್ನು ಭೇಟಿ ಮಾಡಿದ್ದ. ಅಪರಾಧ ನಡೆದ ಸಂದರ್ಭದಲ್ಲಿ ತಾನು ಅಲ್ಲಿರಲಿಲ್ಲ ಎಂಬುದಕ್ಕೆ ಪುರಾವೆ ಸೃಷ್ಟಿಸುವುದು ಆತನ ಉದ್ದೇಶವಾಗಿತ್ತು. ಅದೇ ದಿನ ನಲ್ಗೊಂಡಕ್ಕೆ ತೆರಳುವ ವೇಳೆ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಆರ್ಡಿಒ ಅವರನ್ನು ಕಂಡು ತನ್ನ ವಾಹನದಿಂದ ಇಳಿದು ಗಣೇಶ ಚತುರ್ಥಿ ವಿಚಾರವಾಗಿ ಅವರೊಂದಿಗೆ ಮಾತನಾಡಿದ್ದ.
'ಪ್ರಣಯ್ಗೆ ನ್ಯಾಯ ದೊರಕಿಸಿ': ಫೇಸ್ಬುಕ್ನಲ್ಲಿ ಬೃಹತ್ ಅಭಿಯಾನ
ಆದರೂ ಸಾಕ್ಷ್ಯಗಳು ಸಿಕ್ಕವು
ಕೃತಕ ದೃಶ್ಯಗಳನ್ನು ಸೃಷ್ಟಿಸಲು ಮಾರುತಿ ರಾವ್ ಅಷ್ಟೆಲ್ಲ ಪ್ರಯತ್ನಿಸಿದ್ದರೂ, ಕೊಲೆಯಲ್ಲಿ ಅತನ ಪಾತ್ರ ಇರುವ ಬಗ್ಗೆ ನಾವು ತಾಂತ್ರಿಕ ಮತ್ತು ಇತರೆ ಪುರಾವೆಗಳನ್ನು ಸಂಗ್ರಹಿಸಿದ್ದೆವು ಎಂದು ಎಸ್ಪಿ ತಿಳಿಸಿದ್ದಾರೆ.
ಗಣೇಶ ಹಬ್ಬದಂದು ಪ್ರಣಯ್ ಮತ್ತು ಅಮೃತಾ ಆಸ್ಪತ್ರೆಗೆ ಹೋಗುವ ವಿಚಾರ ತಿಳಿಯುತ್ತಿದ್ದಂತೆಯೇ ಸುಪಾರಿ ಹಂತಕರಾದ ಅಬ್ದುಲ್ ಬಾರಿಗೆ ಮಾಹಿತಿ ರವಾನಿಸಿದ. ಬಾರಿ ಅದನ್ನು ಅಸ್ಗರ್ ಅಲಿಗೆ ತಿಳಿಸಿದ. ಅಲ್ಲಿಂದ ಸುಭಾಷ್ಗೆ ಮಾಹಿತಿ ರವಾನೆಯಾಯಿತು. ಎಲ್ಲವೂ ಚೆನ್ನಾಗಿದೆ ಎಂದು ಅಮೃತಾ ನಂಬುವಂತೆ ಮಾಡಿದ್ದ ಮಾರುತಿ ರಾವ್, ಹತ್ಯೆಯ ಸಂಚು ರೂಪಿಸಿದ.
ಪ್ರಣಯ್ ಹತ್ಯೆ ಭೇದಿಸಿದ ಪೊಲೀಸ್! ಕೊಲೆಗಾರನಿಗೆ 1 ಕೋಟಿ ರು. ಸುಪಾರಿ!
'ಶ್ರಮಜೀವಿ' ಮಾರುತಿ
ರೇಷನ್ ಡೀಲರ್ ಆಗಿ ಬದುಕು ಆರಂಭಿಸಿ, ಸಾಮಾನು ಚೀಲಗಳನ್ನು ಹೊತ್ತು ಕಷ್ಟಪಟ್ಟು ಈ ಹಂತಕ್ಕೆ ತಲುಪಿದ್ದನ್ನು ಮಾರುತಿ ರಾವ್ ಹೇಳಿಕೊಂಡಿದ್ದಾನೆ. ಆರಂಭದಲ್ಲಿ ಕಠಿಣ ಶ್ರಮ ವಹಿಸಿದ್ದರೂ, ಬಳಿಕ ವಂಚನೆ ಭೂಮಿ ಮಾರಾಟದಂತಹ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ರಂಗನಾಥ್ ಹೇಳಿದ್ದಾರೆ.
