ಉಗ್ರರ ಮೇಲೆ ಕಣ್ಣಿಡಲು ಸಿದ್ದುಗೆ ರಾಜನಾಥ್ ಸೂಚನೆ
ನವದೆಹಲಿ, ಮಾ. 24: ಉಗ್ರಗಾಮಿ ಚಟುವಟಿಕೆಗಳ ನಿಗಾ ಇಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಖಡಕ್ ಸೂಚನೆ ನೀಡಿದ್ದಾರೆ. ಭಾರತದ ಮೂರು ರಾಜ್ಯಗಳ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಉಗ್ರಗಾಮಿ ಚಟುವಟಿಕೆ ಕುರಿತು ನಿಗಾ ವಹಿಸಲು ಸೂಚಿಸಿದ್ದಾರೆ.
ಕರ್ನಾಟಕ, ತಮಿಳು ನಾಡು ಮತ್ತು ಮಧ್ಯ ಪ್ರದೇಶದ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಪತ್ರ ಬರೆದಿರುವ ಸಿಂಗ್, ಸಿಮಿ ಉಗ್ರ ಸಂಘಟನೆ ವಿಧ್ವಂಸಕ ಕೃತ್ಯಗಳ ಕುರಿತು ವಿಶೇಷ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.[ಬೆಂಗಳೂರು ಸ್ಫೋಟದ ಆರೋಪಿಗಳು ಎಲ್ಲಿ?]
2014ರ ಮೇ ಮತ್ತು ಡಿಸೆಂಬರ್ ನಲ್ಲಿ ಬೆಂಗಳೂರು ಮತ್ತು ಚೆನ್ನೈ ನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಸಿಂಗ್ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಈ ದಾಳಿಗಳ ಹಿಂದೆ ಮಧ್ಯ ಪ್ರದೇಶದ ಖಾಂಡ್ವಾ ಜೈಲಿನಿಂದ ತಪ್ಪಿಸಿಕೊಂಡಿರುವ ಸಿಮಿ ಸಂಘಟನೆ ಉಗ್ರರ ಕೈವಾಡವಿರುವ ಮಾಹಿತಿ ಲಭ್ಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಬೆಂಗಳೂರು ಡಿಸೆಂಬರ್ ಸ್ಫೋಟದ ಆರೋಪಿಗಳನ್ನು ಇನ್ನು ಬಂಧಿಸಬೇಕಾಗಿದೆ. ಅವರನ್ನು ಬಂಧಿಸಿ ಅಪರಾಧ ಚಟುವಟಿಕೆಯಲ್ಲಿ ತೊಡಗುವವರಿಗೆ ಸ್ಪಷ್ಟ ಸಂದೇಶ ರವಾನಿಸಬೇಕಿದೆ. ಮುಂದೆ ಇಂಥ ಅಹಿತಕರ ಘಟನೆ ನಡೆಯದಂತೆ ತಡೆಯಲು ಆರೋಪಿಗಳನ್ನು ಬಂಧಿಸುವುದು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.[ಇವರೇನು ದಾನಕ್ಕೆ ಡೀಸೆಲ್ ಸ್ಮಗ್ಲಿಂಗ್ ಮಾಡ್ತಾರೋ?]
ತನಿಖೆ ಯಾವ ಹಂತದಲ್ಲಿದೆ? ಎಷ್ಟು ಪ್ರಗತಿಯಾಗಿದೆ ಎಂಬುದನ್ನು ತಿಳಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ರಾಜ್ ನಾಥ್ ತಿಳಿಸಿದ್ದಾರೆ. ಉಗ್ರ ಚಟುವಟಿಕೆಗಳ ಸಂಬಂಧ ನಡೆಯುತ್ತಿರುವ ಪ್ರತಿ ಹಂತದ ತನಿಖೆಯ ವಿವರವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸುತ್ತಿರಬೇಕು. ಮುಂದೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೂ ಇದೇ ಬಗೆಯ ಪತ್ರ ಬರೆದು ಸೂಚನೆ ನೀಡಲಾಗುವುದು ಎಂದು ರಾಜ್ ನಾಥ್ ಸಿಂಗ್ ತಿಳಿಸಿದ್ದಾರೆ.