ನಲ್ಗೊಂಡ ಪೊಲೀಸರು ಅಲ್ಲಿನ ಕಲೆಕ್ಟರ್ಗೆ ಮಾರುತಿ ರಾವ್ ನಡೆಸಿರುವ ಭೂಮಿ ಮಾರಾಟ ವ್ಯವಹಾರಗಳನ್ನು ಹೊರತೆಗೆದು ಕ್ರಮ ತೆಗೆದುಕೊಳ್ಳುವಂತೆ ಮಾಹಿತಿ ನೀಡಿದ್ದರು.
ಕೆಲವು ಅಧಿಕಾರಿಗಳು ಆತನೊಂದಿಗೆ ಭಾಗಿಯಾಗಿದ್ದು ಎನ್ನುವುದು ಸತ್ಯ ಎಂದು ರಂಗನಾಥ್ ಹೇಳಿದ್ದಾರೆ.
ಪತಿಯನ್ನು ಕೊಂದಿದ್ದು ಜಾತಿಪದ್ಧತಿ: ಗರ್ಭಿಣಿ ಪತ್ನಿಯ ಭಾವುಕ ನುಡಿ
ಆರೋಪಿಗಳು ಯಾರು ಯಾರು?
ಮರ್ಯಾಲಗುಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಮಾರುತಿ ರಾವ್ ಮೊದಲನೆಯ ಆರೋಪಿ. ಹಂತಕ ಸುಭಾಷ್ ಶರ್ಮಾ ಎರಡನೆಯ ಆರೋಪಿ.
ಗುಜರಾತ್ ಮಾಜಿ ಗೃಹ ಸಚಿವ ಹರೆನ್ ಪಟೇಲ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಬಳಿಕ ಖುಲಾಸೆಗೊಂಡಿದ್ದ ಅಸ್ಗರ್ ಅಲಿ ಮೂರನೇ ಆರೋಪಿಯಾಗಿದ್ದಾನೆ.
ನಲ್ಗೊಂಡ ಮೂಲದ, ಹೈದರಾಬಾದ್ನ ಮಲಕಪೇಟೆ ನಿವಾಸಿ ಮೊಹಮದ್ ಬಾರಿ ನಾಲ್ಕನೆಯ ಆರೋಪಿ. ಈಗ 2011ರಿಂದಲೂ ಅಮೃತಾ ತಂದೆಗೆ ಪರಿಚಯವಿದ್ದು, ಅವರ ಭೂ ವಿವಾದಗಳನ್ನು ಬಗೆಹರಿಸಲು ನೆರವಾಗುತ್ತಿದ್ದ.
ಐದನೇ ಆರೋಪಿ ಅಬ್ದುಲ್ ಕರೀಂ ಮರ್ಯಾಲಗುಡದಲ್ಲಿ ಟ್ರಾನ್ಸ್ಪೋರ್ಟ್ ಆಪರೇಟರ್ ಆಗಿದ್ದಾನೆ. ಆರನೇ ಆರೋಪಿ ಶ್ರವಣ್ ಮಾರುತಿಯ ಸಂಬಂಧಿ. ಮಾರುತಿ ರಾವ್ನ ಚಾಲಕ ಶಿವ ಏಳನೇ ಆರೋಪಿಯಾಗಿದ್ದಾನೆ.
ಬಾರಿ ಮತ್ತು ಸುಭಾಷ್ ಶರ್ಮಾ ಪ್ರತ್ಯೇಕ ಅಪರಾಧಗಳಲ್ಲಿ ಜೈಲುಶಿಕ್ಷೆಗೆ ಗುರಿಯಾದಾಗ ರಾಜಮುಂಡ್ರಿಯಲ್ಲಿ ಭೇಟಿಯಾಗಿದ್ದರು.
ಈ ಕೊಲೆ ಆಗುತ್ತದೆ ಎನ್ನುವುದು ಶ್ರವಣ್ ಮತ್ತು ಶಿವ ಇಬ್ಬರಿಗೂ ತಿಳಿದಿತ್ತು ಎಂದು ಪೊಲೀಸರು ಹೇಳಿದ್ದಾರೆ.